ಕೇರಳದಲ್ಲಿ ಮತ್ತೆ ರಕ್ತಪಾತ ; ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ ! ಆಲಪ್ಪುಳದಲ್ಲಿ ಹರತಾಳ 

25-02-21 09:58 am       Headline Karnataka News Network   ದೇಶ - ವಿದೇಶ

ಎಸ್ಡಿಪಿಐ ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಆರೆಸ್ಸೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದ ಘಟನೆ ಇಲ್ಲಿನ ವಯಲಾರ್ ಪಂಚಾಯತ್ ವ್ಯಾಪ್ತಿಯ ನಾಗಂಕುಲರ ಎಂಬಲ್ಲಿ ನಡೆದಿದೆ. 

ಆಲಪ್ಪುಝ, ಫೆ.25: ಎಸ್ಡಿಪಿಐ ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಆರೆಸ್ಸೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದ ಘಟನೆ ಇಲ್ಲಿನ ವಯಲಾರ್ ಪಂಚಾಯತ್ ವ್ಯಾಪ್ತಿಯ ನಾಗಂಕುಲರ ಎಂಬಲ್ಲಿ ನಡೆದಿದೆ. 

ಆರೆಸ್ಸೆಸ್ ಶಾಖಾ ಮುಖ್ಯ ಶಿಕ್ಷಕ್ ಆಗಿದ್ದ ನಂದು ಯಾನೆ ರಾಹುಲ್ ಕೃಷ್ಣ (22) ಕೊಲೆಯಾದ ಯುವಕ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳ ಭೇಟಿಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಎಸ್ಡಿಪಿಐ ಮುಂದಾಗಿತ್ತು. ಈ ಸಂಬಂಧ ವಾರದ ಹಿಂದೆ ಎಸ್ಡಿಪಿಐ ಕಾರ್ಯಕರ್ತರು ಸೇರಿ ವಯಲಾರ್ ನಲ್ಲಿ ಸಭೆ ನಡೆಸಿದ್ದರು. ಕಳೆದ ಭಾನುವಾರ ಯೋಗಿ ಆದಿತ್ಯನಾಥ್, ಕಾಸರಗೋಡಿಗೆ ಆಗಮಿಸಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಯಾತ್ರೆಗೆ ಚಾಲನೆ ನೀಡಿದ್ದರು. ಇದನ್ನು ವಿರೋಧಿಸಿ ಎಸ್ಡಿಪಿಐ ಕಾರ್ಯಕರ್ತರು ಮಾರ್ಚ್ ನಡೆಸಿದ್ದಲ್ಲದೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿದ್ದರು. 

ಬುಧವಾರ ಮತ್ತೆ ಆಲಪ್ಪುಝ ಜಿಲ್ಲೆಯ ವಯಲಾರ್ ಪ್ರದೇಶದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಮಾರ್ಚ್ ನಡೆಸಿದ್ದಲ್ಲದೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅವಾಚ್ಯವಾಗಿ ನಿಂದಿಸುತ್ತಾ ಘೋಷಣೆ ಕೂಗಿದ್ದು ಆರೆಸ್ಸೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ರಾತ್ರಿ ವೇಳೆಗೆ, ಎರಡೂ ಕಡೆಯ ಗುಂಪುಗಳು ಪ್ರತ್ಯೇಕವಾಗಿ ಮಾರ್ಚ್ ನಡೆಸಿದ್ದಲ್ಲದೆ ನಿಂದನೆಯ ಘೋಷಣೆಗಳನ್ನು ಕೂಗಿತ್ತು. ಆನಂತರ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಎಸ್ಡಿಪಿಐ ಕಡೆಯಿಂದ ದಾಳಿ ನಡೆದಿದೆ ಎನ್ನಲಾಗುತ್ತಿದ್ದು ಆರೆಸ್ಸೆಸ್ ಕಾರ್ಯಕರ್ತ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಘರ್ಷಣೆಯಲ್ಲಿ  ಎಸ್ಡಿಪಿಐ ಮತ್ತು ಆರೆಸ್ಸೆಸ್ ಸೇರಿದ ಹಲವು ಕಾರ್ಯಕರ್ತರು  ಗಾಯಗೊಂಡಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ ಆಲಪ್ಪುಝ ಜಿಲ್ಲಾ ಘಟಕ ಬೆಳಗ್ಗಿನಿಂದ ಸಂಜೆಯ ವರೆಗೆ ಹರತಾಳಕ್ಕೆ ಕರೆ ನೀಡಿದೆ. 

ವಯಲಾರ್ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಯಾಗಿದ್ದು ಹೆಚ್ಚುವರಿ ಪೊಲೀಸರ ಪಡೆಯನ್ನು ನಿಯೋಜಿಸಲಾಗಿದೆ.

AN RSS worker was hacked to death allegedly by members of Social Democratic Party of India (SDPI), the political wing of Popular Front of India, during a clash in Alappuzha district on Wednesday night.