PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲಿಂ ಭೇದ ಮಾಡಿಲ್ಲ, ಹಾಗೊಂದ್ವೇಳೆ ಮಾಡಿದರೆ, ಸಾರ್ವಜನಿಕ ಜೀವನದಲ್ಲಿರಲು ಯೋಗ್ಯನಲ್ಲ ; ಪ್ರಧಾನಿ ಮೋದಿ

15-05-24 02:05 pm       HK News Desk   ದೇಶ - ವಿದೇಶ

ನಾನು ಯಾವತ್ತೂ ಹಿಂದು- ಮುಸ್ಲಿಂ ಅಂತ ಭೇದ ಮಾಡಿಲ್ಲ. ಹಾಗೊಂದ್ವೇಳೆ, ಹಿಂದು – ಮುಸ್ಲಿಂ ಭೇದ ಮಾಡಿದರೆ, ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಯೋಗ್ಯನಲ್ಲ ಎಂದು ಭಾವಿಸುತ್ತೇನೆ.

ನವದೆಹಲಿ, ಮೇ.15: ನಾನು ಯಾವತ್ತೂ ಹಿಂದು- ಮುಸ್ಲಿಂ ಅಂತ ಭೇದ ಮಾಡಿಲ್ಲ. ಹಾಗೊಂದ್ವೇಳೆ, ಹಿಂದು – ಮುಸ್ಲಿಂ ಭೇದ ಮಾಡಿದರೆ, ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಯೋಗ್ಯನಲ್ಲ ಎಂದು ಭಾವಿಸುತ್ತೇನೆ. ಇದು ನನ್ನ ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಒಂದರಲ್ಲಿ ಹೇಳಿರುವ ವಿಡಿಯೋವನ್ನು ಮೋದಿ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜನರ ಬಳಿಯಿರುವ ಚಿನ್ನದ ಸಂಪತ್ತನ್ನು ಹೆಚ್ಚು ಮಕ್ಕಳಿದ್ದವರಿಗೆ ಹಂಚುತ್ತದೆ ಎಂದು ಹೇಳಿರುವುದು ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ರೀತಿ ಬಿಂಬಿತವಾಗಿತ್ತು. ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಇತ್ತೀಚೆಗೆ ನ್ಯೂಸ್ 18 ವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕನ್ನು ಮೋದಿ ತನ್ನ ಟ್ವಿಟರ್ ನಲ್ಲಿ ಹಂಚಿದ್ದು, ಅದರಲ್ಲಿ ನಾನೆಂದೂ ಹಿಂದು –ಮುಸ್ಲಿಂ ಎಂದು ಭೇದ ಮಾಡಿಲ್ಲ. ನಾನೆಂದಿಗೂ ತುಷ್ಟೀಕರಣ ರಾಜಕೀಯ ಮಾಡಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುವುದೇ ನನ್ನ ನಂಬಿಕೆ ಎಂದು ಹೇಳಿದ್ದಾರೆ.

ನಾನು ಯಾವತ್ತೂ ಮುಸ್ಲಿಂ ಎಂದು ಉಲ್ಲೇಖಿಸಿ ಭಾಷಣ ಮಾಡಿಲ್ಲ. ಹೆಚ್ಚು ಮಕ್ಕಳಿದ್ದವರಿಗೆ ಸಂಪತ್ತನ್ನು ಹಂಚುತ್ತಾರೆ ಎಂದಿದ್ದೇನೆ. ನೀವು ಯಾಕೆ ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಅನ್ನುತ್ತೀರಿ. ಬಡವರು, ಅನಕ್ಷರಸ್ಥರು ಇರುವ ಎಲ್ಲ ಕಡೆಯೂ ಈ ಸ್ಥಿತಿ ಇದೆ. ಎಲ್ಲಿ ಬಡತನ ಇದೆಯೋ ಅಲ್ಲಿ ಹೆಚ್ಚು ಮಕ್ಕಳ ಸಮಸ್ಯೆ ಇದೆ. ನಾನು ಹಿಂದು- ಮುಸ್ಲಿಂ ಅಂತ ಉಲ್ಲೇಖ ಮಾಡಿಯೇ ಇಲ್ಲ. ಹೆಚ್ಚು ಮಕ್ಕಳಿರುವಲ್ಲಿ ತುಷ್ಟೀಕರಣ ಮಾಡುತ್ತಾರೆ ಎಂದಿದ್ದೇನೆ. ಹಾಗೆಂದು ಮಕ್ಕಳ ಬಗ್ಗೆ ಸರಕಾರಕ್ಕೆ ಕರುಣೆ ಇಲ್ಲ ಎಂದು ಭಾವಿಸಬೇಡಿ ಎಂದರು.  

ಗೋಧ್ರಾ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, 2002ರ ಬಳಿಕ ನನ್ನನ್ನು ಮುಸ್ಲಿಂ ವಿರೋಧಿ ಎನ್ನುವಂತೆ ಬಿಂಬಿಸತೊಡಗಿದರು. ಇಲ್ಲಿ ಯಾರು ಮೋದಿಯನ್ನು ಸಪೋರ್ಟ್ ಮಾಡುತ್ತಾರೆ ಅಂಥ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಗುರಿಯಿತ್ತು. ಅವರನ್ನು ಎತ್ತಿ ಕಟ್ಟುವುದಕ್ಕಾಗಿ ಮುಸ್ಲಿಂ ವಿರೋಧಿಯೆಂದು ಬಿಂಬಿಸುತ್ತಿದ್ದರು. ನನ್ನ ಮನೆಯಲ್ಲಿ ಈದ್ ಹಬ್ಬವನ್ನು ಆಚರಿಸುತ್ತಾರೆ. ಈದ್ ದಿನ ನಮ್ಮ ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲ. ಆಸುಪಾಸಿನ ಮುಸ್ಲಿಂ ಕುಟುಂಬಸ್ಥರೇ ಅಂದು ನಮಗೆ ಆಹಾರ ಪೂರೈಸುತ್ತಾರೆ. ಮೊಹರ್ರಂ ಹಬ್ಬವನ್ನೂ ಹಾಗೆಯೇ ಆಚರಿಸುತ್ತೇವೆ. ಅಂಥ ವಾತಾವರಣದಲ್ಲಿ ನಾನು ಬೆಳೆದು ಬಂದಿದ್ದೇನೆ. ಇವತ್ತಿಗೂ ನನ್ನ ಅನೇಕ ಗೆಳೆಯರು ಮುಸ್ಲಿಮರಿದ್ದಾರೆ.

ಈ ಬಾರಿ ದೇಶದ ಎಲ್ಲ ಜನರು ನನಗೆ ಮತ ನೀಡಲಿದ್ದಾರೆಂಬ ವಿಶ್ವಾಸ ಇದೆ. ಅದರಲ್ಲಿ ಹಿಂದು- ಮುಸ್ಲಿಂ ಎಂದು ಭೇದ ಮಾಡುವುದಿಲ್ಲ. ಹಿಂದು – ಮುಸ್ಲಿಂ ಅಂತ ವಿಭಜನೆ ಮಾಡಿದ ದಿನ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಅಂತ ಭಾವಿಸುತ್ತೇನೆ. ಯಾವತ್ತೂ ಆ ರೀತಿಯ ಭಾವನೆಯನ್ನು ನಾನು ಹೊಂದಿರುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಈ ಹಿಂದೆ ಅಧಿಕಾರದಲ್ಲಿದ್ದವರು ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಮೊದಲ ಅಧಿಕಾರ ಎಂದಿದ್ದರು. ಅದರರ್ಥ, ಅವರು ಈ ದೇಶದ ಸಂಪತ್ತನ್ನು ಯಾರಿಗೆ ಹಂಚಲು ಬಯಸಿದ್ದಾರೆ ಎನ್ನುವುದು ತಿಳಿಯುತ್ತದೆ. ಯಾರಿಗೆ ಹೆಚ್ಚು ಮಕ್ಕಳಿದ್ದಾರೋ, ನುಸುಳುಕೋರರು ಯಾರಿದ್ದಾರೋ ಅವರಿಗೆ ಸಂಪತ್ತನ್ನು ನೀಡಲು ಬಯಸಿದ್ದಾರೆ. ನೀವು ಕಷ್ಟ ಪಟ್ಟು ಗಳಿಸಿದ ಸಂಪತ್ತನ್ನು ಹಂಚಿದರೆ ಒಪ್ಪುತ್ತೀರಾ ಎಂದು ರಾಜಸ್ಥಾನದಲ್ಲಿ ಮೋದಿ ಭಾಷಣ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್, ಸಿಪಿಎಂ ಪಕ್ಷಗಳು ಈ ಬಗ್ಗೆ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

Maintaining that he believes “people of my country will vote for me”, Prime Minister Narendra Modi said Tuesday “the day I do Hindu-Muslim, I will be unworthy of public life” and “it is my resolve” that “I will not do Hindu-Muslim”.