Ashoka Janamana in Puttur, CM Siddaramaiah: ಪುತ್ತೂರಲ್ಲಿ ಅಶೋಕ ಜನಮನ ; ಸಿಎಂ ಹಿಂತಿರುಗುತ್ತಲೇ ನೂಕುನುಗ್ಗಲು, ಊಟ, ಗಿಫ್ಟ್ ಸರದಿಯಲ್ಲಿ ತಳ್ಳಾಟ- 11 ಜನ ಅಸ್ವಸ್ಥ, ಜಡಿಮಳೆ- ಗೊಂದಲ, ಮಕ್ಕಳು- ಮಹಿಳೆಯರ ಪರದಾಟ

20-10-25 07:25 pm       Mangalore Correspondent   ಕರಾವಳಿ

ಪುತ್ತೂರು ಶಾಸಕ ಅಶೋಕ ರೈ ನೇತೃತ್ವದಲ್ಲಿ ಪ್ರತಿ ದೀಪಾವಳಿಗೆ ಅಶೋಕ ಜನಮನ ನಡೆಯುತ್ತ ಬಂದಿದೆ. ಈ ಬಾರಿ 13ನೇ ವರ್ಷದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿ ಬಂದಿದ್ದರು.

ಪುತ್ತೂರು, ಅ.20: ಪುತ್ತೂರು ಶಾಸಕ ಅಶೋಕ ರೈ ನೇತೃತ್ವದಲ್ಲಿ ಪ್ರತಿ ದೀಪಾವಳಿಗೆ ಅಶೋಕ ಜನಮನ ನಡೆಯುತ್ತ ಬಂದಿದೆ. ಈ ಬಾರಿ 13ನೇ ವರ್ಷದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿ ಬಂದಿದ್ದರು. ಸಿಎಂ ಬಂದಿದ್ದಾರೆ ಅಂತಲೋ ಏನೋ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಪೊಲೀಸರು ಅತಿಯಾದ ಶಿಸ್ತು ಏರ್ಪಡಿಸಿದ್ದರಿಂದ ಕೊನೆಗೆ, ಊಟ ನೀರು ಸಿಗದೆ ಗೊಂದಲ ಏರ್ಪಟ್ಟು ಹಲವರು ಅಸ್ವಸ್ಥಕ್ಕೀಡಾದ ಘಟನೆ ನಡೆಯಿತು.

ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು. ಹೆಚ್ಚೆಂದರೆ 15 ಸಾವಿರ ಸೇರಬಹುದಾದ ಮೈದಾನದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮಂಗಳೂರಿನಿಂದಲೂ ಉಚಿತ ಬಸ್ಸಿನಲ್ಲಿ ಮಹಿಳೆಯರು ಬಂದಿದ್ದರು. ಸಿಎಂ ಬರುವಾಗಲೇ 1.30 ಗಂಟೆ ಆಗಿದ್ದರಿಂದ ಜನರು ಹಸಿದಿದ್ದರು. ಎಂದಿನಂತೆ ಕಾರ್ಯಕ್ರಮ ಮುಗಿದ ಬಳಿಕ ಊಟ ಮತ್ತು ಗಿಫ್ಟ್ ಕೊಡುವುದು ವಾಡಿಕೆ. ಆದರೆ ಸಿಎಂ ಬಂದ ಬಳಿಕ ಅಶೋಕ್ ರೈ ಮಾತನಾಡಿ, ಬಳಿಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೂ ಮಾತನಾಡಿದರು. ಆನಂತರ ಸಿಎಂ ಸಿದ್ದರಾಮಯ್ಯ ಭಾಷಣ ಮುಗಿಸಿದಾಗ ಮೂರು ಗಂಟೆ ಕಳೆದಿತ್ತು.

ದೂರ ದೂರದಿಂದ ಬಂದಿದ್ದ ಜನರನ್ನು ಸಭಾಂಗಣ ಪ್ರವೇಶ ಸಂದರ್ಭದಲ್ಲಿ ಜೊತೆಗೆ ನೀರಿನ ಬಾಟಲ್ ಒಯ್ಯುವುದಕ್ಕೂ ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಶುಗರ್, ಬಿಪಿ ತೊಂದರೆ ಇದ್ದವರು ಮಧ್ಯಾಹ್ನ ಕಳೆದಾಗ ಅಸ್ವಸ್ಥರಾಗಿದ್ದು, 8-10 ಮಹಿಳೆಯರನ್ನು ಪೊಲೀಸರು ಆಂಬುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರೆಗೆ ರವಾನಿಸಿದರು. ಮೂರು ಗಂಟೆಯ ನಂತರ ಊಟ, ಗಿಫ್ಟ್ ಕೊಡಲು ಆರಂಭಿಸಿದಾಗ ಮತ್ತೆ ನೂಕುನುಗ್ಗಲು ಉಂಟಾಯಿತು. ಹಸಿದಿದ್ದವರು ತಾಮುಂದು, ನಾಮುಂದು ಎನ್ನುವಂತೆ ನುಗ್ಗತೊಡಗಿದ್ದು ಪೊಲೀಸರಿಗೂ ನಿಯಂತ್ರಣ ಮಾಡಲಾಗದ ಸ್ಥಿತಿಯಾಗಿತ್ತು.

ಇದೇ ವೇಳೆ, ಮಕ್ಕಳನ್ನು ಕರೆತಂದವರು ದಿಕ್ಕಾಪಾಲಾಗಿದ್ದರು. ಹಲವು ತಾಯಂದಿರು ಮಕ್ಕಳು ಕಾಣದೆ ಪ್ರಯಾಸಪಟ್ಟರು. ವೇದಿಕೆಯಲ್ಲಿದ್ದವರು ಮಕ್ಕಳು ಕಾಣೆಯಾಗಿ ಬಂದವರ ಅಳಲು ಕೇಳುತ್ತ ಗೊಂದಲದ ಸ್ಥಿತಿಯಾಗಿತ್ತು. ಮುಖ್ಯಮಂತ್ರಿ ಸ್ಥಳದಿಂದ ನಿರ್ಗಮಿಸುತ್ತಲೇ 3.30ರ ಸುಮಾರಿಗೆ ಎಲ್ಲಿಂದಲೋ ಆವರಿಸಿಕೊಂಡ ರೀತಿ ಮಳೆರಾಯ ನುಗ್ಗಿ ಬಂದಿದ್ದ. ಭಾರೀ ಮಳೆಯಾಗಿದ್ದರಿಂದ ಜನರು ಶೀಟ್ ಹಾಕಿದ್ದ ಸಭಾಂಗಣದಿಂದ ಹೊರಕ್ಕೆ ಹೋಗಲಾಗದೆ ಪರದಾಡಿದರು. ಒಂದು ಗಂಟೆ ಕಾಲ ಪುತ್ತೂರಿನಲ್ಲಿ ಭಾರೀ ಮಳೆಯಾಗಿದ್ದು ಅಶೋಕ ಜನಮನ ಕಾರ್ಯಕ್ರಮದಲ್ಲಿ ಬಳಲಿ ಗಂಟಲು ಕಟ್ಟಿಕೊಂಡಿದ್ದ ಜನರಿಗೆ ಗುಟುಕು ನೀರು ಸಿಕ್ಕಂತಾಗಿತ್ತು.

ಇದರ ನಡುವೆಯೂ ಊಟ ಮತ್ತು ಗಿಫ್ಟ್ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತಿರುವಾಗಲೇ ನೂಕುನುಗ್ಗಲು, ತಳ್ಳಾಟ ಮಾಡಿದ್ದು, ಪೊಲೀಸರು ಲಾಠಿ ಬೀಸಿದರಲ್ಲದೆ, ಒಮ್ಮೆ ಗಿಫ್ಟ್ ಕೊಡುವುದನ್ನೇ ನಿಲ್ಲಿಸಿದ್ದರು. ನೂಕಾಟ ತಪ್ಪಿಸಲು ಪೊಲೀಸರು ಲಾಠಿ ಬೀಸಿದ್ದರಿಂದ ಕೆಲವರು ಏಟಿನ ರುಚಿಯನ್ನೂ ಕಂಡರು. ಸಿಎಂ ನಿರ್ಗಮಿಸುವ ಮೊದಲೇ ಅಸ್ವಸ್ಥಕ್ಕೀಡಾದವರನ್ನು ಆಂಬುಲೆನ್ಸ್ ನಲ್ಲಿ ಹೊರಗೆ ಕರೆದೊಯ್ಯಲಾಯಿತು. ಪೊಲೀಸರ ಮಾಹಿತಿ ಪ್ರಕಾರ, ಊಟ ತಡವಾಗಿದ್ದರಿಂದ ಡಿಹೈಡ್ರೇಶನ್ ಉಂಟಾಗಿ ವೃದ್ಧ ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಏಳು ಜನ ಮಹಿಳೆಯರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಮೂವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಫ್ಲೂಯಿಡ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗಿಫ್ಟ್ ನಲ್ಲಿ ಬಟ್ಟಲು, ಲೋಟದ ಸೆಟ್ ಇದ್ದರೆ, ಜೊತೆಗೊಂದು ಕರವಸ್ತ್ರ ಇತ್ತು. ಈ ಹಿಂದೆ ಮಹಿಳೆಯರಿಗೆ ಸೀರಿ, ಗಂಡಸರಿಗೆ ಕರವಸ್ತ್ರ ಕೊಡಲಾಗಿತ್ತು. ಈ ಬಾರಿ ಸುಮಾರು ಒಂದು ಲಕ್ಷ ಮಂದಿಗೆ ವಸ್ತ್ರದಾನ ಮಾಡಲಾಗುವುದೆಂದು ಶಾಸಕ ಅಶೋಕ್ ರೈ ತಿಳಿಸಿದ್ದರು. ಒಂದೆಡೆ ಊಟ ನಡೆಯುತ್ತಿದ್ದರೆ ಮತ್ತೊಂದೆಡೆ ದೋಸೆ ಹಬ್ಬವೂ ನಡೆಯಿತು. ಎಲ್ಲರಿಗೂ ದೋಸೆ ತಿನ್ನುವುದಕ್ಕೂ ಅವಕಾಶ ನೀಡಲಾಗಿತ್ತು. ಆದರೆ ಮಳೆ, ಕೆಸರು, ಕಾರ್ಯಕ್ರಮ ತಡವಾಗಿದ್ದರಿಂದ ಆದ ಗೊಂದಲದಿಂದಾಗಿ ಊಟ, ದೋಸೆ ಏನೂ ಬೇಡ ಎನ್ನುವಂತಹ ಸ್ಥಿತಿಯಾಗಿತ್ತು.

At the 13th annual Ashoka Janamana event organized by MLA Ashok Rai in Puttur, chaos erupted after Chief Minister Siddaramaiah’s visit. The event, held at the Puttur Taluk Stadium, saw over 50,000 attendees in a venue meant for only 15,000. Long delays, lack of food and water, and strict police restrictions led to exhaustion and illness — with 11 people, mostly women, falling sick and several rushed to hospital.