ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್ ಡಿಕ್ಕಿಯಾಗಿ ಬ್ಯಾಂಕ್ ಸಿಬಂದಿ ಯುವತಿ ಸಾವು, ಸವಾರ ಪರಾರಿ!

17-02-26 10:33 pm       HK News Desk   ಕರ್ನಾಟಕ

ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್‌ ಯುವತಿಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟ ಘಟನೆ ನಗರದ ರಾಜ್ ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ನಡೆದಿದೆ.

ಬೆಂಗಳೂರು, ಫೆ 17: ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್‌ ಯುವತಿಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟ ಘಟನೆ ನಗರದ ರಾಜ್ ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

27 ವರ್ಷದ ಯೋಗೇಶ್ವರಿ ಮೃತ ಯುವತಿ. ಮೃತ ಯೋಗೇಶ್ವರಿ ಕೆಂಪೇಗೌಡ ಲೇಔಟ್ ನಿವಾಸಿಯಾಗಿದ್ದು, ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇತ್ತ ಯುವತಿ ಕೂಡ ವೇಗವಾಗಿ ಬಂದು ರಸ್ತೆ ದಾಟಲು ಮುಂದಾಗಿದ್ದಾಳೆ. ಅತ್ತ ಬೈಕ್‌ ಸವಾರ ಕೂಡ ಸಾಕಷ್ಟು ವೇಗವಾಗಿ ಬರುತ್ತಿದ್ದು ಸ್ಪೀಡ್ ಹೆಚ್ಚಾಗಿದ್ದರಿಂದ ಯುವತಿ ಹಾಗೂ ಬೈಕ್‌ ಸವಾರ ಇಬ್ಬರು ರಸ್ತೆ ಮೇಲೆ ಹಾರಿ ಬಿದ್ದಿದ್ದಾರೆ. ಅಪಘಾತದಲ್ಲಿ ಬೈಕ್‌ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆತ ತಕ್ಷಣವೇ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಆಂಬ್ಯುಲೆನ್ಸ್ ಕರೆಸಿ ಯುವತಿಯನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. 

ರಾಜಾಜಿನಗರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವುದು ದೃಢಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್ ಸವಾರನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ಸವಾರನ ಗುರುತು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ದುರ್ಘಟನೆಯಿಂದ ಯೋಗೇಶ್ವರಿ ಕುಟುಂಬ ಆಘಾತಕ್ಕೊಳಗಾಗಿದ್ದು, ರಸ್ತೆಗಳಲ್ಲಿ ವೇಗ ನಿಯಂತ್ರಣ ಹಾಗೂ ಕಾಲ್ನಡಿಗರ ಸುರಕ್ಷತೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಘಟನೆಯು ನಗರದಲ್ಲಿ ಕಾಲ್ನಡಿಗರ ಭದ್ರತೆ ಕುರಿತು ಮತ್ತೆ ಆತಂಕ ಮೂಡಿಸಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ವೇಗ ನಿಯಂತ್ರಣ ಪಾಲಿಸಬೇಕು ಹಾಗೂ ರಸ್ತೆ ದಾಟುವವರು ಎಚ್ಚರಿಕೆಯಿಂದ ಸಂಚರಿಸಬೇಕು ಎಂಬ ಎಚ್ಚರಿಕೆ ಮತ್ತೆ ಮೆರೆಯುತ್ತಿದೆ. ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.