Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರಣ, ಸಾರ್ವಜನಿಕ ಸ್ಥಳಗಳಲ್ಲಿ 'ಸಂಘ ಕಾರ್ಯ'ಕ್ಕೆ ಬ್ರೇಕ್ ; ಸರ್ಕಾರದಿಂದ ಅಧಿಕೃತ ಆದೇಶ, 'ಅಕ್ರಮ ಪ್ರವೇಶ'ವೆಂದು ಕ್ರಮ ವಹಿಸಲು ಸೂಚನೆ 

19-10-25 05:42 pm       Bangalore Correspondent   ಕರ್ನಾಟಕ

ರಾಜ್ಯಾದ್ಯಂತ ಶಾಲಾ-ಕಾಲೇಜು ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ, ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ.

ಬೆಂಗಳೂರು, ಅ.19: ರಾಜ್ಯಾದ್ಯಂತ ಶಾಲಾ-ಕಾಲೇಜು ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ, ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ.

'ತುರ್ತು' ಎಂಬ ಶೀರ್ಷಿಕೆಯೊಂದಿಗೆ ಒಳಾಡಳಿತ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದ್ದು, ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿ ಹೊರಡಿಸಲು ಕೂಡಲೇ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಅನುಮತಿ ಪಡೆಯದೆ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡರೆ 'ಅಕ್ರಮ ಪ್ರವೇಶ' ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಉದ್ದೇಶದ ನಿಯಮ ಇದಾಗಿದ್ದರೂ ಈ ಆದೇಶದಲ್ಲಿ ಆರೆಸ್ಸೆಸ್ ಪದ ಬಳಕೆ ಮಾಡಿಲ್ಲ. ರಾಜ್ಯದಲ್ಲಿ ಹಲವು ಖಾಸಗಿ ಸಂಸ್ಥೆ ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಸದಸ್ಯರು ಮತ್ತು ಬೆಂಬಲಿಗರ ಸಭೆಗಳನ್ನು ನಡೆಸುವ ಉದ್ದೇಶಕ್ಕೆ ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳು, ಸರಕಾರದ ಜಮೀನು, ಆಟದ ಮೈದಾನಗಳನ್ನು ಯಾವುದೇ ಪೂರ್ವಾನುಮತಿ ಪಡೆಯದೆ ಬಳಕೆ ಮಾಡಿಕೊಳ್ಳುತ್ತಿವೆ. ಇದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವತ್ರಿಕ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಇಂತಹ ಚಟುವಟಿಕೆಗಳು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟು ಮಾಡುತ್ತವೆ.

ಹಾಗಾಗಿ, ಸಂಬಂಧಿತ ಆಸ್ತಿ/ ಸ್ಥಳದ ಮಾಲೀಕತ್ವ ಹೊಂದಿದ ಸಕ್ರಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಬಳಕೆ ಮಾಡಿದರೆ ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುವುದು. ಅಲ್ಲದೆ, ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ ಉಂಟು ಮಾಡುವ ಚಟುವಟಿಕೆಗಳನ್ನು ಸರಕಾರಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳು ಅನುಮತಿ ನಿರಾಕರಿಸಬೇಕು ಎಂದು ಆದೇಶದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಸೂಕ್ತ ಮತ್ತು ವಿವರವಾದ ಮಾರ್ಗಸೂಚಿ ಹೊರಡಿಸಬೇಕು ಮತ್ತು ಪ್ರತಿಯನ್ನು ಒಳಾಡಳಿತ ಇಲಾಖೆಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಸದರಿ ಆದೇಶ ಪ್ರಕಾರ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. 

ಯಾರಿಗೆ ಅನುಮತಿ ಅಧಿಕಾರ ? 

ಹೊಸ ಆದೇಶ ಪ್ರಕಾರ, ಶಾಲೆ, ಕಾಲೇಜು ಆವರಣಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡುವ ಅಧಿಕಾರ ಶಿಕ್ಷಣ ಇಲಾಖೆಗೆ ಸೇರಿದೆ. ಆಟದ ಮೈದಾನ, ಪಾರ್ಕ್ ಮತ್ತು ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿ ಸಿದಂತೆ ಅನುಮತಿ ನೀಡಲು ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಕ್ಷಮ ಪ್ರಾಧಿಕಾರಗಳಾಗಿರುತ್ತವೆ. ಸಾರ್ವಜನಿಕ ರಸ್ತೆಗಳು, ಸರಕಾರದ ಇತರ ಆಸ್ತಿ ಮತ್ತು ಸ್ಥಳಗಳಿಗೆ ಸಂಬಂಧಿಸಿದಂತೆ ಡಿಸಿ, ಎಸ್ಪಿ ಮತ್ತು ಪೊಲೀಸ್‌ ಆಯುಕ್ತರು ಸಕ್ಷಮ ಪ್ರಾಧಿಕಾರ ಎಂದು ನಿಗದಿಪಡಿಸಲಾಗಿದೆ.

The Karnataka government has issued an official order banning private organizations — including RSS activities — from using government school and college campuses, playgrounds, and other public spaces without prior permission.