ಸುರೇಶ್ ರೈನಾ ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಲು ಅಸಲಿ ಕಾರಣವೇ ಏನು ಗೊತ್ತಾ!!

31-08-20 05:47 pm       Headline Karnataka News Network   ದೇಶ - ವಿದೇಶ

ತಮಗೆ ನೀಡಲಾಗಿದ್ದ ಹೋಟೆಲ್ ಕೊಠಡಿಯಿಂದ ಸಂತುಷ್ಟರಾಗದೆ ಐಪಿಎಲ್ ಬಿಟ್ಟು ಭಾರತಕ್ಕೆ ಮರಳಿದ ಸಿ ಎಸ್ ಕೆ ಆಟಗಾರ ರೈನಾ

ಚೆನ್ನೈ, ಆಗಸ್ಟ್.31: ಚೆನ್ನೈ ಸೂಪರ್ ಕಿಂಗ್ಸ್  ಆಟಗಾರ ಸುರೇಶ್ ರೈನಾ ಆಗಸ್ಟ್ 29 ರಂದು ಅರ್ಧಕ್ಕೆ ಭಾರತಕ್ಕೆ ವಾಪಾಸ್ಸಾಗಿದ್ದು,  ವೈಯಕ್ತಿಕ ಕಾರಣದಿಂದ ಅವರು ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಫ್ರಾಂಚೈಸಿ ಸಿಇಒ ಕೆ. ಎಸ್. ವಿಶ್ವನಾಥನ್ ಹೇಳಿಕೆ ನೀಡಿದ್ದರು. ಆದರೆ, ಅಸಲಿ ಕಾರಣ ಬೇರೆಯೇ ಇದೆ.

ತಮಗೆ ನೀಡಲಾಗಿದ್ದ ಹೋಟೆಲ್ ಕೊಠಡಿಯಿಂದ ರೈನಾ ಸಂತುಷ್ಟರಾಗಿಲ್ಲವೆಂದು ವರದಿಯೊಂದು ಹೇಳಿದೆ. ತಂಡದ ಕಪ್ತಾನ ಎಂ ಎಸ್ ಧೋನಿ ಅವರಿಗೆ ನೀಡಲಾಗಿರುವ ಕೊಠಡಿಯಂತಹದ್ದೇ ಕೊಠಡಿಯನ್ನು ತನಗೆ ನೀಡಬೇಕೆಂದು ರೈನಾ ಬಯಸಿದ್ದರೆನ್ನಲಾಗಿದೆ.

ಈಗಾಗಲೇ ಇಬ್ಬರು ಆಟಗಾರರಿಗೆ  ಹಾಗೂ ತಂಡದ ಇತರ ಕೆಲ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಆಗಿರುವುದು ಒಂದೆಡೆಯಾದರೆ ಇನ್ನೊಂದೆಡೆ ಸುರೇಶ್ ರೈನಾ ದಿಢೀರನೇ ತಾಯ್ನಾಡಿಗೆ ಮರಳಿರುವುದು ತಂಡಕ್ಕೆ ಹೊಡೆತ ನೀಡಿದೆಯಾದರೂ ಈ ಕುರಿತು ಪ್ರತಿಕ್ರಿಯಿಸಿರುವ ತಂಡದ ಮಾಲಕ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, “ ಚೆನ್ನೈ ಸೂಪರ್ ಕಿಂಗ್ಸ್ ಯಾವತ್ತೂ  ಒಂದು ಕುಟುಂಬದಂತೆ, ಎಲ್ಲಾ ಹಿರಿಯ ಆಟಗಾರರು ಜತೆಯಾಗಿಯೇ ಇದ್ದಾರೆ. ಆದರೆ ಯಾರಾದರೂ ಖುಷಿಯಾಗಿಲ್ಲದೇ ಇದ್ದರೆ ಅವರು ವಾಪಸಾಗಬಹುದು. ಯಾರ ಮೇಲೂ ಒತ್ತಡ ಹೇರುವುದಿಲ್ಲ, ಆದರೆ ಕೆಲವೊಮ್ಮೆ  ಯಶಸ್ಸು ತಲೆಗೇರುತ್ತದೆ, ಐಪಿಎಲ್ ಇನ್ನೂ ಆರಂಭಗೊಂಡಿಲ್ಲ ತಾನೇನು ಕಳೆದುಕೊಳ್ಳುತ್ತೇನೆ ಹಾಗೂ ಎಷ್ಟು ಹಣ ಕಳೆದುಕೊಳ್ಳುತ್ತೇನೆ ( ರೂ 11 ಕೋಟಿ) ಎಂಬ ಕುರಿತು ರೈನಾಗೆ ಅರಿವಾಗುತ್ತದೆ” ಎಂದು ಅವರು ಹೇಳಿದರು.