ರಾಜಿನಾಮೆ ನೀಡೋದೇ ಇಲ್ಲ ಎಂದಿದ್ದ ಈಶ್ವರಪ್ಪ ವರಸೆ ಬದಲಿಸಿದ್ದು ಹೇಗೆ ? ಪ್ರಧಾನಿ ಮೋದಿ, ಬಿ.ಎಲ್.ಸಂತೋಷ್ ಕರೆದು ಹೇಳಿದ್ದೇನು? ಕಾಂಗ್ರೆಸ್ ಚುನಾವಣಾಸ್ತ್ರಕ್ಕೆ ಈಶ್ವರಪ್ಪ ತಲೆದಂಡ !

14-04-22 08:55 pm       Bengaluru Correspondent   ಕರ್ನಾಟಕ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮುಂದಿಟ್ಟು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ, ದೇಶದ ಪ್ರಮುಖ ನಾಯಕರು ಬಿಜೆಪಿ ಸರಕಾರದ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಂತೆ ಬಿಜೆಪಿಯೊಳಗೆ ಥಂಡಿ ಹಾರಿದೆ.

ಬೆಂಗಳೂರು, ಎ.14: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮುಂದಿಟ್ಟು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ, ದೇಶದ ಪ್ರಮುಖ ನಾಯಕರು ಬಿಜೆಪಿ ಸರಕಾರದ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಂತೆ ಬಿಜೆಪಿಯೊಳಗೆ ಥಂಡಿ ಹಾರಿದೆ. ಯಾವುದೇ ಕಾರಣಕ್ಕೂ ರಾಜಿನಾಮೆ ನೀಡಲ್ಲ ಎಂದು ಹೇಳುತ್ತಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಒಂದೇ ದಿನದಲ್ಲಿ ವರಸೆ ಬದಲಿಸಿದ್ದಾರೆ. ಆದರೆ ಸ್ಥಾನ ಬಿಟ್ಟು ಕೊಡಲ್ಲ ಎಂದು ಪಟ್ಟು ಹಿಡಿದಿದ್ದ ಈಶ್ವರಪ್ಪ ಹಠಾತ್ ಮಾತು ಬದಲಿಸಲು ಹೈಕಮಾಂಡಿನಿಂದ ಬಂದ ಚಾಟಿಯೇ ಕಾರಣ ಎನ್ನಲಾಗುತ್ತಿದೆ.  

ರಾಜ್ಯದ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕದವರೇ ಆಗಿರುವ ಬಿ.ಎಲ್. ಸಂತೋಷ್ ಅವರಲ್ಲಿ ಮಾಹಿತಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಈಶ್ವರಪ್ಪ ಅವರಿಗೇ ಕರೆ ಮಾಡಿ ಮಾಹಿತಿ ಪಡೆದಿದ್ದ ಬಿ.ಎಲ್.ಸಂತೋಷ್, ಇಂದು ಮಧ್ಯಾಹ್ನ ಮೋದಿ ಬಳಿಗೆ ಮಾತುಕತೆಗೆ ಹೋಗಿದ್ದರು. ಇತ್ತ ಈಶ್ವರಪ್ಪ ಅವರನ್ನು ಇಡೀ ರಾಜ್ಯ ಸರಕಾರವೇ ಸಮರ್ಥಿಸಿಕೊಂಡಿದ್ದಲ್ಲದೆ, ರಾಜಿನಾಮೆ ಅಗತ್ಯವಿಲ್ಲ. ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಪ್ರಕರಣದಲ್ಲಿ ಆರೋಪಕ್ಕೀಡಾಗಿದ್ದ ಕೆ.ಜೆ. ಜಾರ್ಜ್ ಆಕೂಡಲೇ ರಾಜಿನಾಮೆ ನೀಡಿದ್ದರೇ ಎಂದು ರಾಜ್ಯ ಸರಕಾರದ ಪ್ರಮುಖ ಸಚಿವರು ಪ್ರಶ್ನೆ ಮಾಡಿದ್ದರು.

Karnataka Covid 19 clusters: CM Basavaraj Bommai calls emergency meeting-  The New Indian Express

ಅಲ್ಲದೆ, ಆತ್ಮಹತ್ಯೆ ಘಟನೆ ಬಗ್ಗೆ ತನಿಖೆ ನಡೆಯಲಿ, ಆನಂತರ ಏನು ಕ್ರಮ ಜರುಗಿಸಬೇಕೋ ಅದನ್ನು ಮಾಡುತ್ತೀವಿ ಎಂದು ಸಿಎಂ ಬೊಮ್ಮಾಯಿ ಅವರೂ ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾದಿಯಾಗಿ ರಾಜ್ಯ ಸರಕಾರದ ಹಿರಿಯ ಸಚಿವರೆಲ್ಲ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಲ್ಲದೆ, ಸುರ್ಜೇವಾಲಾ ಸರಣಿ ಟ್ವೀಟ್ ಮಾಡಿ ರಾಜ್ಯ ಸರಕಾರಕ್ಕೆ ಪ್ರಶ್ನೆಗಳನ್ನು ಹಾಕಿದ್ದು ರಾಜ್ಯ ಬಿಜೆಪಿ ಸರಕಾರವನ್ನು ತೀವ್ರ ಇರಿಸುಮುರಿಸಿಗೆ ಈಡು ಮಾಡಿತ್ತು.

ರಾಷ್ಟ್ರೀಯ ನೆಲೆಯಲ್ಲಿ ಕೇಂದ್ರದ ನಾಯಕರಿಗೂ ತಮ್ಮದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗುತ್ತಿಗೆದಾರ ರಾಷ್ಟ್ರ ಮಟ್ಟದ ನಾಯಕರಿಗೆ ದೂರು ಹೇಳಿ, ಹಿರಿಯ ಸಚಿವರೊಬ್ಬರ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದು ತೀವ್ರ ಮುಜುಗರ ತಂದಿತ್ತು. ಅಲ್ಲದೆ, ಒಂದೆಡೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಇಂತಹ ಬೆಳವಣಿಗೆ ಆಗಿರುವುದು ಬಿಜೆಪಿ ಸರಕಾರದ ಪಾಲಿಗೆ ತೀವ್ರ ಹಿನ್ನಡೆಯಾಗಿತ್ತು. ಹೀಗಾಗಿ ರಾಜ್ಯ ಸರಕಾರದ ಕಡೆಯಿಂದ ಯಾವುದೇ ಸಮರ್ಥನೆಗಳನ್ನು ನೀಡಿದರೂ ಕೇಂದ್ರದ ನಾಯಕರು ಅದನ್ನು ಕೇಳುವಂತಿರಲಿಲ್ಲ. ರಾಜ್ಯದ ಬೆಳವಣಿಗೆ ಬಗ್ಗೆ ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ, ತಮ್ಮ ಇಮೇಜಿಗೆ ಧಕ್ಕೆ ಬರುವ ಸಾಧ್ಯತೆಯನ್ನು ಮನಗಂಡು ಕೂಡಲೇ ಈಶ್ವರಪ್ಪ ರಾಜಿನಾಮೆ ಪಡೆಯುವಂತೆ ಪಕ್ಷಕ್ಕೆ ಸೂಚನೆ ನೀಡಿದ್ದಾರೆ. ಈ ಮಾಹಿತಿಯನ್ನು ಖುದ್ದು ಬಿ.ಎಲ್. ಸಂತೋಷ್ ಅವರೇ ಈಶ್ವರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಈಶ್ವರಪ್ಪ ನಾಳೆಯೇ ರಾಜಿನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ ಎನ್ನುವ ಮಾಹಿತಿಗಳಿವೆ.  

20% of Karnataka high court judges' posts vacant | Bengaluru News - Times  of India

ಕಾಂಗ್ರೆಸ್ ಚುನಾವಣಾಸ್ತ್ರದಿಂದ ತೀವ್ರ ಮುಜುಗರ  

ಹಿಜಾಬ್ ಸಂಘರ್ಷದ ಬಳಿಕ ಹೈಕೋರ್ಟ್ ಆದೇಶವೂ ಬಿಜೆಪಿ ಸರಕಾರದ ಪರವಾಗಿ ಬಂದಿದ್ದು ರಾಜಕೀಯವಾಗಿ ಪ್ಲಸ್ ಆಗಿತ್ತು. ಆನಂತರದ ಬೆಳವಣಿಗೆಯಿಂದಾಗಿ ರಾಜ್ಯದೆಲ್ಲೆಡೆ ಕೋಮು ಧ್ರುವೀಕರಣ ಆಗುವ ಸಾಧ್ಯತೆ ಕಂಡುಬಂದಿದ್ದರಿಂದ ರಾಜ್ಯದ ಕಾಂಗ್ರೆಸ್ ನಾಯಕರು ತೀವ್ರ ಚಿಂತೆಗೆ ಒಳಗಾಗಿದ್ದರು. ಒಂದೆಡೆ ಮುಸ್ಲಿಮರ ಸಿಂಪತಿ ಗಿಟ್ಟಿಸಲು ಎಸ್ಡಿಪಿಐ, ಜೆಡಿಎಸ್ ಮುಂದಾಗಿದ್ದರೆ, ಕಾಂಗ್ರೆಸ್ ಅತ್ತ ದರಿ ಇತ್ತ ಪುಲಿ ಎನ್ನುವ ಅಡಕತ್ತರಿಯಲ್ಲಿ ಸಿಲುಕಿತ್ತು. ಹಿಜಾಬ್ ಬಗ್ಗೆ ಸಮರ್ಥನೆಯನ್ನೂ ಮಾಡಲಾಗದೆ ಒದ್ದಾಟ ಅನುಭವಿಸಿತ್ತು. ಆದರೆ ಆ ರೀತಿಯ ಸನ್ನಿವೇಶದ ಬೆನ್ನಲ್ಲೇ ಬಿಜೆಪಿ ಸರಕಾರದ ಹಿರಿಯ ಸಚಿವ ಈಶ್ವರಪ್ಪ ಹೆಸರೇಳಿ ಗುತ್ತಿಗೆದಾರನೊಬ್ಬ ಸಾವಿಗೆ ಶರಣಾಗಿದ್ದು ಕಾಂಗ್ರೆಸಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು. ಇಡೀ ರಾಜ್ಯದಲ್ಲಿ ಜನರು ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆಯೇ ಮಾತಾಡುವಂತಾಗಿತ್ತು. ನಿದ್ದೆಗೆ ಜಾರಿದ್ದ ಕಾಂಗ್ರೆಸ್ ನಾಯಕರು ಒಮ್ಮೆಲೇ ಮೈಕೊಡವಿಕೊಂಡು ಎದ್ದು ನಿಂತಿದ್ದರು.

Contractor who raised graft allegation against Karnataka minister found  dead | Bangalore news

ಮೇಲಾಗಿ ಸಾವು ಕಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ರಾಜ್ಯದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಮತ ಕಳಕೊಳ್ಳುವ ಭೀತಿಗೂ ಬಿಜೆಪಿ ಒಳಗಾಗಿತ್ತು. ವಿವಾದ ಹೊರ ಬರುತ್ತಲೇ ಚುನಾವಣಾ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಈಶ್ವರಪ್ಪ ವಿರುದ್ಧ ಘೀಳಿಡುತ್ತಾ ರಾಜ್ಯದಾದ್ಯಂತ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆಗೆ ಮುಂದಾಗಿತ್ತು. ಈ ರೀತಿಯ ಬೆಳವಣಿಗೆಯಿಂದ ಚುನಾವಣಾ ವರ್ಷದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗುತ್ತಿರುವುದನ್ನು ಮನಗಂಡ ಕೇಂದ್ರ ನಾಯಕರು, ಈಶ್ವರಪ್ಪ ಅನ್ನುವ ಕಾಂಗ್ರೆಸ್ ಪಾಲಿನ ಅಸ್ತ್ರವನ್ನು ಜುಟ್ಟು ಹಿಡಿದು ಜಗ್ಗಾಡುವ ಬದಲು ಗಾಳಿಗೆ ತೂರಲು ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಕ್ಕೆ ಅಸ್ತ್ರವಾಗುವ ಬದಲು ಈಶ್ವರಪ್ಪ ರಾಜಿನಾಮೆ ಪಡೆದು ಇಡೀ ವಿವಾದಕ್ಕೆ ಮಸುಕು ಎಳೆಯೋದು ಲೇಸು ಎನ್ನುವ ಚಾಣಾಕ್ಷ ನಡೆಗೆ ಕೇಂದ್ರ ನಾಯಕರು ಬಂದಿದ್ದಾರೆ. ವಿವಾದದ ಹಿಂದಿನ ಅಸಲಿ ವಿಚಾರ ಏನೇ ಇದ್ದರೂ, ಪ್ರತಿಪಕ್ಷಕ್ಕೆ ಆಹಾರ ಆಗುವುದು ಬೇಡ ಎಂದು ಬೀಸೋ ದೊಣ್ಣೆಯಿಂದ ಪಾರಾಗುವಂತೆ ಸೂಚನೆ ನೀಡಿದ್ದಾರೆ.

How did Minister Eshwarappa resign suddenly, was it a pressure from BJP high command. Karnataka Minister K S Eshwarappa, who is facing charges of abetment to suicide in connection with the death of a civil contractor in Udupi, on Thursday announced stepping down from his position, ending days of defiance. Eshwarappa would tender his resignation letter to Chief Minister Basavaraj Bommai on Friday. The announcement comes a day after he was named in the FIR registered in connection with the death of Santosh K Patil, who had charged Eshwarappa with corruption.