ಸೆ. 21ರಿಂದ ಶಾಲೆಗಳು ತೆರೆಯಲಿವೆ ಆದ್ರೆ ತರಗತಿ ಪ್ರಾರಂಭ ಇಲ್ಲ; ಸಚಿವ ಸುರೇಶ್​ ಕುಮಾರ್

18-09-20 01:52 pm       Mysore Reporter   ಕರ್ನಾಟಕ

ಇದೇ ಸೆಪ್ಟೆಂಬರ್ 21ರಿಂದ ಕೇವಲ ಶಾಲೆಗಳು ತೆರೆಯಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರು, ಸೆಪ್ಟೆಂಬರ್ 18: ಸೆಪ್ಟೆಂಬರ್‌ 21 ರಿಂದ ಶಾಲೆಗಳು ತೆರೆಯಲಿವೆ. ಆದರೆ, ತರಗತಿಗಳು ನಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಗುವವರೆಗೂ ತರಗತಿಗಳು ನಡೆಯುವುದಿಲ್ಲ. ಆದ್ದರಿಂದ ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕಿದೆ ಎಂದರು.

ಏನಾದರೂ ಸಮಸ್ಯೆ ಬಂದರೆ ತಾಲ್ಲೂಕು ಶಿಕ್ಷಣಾಧಿಕಾರಿ ಕ್ರಮಕೈಗೊಳ್ಳುತ್ತಾರೆ. ಹೀಗಾಗಿ, ಯಾವುದೇ ಸಮಸ್ಯೆ ಇದ್ದರೆ ಪೋಷಕರು ಬಿಇಒಗಳನ್ನು ಸಂಪರ್ಕಿಸಿ ಎಂದು ಹೇಳಿದರು.

ನಾನು ಹೋದ ಕಡೆಯಲ್ಲೆಲ್ಲ ಶಾಲೆ ಯಾವಾಗ ಶುರುವಾಗುತ್ತದೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ, ಪೋಷಕರು ಮಾತ್ರ ಆತಂಕದಲ್ಲಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಜವಾಬ್ದಾರಿ ನಮ್ಮ ಇಲಾಖೆಯದ್ದಾಗಿದೆ ಎಂದರು.

Join our WhatsApp group for latest news updates