ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ಬೇಕಲ, ಕುಂಬಳೆಯಲ್ಲಿ ದುಷ್ಕೃತ್ಯ ಪತ್ತೆ

26-08-22 02:33 pm       HK News Desk   ದೇಶ - ವಿದೇಶ

ಕರ್ನಾಟಕದ ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿಸಲು ಭಾರೀ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದಿದೆ. ರೈಲು ಹಳಿಯ ಮೇಲೆ ಕಾಂಕ್ರೀಟ್ ಸ್ಲಾಬ್, ಕಬ್ಬಿಣದ ಸಲಾಕೆ ಇರಿಸಿ ರೈಲನ್ನು ಉರುಳಿಸಲು ಸಂಚು ಹೆಣೆದಿರುವುದು ಪತ್ತೆಯಾಗಿದೆ.

ಕಾಸರಗೋಡು, ಆಗಸ್ಟ್ 26: ಕರ್ನಾಟಕದ ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿಸಲು ಭಾರೀ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದಿದೆ. ರೈಲು ಹಳಿಯ ಮೇಲೆ ಕಾಂಕ್ರೀಟ್ ಸ್ಲಾಬ್, ಕಬ್ಬಿಣದ ಸಲಾಕೆ ಇರಿಸಿ ರೈಲನ್ನು ಉರುಳಿಸಲು ಸಂಚು ಹೆಣೆದಿರುವುದು ಪತ್ತೆಯಾಗಿದೆ.

ಕಾಸರಗೋಡು ಜಿಲ್ಲೆಯ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆ ಎಂಬಲ್ಲಿ ಕಿಡಿಗೇಡಿಗಳು ರೈಲು ಹಳಿ ತಪ್ಪಿಸಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದಾರೆ. ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂಭಾಗದ ರೈಲು ಹಳಿಯಲ್ಲಿ 35 ಕಿಲೋ ತೂಕದ ಕಾಂಕ್ರೀಟ್ ಸ್ಲಾಬನ್ನು ಇಟ್ಟು ಅದಕ್ಕೆ ಕಬ್ಬಿಣದ ಸಲಾಕೆಯನ್ನು ರೈಲು ಹಳಿಗೆ ಅಡ್ಡ ಇಟ್ಟಿರುವುದು ಪತ್ತೆಯಾಗಿದೆ. ಆಗಸ್ಟ್ 21ರಂದು ರೈಲ್ವೇ ಹಳಿಯ ಗಾರ್ಡ್‌ ಗಳು ಪರಿಶೀಲನೆ ನಡೆಸುತ್ತಿದ್ದಾಗ ಹಳಿ ತಪ್ಪಿಸಲು ನಡೆಸಿದ್ದ ಷಡ್ಯಂತ್ರ ಪತ್ತೆಯಾಗಿದ್ದು, ಸಿಬಂದಿಯ ಸಮಯಪ್ರಜ್ಞೆಯಿಂದ ರೈಲು ದುರಂತ ತಪ್ಪಿದೆ.

ಇದಲ್ಲದೆ, ಕುಂಬಳೆ ರೈಲು ನಿಲ್ದಾಣದ 400 ಮೀಟರ್‌ ದೂರದಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಮಂಗಳೂರು-ಚೆನ್ನೈ ಸೂಪರ್‌ ಫಾಸ್ಟ್‌ ರೈಲು ಸಂಚರಿಸುವ ಕೆಲವೇ ಹೊತ್ತಿನ ಮೊದಲು ಹಳಿಯಲ್ಲಿ ಉದ್ದಕ್ಕೆ ಕಲ್ಲುಗಳನ್ನು ಇಟ್ಟಿರುವುದು ಪತ್ತೆಯಾಗಿದ್ದು, ಕಿಡಿಗೇಡಿಗಳು ರೈಲನ್ನು ಉರುಳಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ ಅನ್ನುವ ಶಂಕೆ ಪೊಲೀಸರಿಗೆ ಮೂಡಿದೆ. ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್‌), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಗಸ್ಟ್ 19ರಂದು ಕಾಸರಗೋಡು ಸಮೀಪದ ಚಿತ್ತಾರಿ ಎಂಬಲ್ಲಿ ಕೊಯಮತ್ತೂರು-ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಹೀಗಾಗಿ ಕರ್ನಾಟಕ ಗಡಿಭಾಗದ ಕಾಸರಗೋಡಿನಲ್ಲಿ ವಿಧ್ವಂಸಕ ‌ಕೃತ್ಯ ಎಸಗಲು ಸಂಚು ರೂಪಿಸಿರುವುದು ಕಂಡುಬಂದಿದ್ದು, ಉತ್ತರ ವಲಯ ರೈಲ್ವೇ ಪೊಲೀಸ್ ಡಿವೈಎಸ್ಪಿ ಕೆ.ಎನ್.ರಾಧಾಕೃಷ್ಣನ್ ನೇತೃತ್ವದಲ್ಲಿ ತನಿಖೆ ನಡೆದಿದೆ.

Comprehensive investigation has begun under the leadership of K N Radhakrishnan, DySP of north zone of railway department in the wake of stones and huge concrete blocks being placed on the railways tracks at various parts of the district.