‘ನೈಜ ಸೇವಕ ಅಹಂಕಾರಿ ಆಗಿರಲ್ಲ’ ಎಂದಿದ್ದು ಮೋದಿ, ಬಿಜೆಪಿಗೆ ಅಲ್ಲ, ಆ ರೀತಿ ತಪ್ಪಾಗಿ ಅರ್ಥೈಸಿದ್ದಾರೆ ; ಭಾಗವತ್ ಹೇಳಿಕೆಯ ಬಗ್ಗೆ ಸಂಘದ ನಾಯಕರ ಸ್ಪಷ್ಟನೆ

15-06-24 06:23 pm       HK News Desk   ದೇಶ - ವಿದೇಶ

ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ನೀಡಿರುವ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾದ ಬೆನ್ನಲ್ಲೇ ಸಂಘಟನೆಯ ನಾಯಕರು ತೇಪೆ ಹಚ್ಚುವ ಯತ್ನ ಮಾಡಿದ್ದಾರೆ.

ನವದೆಹಲಿ, ಜೂನ್ 15: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ನೀಡಿರುವ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾದ ಬೆನ್ನಲ್ಲೇ ಸಂಘಟನೆಯ ನಾಯಕರು ತೇಪೆ ಹಚ್ಚುವ ಯತ್ನ ಮಾಡಿದ್ದಾರೆ. ಭಾಗವತ್ ಅವರು ನಿಜವಾದ ಸೇವಕ ಅಹಂಕಾರಿಯಾಗಿರುವುದಿಲ್ಲ ಎಂದು ಹೇಳಿರುವುದು ಪ್ರಧಾನಿ ಮೋದಿ ಅಥವಾ ಬಿಜೆಪಿಯನ್ನು ಉದ್ದೇಶಿಸಿ ಅಲ್ಲ ಎಂದು ಸಂಘದ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದಲ್ಲದೆ, ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿಕೆಯ ಬಗ್ಗೆ ಅದು ಅವರ ವೈಯಕ್ತಿಕ ಹೇಳಿಕೆ. ಸಂಘಟನೆಯದ್ದಲ್ಲ ಎಂದೂ ಸಂಘದ ಹಿರಿಯ ನಾಯಕರು ಹೇಳಿದ್ದಾಗಿ ಇಂಡಿಯಾ ಟುಡೇ, ದಿ ಪ್ರಿಂಟ್, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿವೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜೂನ್ 10ರಂದು ನಾಗಪುರದಲ್ಲಿ ನಡೆದ ಸಭೆಯಲ್ಲಿ ನೈಜ ಸೇವಕರು ತನ್ನ ಕೆಲಸದ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ ವಿನಾ ಅಹಂಕಾರ ಹೊಂದಿರುವುದಿಲ್ಲ ಎಂದು ಟಾಂಗ್ ನೀಡುವ ರೀತಿ ಹೇಳಿಕೆ ನೀಡಿದ್ದರು.

ಭಾಗವತ್ ಅವರ ಹಿಂದಿನ ಮಾತುಗಳನ್ನು ಗಮನಿಸಿದರೆ, ನಾವದನ್ನು ಮೂರು ವಿಷಯಗಳಾಗಿ ವಿಭಜಿಸಬಹುದು. ಒಂದು ಸಂಘದ ದೃಷ್ಟಿಕೋನ ಏನಿದೆ ಎನ್ನುವುದು. ಮತ್ತೊಂದು ಸ್ವಯಂಸೇವಕನಲ್ಲಿ ಸಂಘ ಏನು ಅಪೇಕ್ಷೆ ಪಡುತ್ತದೆ ಎನ್ನುವುದು. ಈ ದೃಷ್ಟಿಯಿಂದ ನೋಡಿದರೆ, ಸಂಘದ ಸೇವಕರಾದವರು ಅಹಂಕಾರ ಹೊಂದಿರಬಾರದು ಎಂಬುದನ್ನಷ್ಟೆ ಸೂಚಿಸುತ್ತದೆ. 2014, 2019ರ ಚುನಾವಣೆ ಬಳಿಕ ಭಾಗವತ್ ಹೇಳಿಕೆ ನೋಡಿದರೆ ಹೆಚ್ಚಿನ ವ್ಯತ್ಯಾಸ ಇದ್ದಂತೆ ಇಲ್ಲ. ಅಹಂಕಾರ ಎಂಬ ಪದ ಬಳಸಿದ್ದು ಮೋದಿ ಅಥವಾ ಬಿಜೆಪಿ ನಾಯಕರಿಗೆ ಅಲ್ಲ. ಆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದು ಇದರಿಂದ ತಪ್ಪು ಸಂದೇಶ ಹೋಗುವಂತಾಗಿದೆ. ಇದರಿಂದ ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಭಿನ್ನತೆ ಇರುವಂತೆ ತೋರಿಸಿದೆ ಎಂದು ಆರೆಸ್ಸೆಸ್ ಪ್ರಮುಖರೊಬ್ಬರ ಮಾತುಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್, ಅಹಂಕಾರ ತೋರಿಸಿದ ಕಾರಣಕ್ಕೆ ಬಿಜೆಪಿಯನ್ನು 240ಕ್ಕೆ ರಾಮನೇ ತಡೆದುಬಿಟ್ಟ ಎಂದು ಹೇಳಿದ್ದೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘದ ಹಿರಿಯರೊಬ್ಬರು, ಅದನ್ಯಾಕೆ ನೀವು ಆರೆಸ್ಸೆಸ್ ಜೊತೆಗೆ ಲಿಂಕ್ ಮಾಡುತ್ತೀರಿ. ಇಂದ್ರೇಶ್ ನೇತೃತ್ವದ ಮುಸ್ಲಿಂ ರಾಷ್ಟ್ರೀಯ ಮಂಚ್ ಆರೆಸ್ಸೆಸ್ ಅಂಗ ಶಾಖೆಯಲ್ಲ. ಆದರೆ ಅದನ್ನೂ ಆರೆಸ್ಸೆಸ್ ಭಾಗ ಎನ್ನುವಂತೆ ಬಿಂಬಿಸಿದ್ದರಿಂದ ಅವರ ಹೇಳಿಕೆಯೂ ಅದೇ ರೀತಿ ಅರ್ಥ ಬರುವಂತಾಗಿದೆ ಎಂದಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾಧ್ಯಮ ಸಂದರ್ಶನ ಒಂದರಲ್ಲಿ, ಹಿಂದಿನ ಕಾಲದಲ್ಲಿ ಬಿಜೆಪಿ ಅಷ್ಟು ಬೆಳೆದಿರಲಿಲ್ಲ. ಹಾಗಾಗಿ ಆರೆಸ್ಸೆಸ್ ಶಕ್ತಿಯನ್ನು ನೆಚ್ಚಿಕೊಂಡಿದ್ದೆವು. ಈಗ ನಾವು ಸ್ವಂತ ಶಕ್ತಿಯಲ್ಲಿ ಬೆಳೆದಿದ್ದೇವೆ. ಆರೆಸ್ಸೆಸ್ ಆಶ್ರಯ ಬೇಕಾಗಿಲ್ಲ. ನಾವೇ ಬಿಜೆಪಿಯನ್ನು ಮುನ್ನಡೆಸುತ್ತೇವೆ ಎಂದು ಹೇಳಿದ್ದರು. ಈ ಮಾತು ಆರೆಸ್ಸೆಸ್ ಗಿಂತ ಬಿಜೆಪಿ ಮೇಲೆ ಹೋಗಿದೆ, ಅವರ ಆಶ್ರಯ ಬೇಕಾಗಿಲ್ಲ ಎನ್ನುವ ರೀತಿ ಬಿಂಬಿತವಾಗಿತ್ತು. ಇದೇ ಕಾರಣದಿಂದ ಮೋಹನ್ ಭಾಗವತ್ ಅವರು ಬಿಜೆಪಿ ಬಗ್ಗೆ ಅಹಂಕಾರದ ಮಾತುಗಳನ್ನಾಡಿದ್ದರು ಎನ್ನಲಾಗಿತ್ತು. 

The RSS on Friday rejected rumours of differences with the BJP after its chief Mohan Bhagwat said a true 'sevak' was never arrogant in his first remarks after the party fell short of a majority in the Lok Sabha elections, RSS sources told news agency PTI.