Ayodhya Ram temple water leak; ತರಾತುರಿಯಲ್ಲಿ ಲೋಕಾರ್ಪಣೆಗೊಂಡಿದ್ದ ರಾಮ ಮಂದಿರ ; ಮೊದಲ ಮಳೆಗೇ ಗರ್ಭಗುಡಿಯಲ್ಲಿ ಸೋರಿಕೆ, ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್‌ ಬೇಸರ 

25-06-24 02:56 pm       HK News Desk   ದೇಶ - ವಿದೇಶ

ಜನವರಿ 22ರಂದು ತರಾತುರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪ್ರಭು ಶ್ರೀರಾಮಚಂದ್ರನ ಅಪೂರ್ವ ಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಅಯೋಧ್ಯೆ, ಜೂನ್ 25: ಜನವರಿ 22ರಂದು ತರಾತುರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪ್ರಭು ಶ್ರೀರಾಮಚಂದ್ರನ ಅಪೂರ್ವ ಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ಶನಿವಾರ ರಾತ್ರಿ ಮೊದಲ ಮಳೆಗೇ ಸೋರಿಕೆ ಆಗಿರುವುದನ್ನು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಖಚಿತಪಡಿಸಿದ್ದಾರೆ. 

ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಮಂದಿರ ನಿರ್ವಹಣಾ ಸಿಬ್ಬಂದಿ ಗರ್ಭಗುಡಿಯ ಮೇಲ್ಚಾವಣಿ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ. ಸೋರಿಕೆ ದೃಢಪಡಿಸಿರುವ ಮಂದಿರ ನಿರ್ಮಾಣ ಉಸ್ತುವಾರಿ ಹೊತ್ತಿದ್ದ ನೃಪೇಂದ್ರ ಮಿಶ್ರಾ, ''ಗುರು ಮಂಟಪ ಇರುವ ಮೊದಲ ಮಹಡಿಗೆ ಯಾವುದೇ ಮೇಲ್ಚಾವಣಿ ಇಲ್ಲ. ಹೀಗಾಗಿ ಮಳೆ ನೀರು ತುಂಬಿಕೊಂಡು ಗರ್ಭಗುಡಿಯ ಮೂಲಕ ಸೋರಿಕೆಯಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಈ ವರ್ಷದ ಜುಲೈ ವೇಳೆಗೆ ಅಂತ್ಯಗೊಳ್ಳಲಿದೆ. ಡಿಸೆಂಬರ್ ಕೊನೆಗೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಿಶ್ರಾ ತಿಳಿಸಿದ್ದಾರೆ. ಮೇಲ್ಛಾವಣಿಯನ್ನು ತುರ್ತು ದುರಸ್ತಿಗೊಳಿಸಲು ಮತ್ತು ಅದನ್ನು ವಾಟರ್‌ಫ್ರೂಫ್‌ ಮಾಡುವಂತೆ ಸೂಚನೆ ನೀಡಿದ್ದಾರೆ. 

ಬಾಲರಾಮನ ವಿಗ್ರಹದ ಮುಂದೆ ಅರ್ಚಕರು ಕೂರುವ ಸ್ಥಳದಲ್ಲೇ ಮಳೆ ನೀರು ಸೋರಿಕೆಯಾಗುತ್ತಿದೆ. ಜತೆಗೆ ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದಲ್ಲಿಯೂ ನೀರು ಬೀಳುತ್ತಿದೆ ಎಂದು ಅರ್ಚಕರು ತಿಳಿಸಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬಂದ ಎಂಜಿನಿಯರ್‌ಗಳು ರಾಮ ಮಂದಿರವನ್ನು ನಿರ್ಮಿಸುತ್ತಿರುವುದು ಬಹಳ ಅಚ್ಚರಿ ಮೂಡಿಸುತ್ತಿದೆ. ಜನವರಿ 22ರಂದು ಮಂದಿರವನ್ನು ಉದ್ಘಾಟಿಸಲಾಗಿತ್ತು. ಆದರೆ ಮಳೆ ಬಂದರೆ ಛಾವಣಿ ಸೋರಲಿದೆ ಎಂದು ಒಬ್ಬರಿಗೂ ತಿಳಿಯಲಿಲ್ಲ. ವಿಶ್ವ ಪ್ರಸಿದ್ಧ ದೇವಸ್ಥಾನದ ಛಾವಣಿ ಸೋರುತ್ತಿರುವುದು ಅಚ್ಚರಿಯ ವಿಷಯ. ಇದು ಏಕೆ ಆಯಿತು? ಅಷ್ಟು ದೊಡ್ಡ ಎಂಜಿನಿಯರ್‌ಗಳ ಹಾಜರಿಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ದೊಡ್ಡ ತಪ್ಪು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Water was leaking from the roof of the sanctum sanctorum at the Ram temple after the first heavy showers since it was opened to the public, chief priest of Ram Janmabhoomi temple Acharya Satyendra Das said on Monday.