ಸಂತೋಷ್ ಅಂತ್ಯಕ್ರಿಯೆ ; ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕೀಯ, ಬಿಜೆಪಿ ನಾಯಕರು ಬರದೆ ಅಂತ್ಯಕ್ರಿಯೆಗೆ ಬಿಡಲ್ಲ ಎಂದು ಹೈಡ್ರಾಮಾ ! ಕುಟುಂಬಸ್ಥರು- ನಾಯಕರ ನಡುವೆ ಕಿತ್ತಾಟ 

14-04-22 05:18 pm       HK Desk news   ಕರ್ನಾಟಕ

ಗುತ್ತಿಗೆದಾರ ಸಂತೋಷ್ ಪಾಟೀಲ್ ಶವದ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು ಯತ್ನಿಸಿದ್ದು ಸ್ಥಳದಲ್ಲಿ ಹೈಡ್ರಾಮಾ ನಡೆಸಲಾಗಿದೆ.

ಬೆಳಗಾವಿ, ಎ.14: ಗುತ್ತಿಗೆದಾರ ಸಂತೋಷ್ ಪಾಟೀಲ್ ಶವದ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು ಯತ್ನಿಸಿದ್ದು ಸ್ಥಳದಲ್ಲಿ ಹೈಡ್ರಾಮಾ ನಡೆಸಲಾಗಿದೆ. ಒಂದು ಹಂತದಲ್ಲಿ ಶಾಸಕಿ ಲಕ್ಷ್ಮೀ ನಿಂಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಹೈಡ್ರಾಮಾ ನಡೆಸಿದ್ದು, ಸ್ಥಳಕ್ಕೆ ಬಿಜೆಪಿ ನಾಯಕರು ಬರದೆ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ರಂಪ ಮಾಡಿದ್ದಾರೆ.

ಈ ವೇಳೆ, ಕಾಂಗ್ರೆಸ್ ನಾಯಕರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ, ಕಿತ್ತಾಟ ನಡೆದಿದೆ. ಕುಟುಂಬಸ್ಥರು ಬಳಿಕ ಕಾಂಗ್ರೆಸ್ ನಾಯಕರ ಮನವೊಲಿಸಿದ್ದು ಅಂತ್ಯಕ್ರಿಯೆ ನಡೆಸುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ, ಕಾಂಗ್ರೆಸ್ ಮುಖಂಡ ಅಡವೇಶ ಇಟಗಿ ಎಂಬವರು ಸ್ಥಳಕ್ಕೆ ಬಿಜೆಪಿ ನಾಯಕರು, ಉಸ್ತುವಾರಿ ಸಚಿವರು ಬರುವ ವರೆಗೆ ಮಣ್ಣು ಮಾಡಲು ಬಿಡಲ್ಲ. ಮಹಿಳೆಯರು, ಸಂಬಂಧಿಗಳು ಸ್ಥಳದಿಂದ ತೆರಳುವಂತೆ ಸೇರಿದ್ದ ಕುಟುಂಬಸ್ಥರಲ್ಲಿ ಹೇಳಿದ್ದಾರೆ.

ಸಂತೋಷ್ ಕುಟುಂಬದ ಒಬ್ಬರಿಗೆ ಸರಕಾರಿ ಕೆಲಸ ನೀಡಬೇಕು. ಸಂತೋಷ್ ಪಾಟೀಲ್ ನಿರ್ವಹಿಸಿದ ಕಾಮಗಾರಿಗೆ ನಾಲ್ಕು ಕೋಟಿ ಬಿಲ್ ಪಾವತಿ ಮಾಡಬೇಕು. ಕುಟುಂಬಸ್ಥರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸ್ಥಳಕ್ಕೆ ಬಂದು ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಸಂತೋಷ್ ಪಾಟೀಲ್ ಮಾವ ಮಹೇಶ ಭಾತೆ ಅವರು ಮನವೊಲಿಕೆ ಕಾರ್ಯ ನಡೆಸಿದ್ದು, ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡುವೆಯೇ ಜೆಸಿಬಿಯಲ್ಲಿ ಮಣ್ಣು ಮುಚ್ಚುವ ಕೆಲಸ ಮಾಡಲಾಗಿದೆ.

ಆನಂತರ ಕುಟುಂಬಸ್ಥರು ಬಲವಂತದಿಂದ ಕಾಂಗ್ರೆಸ್ ನಾಯಕರನ್ನು ಅಂತ್ಯಕ್ರಿಯೆ ಸ್ಥಳದಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ಕೆಲವರ ಅಸಮಾಧಾನ, ಆಕ್ರೋಶ, ಕುಟುಂಬಸ್ಥರ ಆಕ್ರಂದನದ ನಡುವೆ ಲಿಂಗಾಯತ ಸಂಪ್ರದಾಯದ ವಿಧಿ ಪ್ರಕಾರವೇ ಅಂತ್ಯಕ್ರಿಯೆ ನಡೆಸಲಾಗಿದೆ. ಕುಟುಂಬಸ್ಥರ ಪೈಕಿ ಒಂದಷ್ಟು ಮಂದಿ ಕಾಂಗ್ರೆಸ್ ಪ್ರತಿಭಟನೆ ಪರವಾಗಿದ್ದರೆ, ಇನ್ನೊಂದಷ್ಟು ಮಂದಿ ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು ಎನ್ನುತ್ತಾ ಕಾಂಗ್ರೆಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ತಮ್ಮ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಕೊನೆಯ ವರೆಗೂ ಸ್ಥಳದಲ್ಲಿದ್ದರು. ಪತ್ನಿ ಮತ್ತು ತಾಯಿ ಎರಡು ದಿನದಿಂದ ಅನ್ನ, ನೀರಿಲ್ಲದೆ ಇದ್ದು ಆ ಕಾರಣದಿಂದ ಅಂತ್ಯಕ್ರಿಯೆಗೆ ಅವಕಾಶ ಕೊಡುತ್ತಿದ್ದೇವೆ. ನಾವು ಕುಟುಂಬಕ್ಕೆ ನ್ಯಾಯ ದೊರಕಿಸದೆ ವಿರಮಿಸಲಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮನವೊಲಿಸಿ ಶವ ಕಳಿಸಿಕೊಟ್ಟಿದ್ದ ಉಡುಪಿ ಎಸ್ಪಿ

ಉಡುಪಿಯಲ್ಲಿ ಬುಧವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆದ ಬಳಿಕ ರಾತ್ರಿಯೇ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಕುಟುಂಬಸ್ಥರ ಜೊತೆಗೆ ಬೆಳಗಾವಿಗೆ ಕಳಿಸಿಕೊಡಲಾಗಿತ್ತು. ಮೃತದೇಹ ಒಯ್ಯಲ್ಲ ಎಂದು ಪಟ್ಟು ಹಿಡಿದಿದ್ದ ಸೋದರನನ್ನು ಉಡುಪಿ ಎಸ್ಪಿ ವಿಷ್ಣುವರ್ಧನ್ ಮನವೊಲಿಸಿ, ಶವವನ್ನು ಏಸಿ ಆಂಬುಲೆನ್ಸ್ ನಲ್ಲಿ ಕಳಿಸಿಕೊಟ್ಟಿದ್ದರು. ಗುರುವಾರ ನಸುಕಿನ ನಾಲ್ಕು ಗಂಟೆ ವೇಳೆಗೆ ಶವವನ್ನು ಸಂತೋಷ್ ಪಾಟೀಲ್ ಮನೆಗೆ ಕರೆತರಲಾಗಿತ್ತು. ಬಡಸಾ ಗ್ರಾಮಕ್ಕೆ ಬರುತ್ತಿದ್ದಂತೆ ನೂರಾರು ಗ್ರಾಮಸ್ಥರು, ಕುಟುಂಬಸ್ಥರು ಸ್ಥಳದಲ್ಲಿ ಸೇರಿದ್ದು ಕಣ್ಣೀರು ಹಾಕಿದ್ದಾರೆ. ಬೆಳಗ್ಗೆ 7.30ಕ್ಕೆ ಅಂತ್ಯಕ್ರಿಯೆ ನಡೆಸುವುದೆಂದು ನಿಶ್ಚಯಿಸಲಾಗಿತ್ತಾದರೂ, ಕಾಂಗ್ರೆಸ್ ಪ್ರತಿಭಟನೆ, ರಾಜಕೀಯ ನಡೆಸಿದ್ದರಿಂದಾಗಿ ವಿಳಂಬಗೊಂಡು 9.30ರ ವೇಳೆಗೆ ಅಂತ್ಯಕ್ರಿಯೆ ನಡೆಯಿತು.

Contractor Santhosh Patil who had previously accused RDPR Minister K. S. Eeshwarappa of demanding commission reportedly died by suicide and his final rites were conducted at his home village in Badase at Belagavi. The deceased's mortal remains were kept outside his residence in the village, while his family and fellow village residents performed the last rites and observed the funeral rituals. The Belagavi rural constituency MLA Laxmi Hebbalkar also paid her final respects to the mortal remains of Santhosh Patil, it is learned.