ಭೋಜಶಾಲಾ ವಿವಾದಿತ ಮಸೀದಿ ಕಟ್ಟಡವಲ್ಲ, ವಾಗ್ದೇವಿ ಸರಸ್ವತಿ ಮಂದಿರ ; ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು, ಮಸೀದಿಗೆ ಪ್ರತ್ಯೇಕ ಜಾಗಕ್ಕೆ ಆದೇಶ

16-05-26 10:13 pm       HK News Desk   ದೇಶ - ವಿದೇಶ

ಮಧ್ಯಪ್ರದೇಶದ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ವಿವಾದಿತ ಕಟ್ಟಡವು ವಾಗ್ದೇವಿ ಸರಸ್ವತಿ ದೇವಿ ದೇವಸ್ಥಾನಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ. ಇದೇ ವೇಳೆ, ಮಸೀದಿಗೆ ಪ್ರತ್ಯೇಕ ಜಾಗ ಪಡೆಯುವಂತೆ ಆದೇಶ ಮಾಡಿದೆ.

ಭೋಪಾಲ್, ಮೇ 16: ಮಧ್ಯಪ್ರದೇಶದ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ವಿವಾದಿತ ಕಟ್ಟಡವು ವಾಗ್ದೇವಿ ಸರಸ್ವತಿ ದೇವಿ ದೇವಸ್ಥಾನಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ. ಇದೇ ವೇಳೆ, ಮಸೀದಿಗೆ ಪ್ರತ್ಯೇಕ ಜಾಗ ಪಡೆಯುವಂತೆ ಆದೇಶ ಮಾಡಿದೆ. 

ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠವು, ಮುಸ್ಲಿಮರು ಮತ್ತು ಹಿಂದೂಗಳು ಆ ಸ್ಥಳದಲ್ಲಿ ಬೇರೆ ಬೇರೆ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 2003 ರ ಆದೇಶವನ್ನು ರದ್ದುಗೊಳಿಸಿದೆ.

ವಿವಾದಿತ ರಚನೆಯು ಸಂರಕ್ಷಿತ ಸ್ಮಾರಕವಾಗಿದೆ. ಆದರೆ ಅದರ ಧಾರ್ಮಿಕ ಲಕ್ಷಣವು ದೇವಾಲಯದ್ದಾಗಿದೆ ಎಂದು ನ್ಯಾಯಾಲಯವು ಎಎಸ್ಐ ವರದಿಯನ್ನು ಆಧರಿಸಿ ತೀರ್ಪು ನೀಡಿದ್ದು ಮಸೀದಿಗೆ ಪರ್ಯಾಯ ಭೂಮಿ ಹಂಚಿಕೆಗಾಗಿ ಮುಸ್ಲಿಂ ಸದಸ್ಯರು ಅರ್ಜಿ ಸಲ್ಲಿಸಿದರೆ ರಾಜ್ಯ ಸರ್ಕಾರ ಅದನ್ನು ಪರಿಶೀಲಿಸಬಹುದು ಎಂದು ಹೇಳಿದೆ. 

ಐತಿಹಾಸಿಕ ದಾಖಲೆಗಳು, ಪುರಾತತ್ತ್ವ ಶಾಸ್ತ್ರದ ವಸ್ತುಗಳು ಮತ್ತು ASI ಸಂಶೋಧನೆಗಳನ್ನು ಆಧರಿಸಿ, ನ್ಯಾಯಾಲಯವು ಈ ಸ್ಥಳ ಐತಿಹಾಸಿಕವಾಗಿ ಸರಸ್ವತಿ ದೇವಿಗೆ ದೇವಾಲಯಕ್ಕೆ ಸೇರಿದ್ದು, ಸಂಸ್ಕೃತ ಕಲಿಕೆಯ ಕೇಂದ್ರವಾಗಿತ್ತು ಎಂದು ಹೇಳಿದೆ. ಹಿಂದು ಸಮುದಾಯವು ಭೋಜಶಾಲಾವನ್ನು ವಾಗ್ದೇವಿ ಸರಸ್ವತಿ ದೇವಿಗೆ ಅರ್ಪಿತವಾದ ದೇವಸ್ಥಾನ ಎಂದು ಪರಿಗಣಿಸಿದರೆ, ಮುಸ್ಲಿಂ ಸಮುದಾಯವು ಇದನ್ನು ಕಮಲ್‌ ಮೌಲಾ ಮಸೀದಿ ಎಂದು ಗುರುತಿಸಿತ್ತು. ಈ ಮಧ್ಯೆ, ಜೈನ ಸಮುದಾಯದ ಅರ್ಜಿದಾರರೊಬ್ಬರು ಈ ಸಂಕೀರ್ಣವು ಮಧ್ಯಕಾಲೀನ ಜೈನ ದೇವಾಲಯ ಮತ್ತು ಗುರುಕುಲ ಎಂದು ಪ್ರತಿಪಾದಿಸಿದ್ದರು.

2003ರ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಆದೇಶದಂತೆ ಹಿಂದೂಗಳು ಮಂಗಳವಾರ ಮತ್ತು ಮುಸ್ಲಿಮರು ಶುಕ್ರವಾರದಂದು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವ್ಯವಸ್ಥೆಯನ್ನು ಪ್ರಶ್ನಿಸಿ ಹಿಂದೂ ಪರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು ಮತ್ತು ತಮಗೆ ಸಂಪೂರ್ಣ ಪೂಜಾ ಹಕ್ಕು ನೀಡಬೇಕೆಂದು ಕೋರಿದ್ದರು.

2024ರ ಮಾರ್ಚ್ 11ರಂದು ಹೈಕೋರ್ಟ್ ಈ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಮಾರ್ಚ್ 22ರಿಂದ ಆರಂಭವಾದ ಈ ಸಮೀಕ್ಷೆಯು 98 ದಿನಗಳ ಕಾಲ ನಡೆದಿತ್ತು. ಎಎಸ್‌ಐ ಇತ್ತೀಚೆಗೆ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವರದಿಯ ಆಧಾರದ ಮೇಲೆ ಇಂದು ಈ ತೀರ್ಪು ಹೊರಬಿದ್ದಿದೆ.