ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ; ಎಂಟಿಬಿ, ಆರ್. ಶಂಕರ್ ಜೊತೆ ಅಂಗಾರ, ಸುನಿಲ್ ರೇಸಿನಲ್ಲಿ ! 

18-09-20 10:57 pm       Headline Karnataka News Network   ಕರ್ನಾಟಕ

ಸಿಎಂ ಯಡಿಯೂರಪ್ಪ ಕೊನೆಗೂ ಸಂಪುಟ ವಿಸ್ತರಣೆಗೆ ಪಕ್ಷದ ಹೈಕಮಾಂಡ್ ನಿಂದ ಅನುಮತಿ ಪಡೆದುಕೊಂಡಿದ್ದಾರೆ. 

ಬೆಂಗಳೂರು, ಸೆಪ್ಟಂಬರ್ 18: ದೆಹಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಕೊನೆಗೂ ಸಂಪುಟ ವಿಸ್ತರಣೆಗೆ ಪಕ್ಷದ ಹೈಕಮಾಂಡ್ ನಿಂದ ಅನುಮತಿ ಪಡೆದುಕೊಂಡಿದ್ದಾರೆ. 

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿರುವ ಯಡಿಯೂರಪ್ಪ ಸಂಪುಟ ವಿಸ್ತರಣೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಖಾಲಿಯಿರುವ ಆರು ಸಚಿವ ಸ್ಥಾನಗಳ ಪೈಕಿ ಐದನ್ನು ಭರ್ತಿ ಮಾಡಲು ಒಪ್ಪಿಗೆ ಪಡೆದಿದ್ದಾರೆ.‌ ಈ ಬಗ್ಗೆ ಐವರ ಹೆಸರಿನ ಲಿಸ್ಟ್ ಅನ್ನು ಕೂಡ ಹೈಕಮಾಂಡ್ ಬಳಿಗೆ ಒಯ್ದಿದ್ದರು ಎನ್ನಲಾಗ್ತಿದೆ. ಆದರೆ, ಐವರ ಪಟ್ಟಿಯಲ್ಲಿ ಮೂರು ಮಂದಿಯ ಹೆಸರನ್ನು ಮಾತ್ರ ಫೈನಲ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. 

ಕಳೆದ ಬಾರಿ ಸರಕಾರ ರಚನೆಗೆ ಕಾರಣವಾಗಿದ್ದ ಎಂ.ಟಿ.ಬಿ ನಾಗರಾಜ್, ಆರ್.ಶಂಕರ್ ಮತ್ತು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದ ಬೆಳಗಾವಿ ಮೂಲದ ಉಮೇಶ್ ಕತ್ತಿ ಹೆಸರನ್ನು ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನಿಬ್ಬರು ಸಚಿವ ಸ್ಥಾನಕ್ಕೇರುವ ಅದೃಷ್ಟವಂತರು ಯಾರು ಎನ್ನುವ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಅದು ಯಡಿಯೂರಪ್ಪ ಬಣ ಹೊರತುಪಡಿಸಿ ಇತರೇ ಪಕ್ಷ ನಿಷ್ಠರಿಗೆ ಒಲಿಯುವ ಸಾಧ್ಯತೆಯಿದೆ. ಇವರ ಹೆಸರನ್ನು ಸಿಎಂ ಹೊರತಾಗಿ ಹೈಕಮಾಂಡ್ ಸ್ವತಃ ಫೈನಲ್ ಮಾಡಲಿದೆ ಎನ್ನುವ ಮಾಹಿತಿ ಲಭಿಸಿದೆ. 

ಇದೇ ವೇಳೆ, ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆಗೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದ್ದು ಅದಕ್ಕಾಗಿ ಆರು ಮಂದಿಯನ್ನು ಸಂಪುಟದಿಂದ ಹೊರಗಿಟ್ಟು ಆಕಾಂಕ್ಷಿಗಳಿಗೆ ಸ್ಥಾನ ಕಲ್ಪಿಸಲು ಮುಂದಾಗಿದ್ದಾರೆ. ಈ ವಿಚಾರವನ್ನೂ ಪಕ್ಷದ ಹೈಕಮಾಂಡ್ ಬಳಿ ಚರ್ಚೆ ನಡೆಸಿದ್ದಾರೆ. ಅಲ್ಲದೆ, ವಿಧಾನಸಭೆ ಅಧಿವೇಶನಕ್ಕೂ ಮೊದಲೇ ಸಂಪುಟ ರಚನೆಗೆ ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ. ಹಾಗೊಂದು ವೇಳೆ ಆದರೆ ಭಾನುವಾರವೇ ಸಂಪುಟ ರಚನೆಯಾಗಲಿದೆ. 

ಇನ್ನು ಆರು ಮಂದಿಯ ಬದಲಾವಣೆ ಜೊತೆಗೆ ಸಂಪುಟ ರಚನೆಯಾದರೆ ಉಡುಪಿಯಿಂದ ಸುನಿಲ್ ಕುಮಾರ್, ದಕ್ಷಿಣ ಕನ್ನಡದಲ್ಲಿ ಹಿರಿಯ ಶಾಸಕ ಎಸ್. ಅಂಗಾರಗೆ ಸಚಿವ ಸ್ಥಾನ ಸಿಗುವುದು ಖಚಿತ. ಬದಲಾವಣೆ ಇಲ್ಲದಿದ್ದರೂ ಐವರ ಸೇರ್ಪಡೆ ಆಗೋದಿದ್ದರೂ ಮೂವರು ಮೂಲ ಬಿಜೆಪಿಗರಿಗೇ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಮೂಲ ಬಿಜೆಪಿಗರ ಪೈಕಿ ಉಡುಪಿ ಜಿಲ್ಲೆಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಥವಾ ಸುನಿಲ್ ಕುಮಾರ್ ಸಚಿವ ಸ್ಥಾನಕ್ಕೇರಲಿದ್ದಾರೆ ಎನ್ನಲಾಗ್ತಿದೆ. ಇದೇ ವೇಳೆ, ಡಿಸಿಎಂ ಸ್ಥಾನ ಬದಲಾಯಿಸಬೇಕೆಂಬ ಒತ್ತಡವೂ ಕೇಳಿಬಂದಿದೆ. ಶ್ರೀರಾಮುಲು ಮತ್ತು ರಮೇಶ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಸಂಪುಟ ಪುನಾರಚನೆಯಾದರೆ ಡಿಸಿಎಂ ಸ್ಥಾನಗಳೂ ಬದಲಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಇದೇನಿದ್ದರೂ ಸಂಪುಟ ಫೈನಲ್ ಇನ್ನು ಎರಡೇ ದಿನದಲ್ಲಿ ಅಂತಿಮ ಆಗೋದಂತೂ ಪಕ್ಕಾ..