Report: ಲಾಕ್ಡೌನ್ ಬಳಿಕ ಹೆಚ್ಚಿದ ನಿರುದ್ಯೋಗ ; 40 ದಿನಗಳಲ್ಲಿ 69 ಲಕ್ಷ ಜನ ನೌಕರಿಗಾಗಿ ನೋಂದಣಿ 

27-08-20 06:20 pm       Headline Karnataka News Network   ದೇಶ - ವಿದೇಶ

ಮೋದಿ ಸರಕಾರ ಆರಂಭಿಸಿದ ಆತ್ಮನಿರ್ಭರ್ ಯೋಜನೆಯ ಅಸೀಮ್ ಪೋರ್ಟಲ್ ನಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿರುವ ಜನರ ಅಂಕಿ ಅಂಶಗಳನ್ನು ನೋಡಿದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಯಾವ ರೀತಿ ಇದೆ ಎನ್ನುವ ಸ್ಪಷ್ಟ ಸೂಚನೆ ಲಭಿಸುತ್ತಿದೆ. 

ನವದೆಹಲಿ, ಆಗಸ್ಟ್ 27: ಲಾಕ್ಡೌನ್ ಬಳಿಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಲಾಕ್ ಡೌನ್ ಕಾರಣದಿಂದ ಉದ್ಯೋಗ ಕಳಕೊಂಡ ಲಕ್ಷಾಂತರ ಜನ ಈಗ ಮತ್ತೆ ನೌಕರಿ ಗಿಟ್ಟಿಸುವುದಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ. ಇದೇ ವೇಳೆ, ಮೋದಿ ಸರಕಾರ ಆರಂಭಿಸಿದ ಆತ್ಮನಿರ್ಭರ್ ಯೋಜನೆಯ ಅಸೀಮ್ ಪೋರ್ಟಲ್ ನಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿರುವ ಜನರ ಅಂಕಿ ಅಂಶಗಳನ್ನು ನೋಡಿದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಯಾವ ರೀತಿ ಇದೆ ಎನ್ನುವ ಸ್ಪಷ್ಟ ಸೂಚನೆ ಲಭಿಸುತ್ತಿದೆ. 

ಕೇಂದ್ರ ಸರಕಾರ ಕಳೆದ ಜುಲೈ 11ರಂದು ಅಸೀಮ್ (Aatmanirbhar Skilled Employee Employer Mapping ) ಎನ್ನುವ ಪೋರ್ಟಲ್ ಆರಂಭಿಸಿತ್ತು. ಉದ್ಯೋಗ ರಹಿತ ಕೌಶಲ್ಯವುಳ್ಳವರಿಗೆ ಉದ್ಯೋಗದ ಆಯ್ಕೆ ನೀಡುವ ಸಲುವಾಗಿ ಈ ಪೋರ್ಟಲ್ ಆರಂಭಿಸಲಾಗಿತ್ತು. ಪೋರ್ಟಲ್ ತೆರೆದುಕೊಂಡ ಕೇವಲ 40 ದಿನಗಳಲ್ಲಿ 69 ಲಕ್ಷ ಜನ ದಾಖಲಾತಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕಳೆದ ಆಗಸ್ಟ್ 14ರಿಂದ 21ರ ನಡುವಿನ ಒಂದೇ ವಾರದಲ್ಲಿ ಏಳು ಲಕ್ಷ ಜನ ಈ ಪೋರ್ಟಲ್ ದಾಖಲಾತಿ ಮಾಡಿಕೊಂಡಿರುವುದು ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಲಾಕ್ ಡೌನ್ ಬಳಿಕ ಯಾವ ಪರಿಯಲ್ಲಿ ಜನರನ್ನು ಕಿತ್ತು ತಿನ್ನುತ್ತಿದೆ ಅನ್ನುವುದನ್ನು ತೋರಿಸುತ್ತಿದೆ. ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮಾಹಿತಿ ಪ್ರಕಾರ, ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಂಡ 3.7 ಲಕ್ಷ ಮಂದಿಯಲ್ಲಿ ಕೇವಲ ಎರಡು ಶೇಕಡಾ ಜನ ಮಾತ್ರ ಉದ್ಯೋಗ ಹೊಂದಿದ್ದಾರೆ. ಇನ್ನು ಅದರಲ್ಲಿ ರಿಜಿಸ್ಟರ್ ವೇಳೆ ಕೊಟ್ಟಿರುವ ಡಾಟಾ ಪ್ರಕಾರ, 1.49 ಲಕ್ಷ ಜನರಿಗೆ ಉದ್ಯೋಗದ ಭರವಸೆ ಸಿಕ್ಕಿದೆಯಂತೆ. ಅದರಲ್ಲಿ 7700 ಮಂದಿ ಮಾತ್ರ ಉದ್ಯೋಗಕ್ಕೆ ಆಯ್ಕೆಯಾಗುವ ಭರವಸೆ ಹೊಂದಿದ್ದಾರೆ. 

ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡವರು ವಲಸೆ ಕಾರ್ಮಿಕರು ಮಾತ್ರ ಅಲ್ಲ. ಈ ಪಟ್ಟಿಯಲ್ಲಿ ಸ್ವ ಉದ್ಯೋಗ ಮಾಡುತ್ತಿರುವ ಟೈಲರ್ಸ್, ಇಲೆಕ್ಟ್ರೀಶಿಯನ್, ಟೆಕ್ನೀಶಿಯನ್ಸ್, ಹೊಲಿಗೆ ಯಂತ್ರ ಆಪರೇಟರ್ಸ್, ಕೊರಿಯರ್ ಡೆಲಿವರಿ ಎಕ್ಸಿಕ್ಯುಟಿವ್, ನರ್ಸ್ ಗಳು, ಅಕೌಂಟ್ಸ್ ಎಕ್ಸಿಕ್ಯುಟಿವ್, ಕ್ಲೀನಿಂಗ್ ಕೆಲಸ ಮಾಡುವವರು ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ಕೂಡ ಇದ್ದಾರೆ. ಇದರ ನೀಡಿರುವ ಡಾಟಾ ಪ್ರಕಾರ, ಹರ್ಯಾಣ, ದೆಹಲಿ, ತೆಲಂಗಾಣ ಮತ್ತು ತಮಿಳ್ನಾಡಿನಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಲಾಕ್ ಡೌನ್ ಬಳಿಕ ವಲಸೆ ಕಾರ್ಮಿಕರು ತಮ್ಮೂರಿಗೆ ಹಿಂತಿರುಗಿದ ಕಾರಣ ಹೆಚ್ಚಿನ ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಕಾರ್ಮಿಕರು ಸಿಗದಂತಾಗಿದೆ.