ಹರ್ಯಾಣದ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಲಿದ್ದ ಬಿಜೆಪಿಯನ್ನು ದಡ ಸೇರಿಸಿದ ನಯಾಬ್ ಸಿಂಗ್ ಸೈನಿ ; ಕೇವಲ 210 ದಿನದಲ್ಲಿ ಸೈನಿ ಕಮಾಲ್ ಮಾಡಿದ್ದೇನು ? ಸೈನಿ ಆಡಳಿತಕ್ಕೆ ಕೈಹಿಡಿದ ಓಬಿಸಿ ಮತಗಳು

08-10-24 05:45 pm       HK News Desk   ದೇಶ - ವಿದೇಶ

ಹರ್ಯಾಣದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವತ್ತ ಸಾಗಿದ್ದು ಚುನಾವಣೆ ಫಲಿತಾಂಶ ಅಚ್ಚರಿ ನೋಟ ಬೀರುವಂತೆ ಮಾಡಿದೆ. ಎರಡು ಅವಧಿಗೆ ಆಡಳಿತದಲ್ಲಿದ್ದ ಬಿಜೆಪಿ ಬಗ್ಗೆ ಹರ್ಯಾಣದಲ್ಲಿ ಭಾರೀ ವಿರೋಧಿ ಅಲೆ ಎದುರಾಗಿತ್ತು.

ನವದೆಹಲಿ, ಅ.8: ಹರ್ಯಾಣದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವತ್ತ ಸಾಗಿದ್ದು ಚುನಾವಣೆ ಫಲಿತಾಂಶ ಅಚ್ಚರಿ ನೋಟ ಬೀರುವಂತೆ ಮಾಡಿದೆ. ಎರಡು ಅವಧಿಗೆ ಆಡಳಿತದಲ್ಲಿದ್ದ ಬಿಜೆಪಿ ಬಗ್ಗೆ ಹರ್ಯಾಣದಲ್ಲಿ ಭಾರೀ ವಿರೋಧಿ ಅಲೆ ಎದುರಾಗಿತ್ತು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ ಎನ್ನುವ ಸುಳಿವು ಆರು ತಿಂಗಳ ಹಿಂದೆಯೇ ಬರತೊಡಗಿತ್ತು. ಸಿಎಂ ಮನೋಹರಲಾಲ್ ಖಟ್ಟರ್ ಬಗೆಗೂ ವಿರೋಧಿ ಭಾವನೆ ಎದುರಾಗಿತ್ತು. ಇಂಥ ಸಂದಿಗ್ಧ ಸ್ಥಿತಿಯಲ್ಲೇ ಬಿಜೆಪಿ ಹರ್ಯಾಣ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ, ಮನೋಹರ ಲಾಲ್ ಖಟ್ಟರ್ ಜಾಗಕ್ಕೆ ನಯಾಬ್ ಸಿಂಗ್ ಸೈನಿಯನ್ನು ಕೂರಿಸಲಾಗಿತ್ತು.

ಲೋಕಸಭೆ ಚುನಾವಣೆಗೆ ಎರಡು ತಿಂಗಳು ಇರುವಾಗ ಮತ್ತು ಅಸೆಂಬ್ಲಿ ಚುನಾವಣೆಗೆ 5 ತಿಂಗಳು ಇರುವಷ್ಟರಲ್ಲಿ ಮುಖ್ಯಮಂತ್ರಿ ಬದಲು ಮಾಡಿದ್ದನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕೆ ಮಾಡಿತ್ತು. ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು, ನಯಾಬ್ ಸಿಂಗ್ ಸೈನಿ ಅವರನ್ನು ಡಮ್ಮಿ ಸಿಎಂ ಎಂದು ಗೇಲಿ ಮಾಡಿದ್ದರು. ಆದರೆ, ಫಲಿತಾಂಶ ಬರುತ್ತಲೇ ನಯಾಬ್ ಸಿಂಗ್ ರಾಜ್ಯದಲ್ಲಿ ಕಮಾಲ್ ಮಾಡಿರುವುದು ಖಾತ್ರಿ ಮಾಡಿದೆ. ರೈತರ ಪ್ರತಿಭಟನೆ, ಕುಸ್ತಿಪಟುಗಳ ಪ್ರತಿಭಟನೆ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಚುನಾವಣೆ ಅಸ್ತ್ರ ಮಾಡಿಕೊಂಡರೂ, ಅದಕ್ಕೆ ಮತದಾರ ಓಗೊಟ್ಟಿಲ್ಲ. ಅಲ್ಲದೆ, ಕಾಂಗ್ರೆಸ್ ಗ್ಯಾರಂಟಿ ಘೋಷಣೆಯೂ ಕೈಹಿಡಿದಿಲ್ಲ. ಬದಲಿಗೆ, ಬಿಜೆಪಿಯ ಓಬಿಸಿ ವರ್ಗದ ಮುಖ್ಯಮಂತ್ರಿ ಮತ್ತು ಜಾತಿ ಲೆಕ್ಕಾಚಾರ ಪಕ್ಷವನ್ನು ಗೆಲುವಿನ ಗೆರೆ ದಾಟಿಸಿದೆ.

ನಯಾಬ್ ಸಿಂಗ್ ಕೇವಲ 210 ದಿನಗಳ ಆಡಳಿತದಲ್ಲಿ ಜನರನ್ನು ತಲುಪಲು ಯಶಸ್ವಿಯಾಗಿದ್ದಾರೆ ಎನ್ನುವುದು ಚುನಾವಣಾ ಫಲಿತಾಂಶ ತೋರಿಸಿದೆ. ಇಷ್ಟಕ್ಕೂ 54 ವರ್ಷದ ನಯಾಬ್ ಸಿಂಗ್ ತನ್ನ ಹರೆಯದ ಕಾಲದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇರಿಕೊಂಡಿದ್ದ ಹುಡುಗ. ಆನಂತರ, ಮುಜಾಫರ್ ಪುರದ ಬಿಹಾರ ಯುನಿವರ್ಸಿಟಿಯಲ್ಲಿ ಬಿಎ ಮತ್ತು ಎಲ್ ಎಲ್ ಬಿ ಪೂರೈಸಿದ್ದ ನಯಾಬ್ ಸಿಂಗ್, ಆರೆಸ್ಸೆಸ್ ಕಾರ್ಯಕರ್ತನಾಗಿದ್ದುಕೊಂಡೇ ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಅಲ್ಲಿಂದಲೂ ಮನೋಹರ ಲಾಲ್ ಖಟ್ಟರ್ ಅವರೇ ಸೈನಿಗೆ ರಾಜಕೀಯ ಗುರುವಾಗಿದ್ದರು. 2000ನೇ ಇಸವಿಯಲ್ಲಿ ಬಿಜೆಪಿಯಲ್ಲಿ ತೊಡಗಿಸಿಕೊಂಡ ನಯಾಬ್ ಸಿಂಗ್ ಎರಡೇ ವರ್ಷದಲ್ಲಿ ಅಂಬಾಲಾ ಜಿಲ್ಲೆಯ ಜಿಲ್ಲಾಧ್ಯಕ್ಷನಾಗಿ ನೇಮಕಗೊಂಡಿದ್ದರು.

2009ರಲ್ಲಿ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಗೆಲ್ಲಲು ವಿಫಲಗೊಂಡಿದ್ದ ನಯಾಬ್, 2014ರಲ್ಲಿ ನಾರಾಯಣಘರ್ ಕ್ಷೇತ್ರದಲ್ಲಿ ಗೆಲುವಿನ ಹಾದಿ ಕಂಡುಕೊಂಡಿದ್ದರು. ಅಲ್ಲದೆ, ಮೊದಲ ಅವಧಿಯಲ್ಲೇ ಖಟ್ಟರ್ ಕಾರಣದಿಂದಾಗಿ ಸಚಿವ ಸ್ಥಾನವೂ ದೊರಕಿತ್ತು. 2019ರಲ್ಲಿ ಕುರುಕ್ಷೇತ್ರ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರೂ ಆಗಿದ್ದ ನಯಾಬ್ ಸಿಂಗ್ ಸೈನಿ ಅವರನ್ನು ಇತ್ತೀಚೆಗೆ ಮನೋಹರ ಲಾಲ್ ಖಟ್ಟರ್ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟಾಗ, ಅವರದೇ ಶಿಷ್ಯನೆಂಬ ನೆಲೆಯಲ್ಲಿ ಸಿಎಂ ಸ್ಥಾನಕ್ಕೇರಿಸಲಾಗಿತ್ತು. ಈ ಹಿಂದೆ ಖಟ್ಟರ್ ಅವರನ್ನೂ ಹಿಂದುಳಿದ ವರ್ಗದ ಮತ ಧ್ರುವೀಕರಣಕ್ಕಾಗಿ ಸಿಎಂ ಮಾಡಲಾಗಿತ್ತು. ಈಗ ಸೈನಿ ಅವರನ್ನೂ ಪಂಜಾಬ್, ಹರ್ಯಾಣದಲ್ಲಿ ಪ್ರಬಲವಾಗಿರುವ ಜಾಟ್ ಸಮುದಾಯ ಹೊರತಾದ ಹಿಂದುಳಿದ ವರ್ಗದ ಮತಗಳನ್ನು ಕ್ರೋಡೀಕರಿಸಲು ಮುಖ್ಯಮಂತ್ರಿ ಹುದ್ದೆಗೇರಿಸಿದ್ದರಲ್ಲಿ ಬಿಜೆಪಿ ಫಲ ಕಂಡಿದೆ.

ಹಾಗೆ ನೋಡಿದರೆ, ಸೈನಿ ಆಯ್ಕೆ ಮನೋಹರ ಲಾಲ್ ಖಟ್ಟರ್ ಅವರದೇ ಆಗಿತ್ತು. ಸಿಎಂ ಸ್ಥಾನದಿಂದ ಇಳಿಸಲ್ಪಟ್ಟ ಖಟ್ಟರ್ ಅವರನ್ನು ಬಳಿಕ ಕೇಂದ್ರ ಸಚಿವ ಸ್ಥಾನ ಮಾಡಲಾಗಿತ್ತು. ಲೋಕಸಭೆ ಚುನಾವಣೆಗೆ ಎರಡು ತಿಂಗಳಿರುವಾಗ ಮಾಡಿದ್ದ ಬದಲಾವಣೆಯಿಂದ ಬಿಜೆಪಿಗೆ ಸಂಸತ್ತಿನಲ್ಲಿ ಲಾಭ ಆಗಿರಲಿಲ್ಲ. ಕೇವಲ 5 ಸಂಸತ್ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ರೈತರು ಮತ್ತು ಸೈನಿಕರು ಎರಡೂ ಕಡೆಯಿಂದ ಬಿಜೆಪಿ ವಿರೋಧಿ ಅಲೆಯನ್ನು ಎದುರಿಸಿತ್ತು. ಬಿಜೆಪಿಯ ಕೃಷಿ ಕಾನೂನನ್ನು ವಿರೋಧಿಸಿ 2020-21ರಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದವರಲ್ಲಿ ಹರ್ಯಾಣದ ರೈತರೇ ಹೆಚ್ಚು. ಇದರಲ್ಲಿ ಸಿಖ್ಖರು, ಜಾಟರು ಎಲ್ಲ ಸಮುದಾಯದ ಪ್ರಬಲ ರೈತರಿದ್ದರು. ಇವರಿಗೆ ಕುಸ್ತಿಪಟುಗಳೂ ಸಾಥ್ ಕೊಟ್ಟಿದ್ದರು. ಸೇನೆಯಲ್ಲಿ ಅಗ್ನಿಪಥ್ ಯೋಜನೆ ಜಾರಿಗೊಳಿಸಿದ್ದಕ್ಕೆ ಹರ್ಯಾಣದಲ್ಲಿ ಭಾರೀ ವಿರೋಧ ಕೇಳಿಬಂದಿತ್ತು. ಅತಿ ಹೆಚ್ಚು ಯುವಕರು ಹರ್ಯಾಣದವರು ಸೇನೆ ಸೇರುತ್ತಿದ್ದುದರಿಂದ ಈ ಯೋಜನೆಗೆ ವಿರೋಧ ಎದುರಾಗಿತ್ತು. ಇದೆಲ್ಲವನ್ನೂ ನಿಭಾಯಿಸುವ ಹೊಣೆಯನ್ನು ನಯಾಬ್ ಸಿಂಗ್ ಸೈನಿಗೆ ವಹಿಸಲಾಗಿತ್ತು. ಹಾಗಾಗಿಯೇ ಚುನಾವಣೆಯಲ್ಲಿ ಸೋಲಾದರೂ, ಗೆಲುವಾದರೂ ಅದಕ್ಕೆ ನಾನೇ ಹೊಣೆ ಹೊತ್ತುಕೊಳ್ಳುತ್ತೇನೆ ಎಂದೇ ಸೈನಿ ಹೇಳಿಕೊಂಡಿದ್ದರು.

ಅಧಿಕಾರದ ಗದ್ದುಗೆ ಹಿಡಿಯುತ್ತಲೇ ನಯಾಬ್ ಸಿಂಗ್ ಸೈನಿ ಜನಸಾಮಾನ್ಯರ ಸ್ಥಿತಿಯನ್ನು ಮೇಲೆತ್ತಲು ಮುಂದಾಗಿದ್ದು ಈಗ ಫಲ ನೀಡಿದೆ. ಪಂಚಾಯತ್ ಮಟ್ಟದಲ್ಲಿ ನೀಡುತ್ತಿದ್ದ ಅನುದಾನವನ್ನು 5 ಲಕ್ಷದಿಂದ 21 ಲಕ್ಷಕ್ಕೆ ಏರಿಸಿದ್ದರಿಂದ ತಳಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಕ್ಕಿತ್ತು. ಇದಲ್ಲದೆ, ವಿದ್ಯುತ್ ಬಳಕೆದಾರರಿಗೆ ಹೊರಿಸಲಾಗಿದ್ದ ಕನಿಷ್ಠ ದರದ ಹೊರೆಯನ್ನು ತೆಗೆದುಹಾಕಿ, ಬಳಸಿದ ವಿದ್ಯುತ್ತಿಗಷ್ಟೇ ದರ ವಿಧಿಸುವುದಕ್ಕೆ ಆದೇಶ ಮಾಡಿದ್ದರು. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತಿ ಬಿಜಲೀ ಯೋಜನೆಯಡಿ ಬಡ ವರ್ಗದ ಜನರಿಗೆ ಉಚಿತ ಸೋಲಾರ್ ಪ್ಯಾನೆಲ್ ಒದಗಿಸಿದ್ದರು. ಪ್ರಧಾನಿ ಮೋದಿಯವರು ಇದೇ ವಿಚಾರವನ್ನು ಪ್ರಚಾರದಲ್ಲಿ ಬಳಸಿಕೊಂಡು ನಯಾಬ್ ಸಿಂಗ್ ಸೈನಿ ಈಗಲೇ ಜನರ ಹೃದಯಕ್ಕೆ ತಲುಪಿದ್ದಾರೆ, ಜನರ ಕಲ್ಯಾಣಕ್ಕೆ ಅವಿರತ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದ್ದರು. ಇದಲ್ಲದೆ, ಅಗ್ನಿಪಥ ಯೋಜನೆಗೆ ಪೂರಕವಾಗಿ ಅಗ್ನಿವೀರರಾಗಿ ಸೇನೆಯಲ್ಲಿ ಸೇವೆಗೈದು ಬರುವ ಯುವಕರಿಗೆ ಹರ್ಯಾಣ ರಾಜ್ಯದಲ್ಲಿ ಖಚಿತ ಉದ್ಯೋಗದ ಭರವಸೆ ನೀಡುವ ಅಗ್ನಿವೀರ್ ಮಸೂದೆ-2024 ಅನ್ನು ಜಾರಿಗೆ ತಂದಿದ್ದರು. ಹರ್ಯಾಣದಲ್ಲಿ ಒಟ್ಟು ಜನಸಂಖ್ಯೆಯ 40 ಶೇಕಡಾ ಓಬಿಸಿ ಮತಗಳಿದ್ದು, ತನ್ನ ಯೋಜನೆಗಳ ಕಾರಣದಿಂದಾಗಿಯೇ ಸೈನಿ ಜನಮತ ಗಿಟ್ಟಿಸುವಲ್ಲಿ ಸಫಲವಾಗಿದ್ದಾರೆ. 

Just two months ahead of the 2024 Lok Sabha elections and five months before the Haryana Assembly polls, the BJP in March replaced Haryana Chief Minister Manohar Lal Khattar with Nayab Singh Saini. Many were quick to point out that the move followed a familiar BJP pattern of replacing the incumbent chief ministers just before elections.