ಅಡೂರಿನ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿ ; ಕೇರಳ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ, ತಕ್ಷಣವೇ ಕನ್ನಡ ಶಿಕ್ಷಕಿ ನೇಮಕಕ್ಕೆ ಆದೇಶ 

25-08-23 02:53 pm       HK News Desk   ದೇಶ - ವಿದೇಶ

ಅಡೂರಿನ ಕನ್ನಡ ಶಾಲೆಗೆ ಮಲಯಾಳ ಶಿಕ್ಷಕಿ ನೇಮಕ ಮಾಡಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ ನೀಡಿದೆ.‌ ತಕ್ಷಣವೇ ಕನ್ನಡ ತಿಳಿದ ಶಿಕ್ಷಕರನ್ನು ನೇಮಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ. 

ಕಾಸರಗೋಡು, ಆಗಸ್ಟ್ 25: ಅಡೂರಿನ ಕನ್ನಡ ಶಾಲೆಗೆ ಮಲಯಾಳ ಶಿಕ್ಷಕಿ ನೇಮಕ ಮಾಡಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ ನೀಡಿದೆ.‌ ತಕ್ಷಣವೇ ಕನ್ನಡ ತಿಳಿದ ಶಿಕ್ಷಕರನ್ನು ನೇಮಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ. 

ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಅಡೂರು ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಎರಡು ತಿಂಗಳ ಹಿಂದೆ ಮಲಯಾಳಂ ಶಿಕ್ಷಕಿಯೊಬ್ಬರನ್ನು ನೇಮಕ ಮಾಡಲಾಗಿತ್ತು. ಸಮಾಜ ವಿಜ್ಞಾನ ಕಲಿಸಲು ಮಲಯಾಳ ಮಾತ್ರ ಗೊತ್ತಿದ್ದ ಶಿಕ್ಷಕಿಯ‌ನ್ನು ನೇಮಿಸಿದ್ದಕ್ಕೆ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದ್ದರು. ಇದೇ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇರಳದ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕನ್ನಡ ಶಿಕ್ಷಕಿಯನ್ನೇ ನೇಮಕ ಮಾಡುವಂತೆ ಕೇಳಿಕೊಂಡಿತ್ತು. ಕನ್ನಡ ಸಂಘಟನೆಗಳು ಮತ್ತು ಪೋಷಕರ ಮನವಿಯನ್ನು ಕೇರಳ ಸರ್ಕಾರ ಕ್ಯಾರ್ ಮಾಡದ ಕಾರಣ ಪೋಷಕರ ಪರವಾಗಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. 

ಎರಡು ತಿಂಗಳಿನಿಂದ ನಿರಂತರ ಪ್ರತಿಭಟನೆ, ಕೋರ್ಟ್ ಹೋರಾಟ ನಡೆಸಿದ್ದ ಪೋಷಕರಿಗೆ ಹೈಕೋರ್ಟಿನಲ್ಲಿ ಕಡೆಗೂ ಜಯ ಸಿಕ್ಕಿದೆ. ಕೇರಳ ಸರ್ಕಾರ‌ದ ಶಿಕ್ಷಣ ಇಲಾಖೆಗೆ ಉಚ್ಛ ನ್ಯಾಯಾಲಯ ಚಾಟಿ ಬೀಸಿದ್ದು ತಕ್ಷಣವೇ ಕನ್ನಡ ಬಲ್ಲ ಶಿಕ್ಷಕರ ನೇಮಿಸುವಂತೆ ಆದೇಶ ಮಾಡಿದೆ. ಕನ್ನಡ ಶಾಲಾ ಮಕ್ಕಳಿಗೆ ಮಲಯಾಳಿ ಶಿಕ್ಷಕಿಯನ್ನು ನೇಮಿಸಿ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅನ್ಯಾಯ ಎಸಗಲಾಗಿದೆ. ಗಡಿಭಾಗ ಕಾಸರಗೋಡು ಜಿಲ್ಲೆಯ ಹಲವೆಡೆ ಕನ್ನಡ ಶಾಲೆಗಳಲ್ಲಿ ಇದೇ ರೀತಿ ಮಲಯಾಳ ಶಿಕ್ಷಕರನ್ನು ನೇಮಿಸಿ ಅನ್ಯಾಯ ಎಸಗಿದ್ದಾಗಿ ಪೋಷಕರ ಕಡೆಯ ವಕೀಲರು ವಾದ ಮಂಡಿಸಿದ್ದರು. ವಾದ ಪುರಸ್ಕರಿಸಿದ ಕೇರಳ ಹೈಕೋರ್ಟ್, ಕನ್ನಡ ಶಾಲೆಗಳ ಪ್ರಾತಿನಿಧ್ಯವನ್ನು ಎತ್ತಿಹಿಡಿದಿದ್ದು ಒಂದು ತಿಂಗಳ ಒಳಗೆ ಅಡೂರು ಶಾಲೆಗೆ ಕನ್ನಡ ಬಲ್ಲ ಶಿಕ್ಷಕಿಯನ್ನೇ ನೇಮಕ ಮಾಡುವಂತೆ ಆದೇಶ ಮಾಡಿದೆ. 

ಈ ಹಿಂದೆ ಉದುಮ, ಹೊಸದುರ್ಗದಲ್ಲಿಯೂ ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ನೇಮಿಸಿ ಕನ್ನಡ ಭಾಷಿಗರನ್ನು ಹತ್ತಿಕ್ಕುವ ಕೆಲಸ ಮಾಡಲಾಗಿತ್ತು. ಈಗ ಅಲ್ಲಿನ ಶಾಲೆಗಳಿಗೂ ಇದೇ ಆದೇಶ ಅನ್ವಯ ಆಗುವಂತೆ ಪೋಷಕರು ವಾದ ಮಂಡಿಸಿದ್ದಾರೆ. ಆ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಕೇಳಿ ಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆಯಿದೆ.

Kasargod Adoor government school appoints Malayalam teacher, high court slams kerala government, orders for kannada teacher.