ಸ್ವಂತ ಮಗಳಂತೆ ತನ್ನ ಮಾತುಗಳನ್ನು ಆಲಿಸಿದ ರಾಜ್ಯಪಾಲರು: ಕಂಗನಾ ರನೌತ್

13-09-20 08:04 pm       Dhruthi Anchan - Correspondent   ದೇಶ - ವಿದೇಶ

ಶಿವಸೇನೆ ಜೊತೆಗಿನ ವಾಕ್ಸಮರ ಮತ್ತು ಮುಂಬೈ ಮಹಾನಗರ ಪಾಲಿಕೆ, ಬಾಂದ್ರಾದಲ್ಲಿರುವ ಕಂಗನಾ ಕಚೇರಿಯನ್ನು ಒಡೆದು ಹಾಕಿದ ನಂತರ ಕಂಗನಾ, ರಾಜ್ಯಪಾಲರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ, ಸೆಪ್ಟೆಂಬರ್.13 : ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಆಕೆಯ ಸಹೋದರಿ ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ರಾಜಭವನದಲ್ಲಿ ಭೇಟಿಯಾದರು.

ರಾಜ್ಯಪಾಲರ ಜೊತೆಗೆ 45 ನಿಮಿಷಗಳ ಕಾಲ ನಡೆದ ಮಾತುಕತೆಯ ನಂತರ, ಮಾತನಾಡಿದ ನಟಿ ಕಂಗನಾ ರನೌತ್ 'ನಾನು ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ನನಗಾದ ಅನ್ಯಾಯದ ಬಗ್ಗೆ ಹೇಳಿದ್ದೇನೆ. ನನಗೆ ನ್ಯಾಯ ದೊರೆಯಲಿದೆ. ಆ ಮೂಲಕ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರ ನಂಬಿಕೆಯನ್ನು ವ್ಯವಸ್ಥೆಯಲ್ಲಿ ಮರಳಿ ಸ್ಥಾಪಿಸಿದಂತಾಗುತ್ತದೆ ಎಂದು ನಾನು ಭಾವಿಸುತ್ತೇನೆ. ರಾಜ್ಯಪಾಲರು ತಮ್ಮ ಮಗಳಂತೆ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಅದು ನನ್ನ ಅದೃಷ್ಟ' ಎಂದು ತಿಳಿಸಿದ್ದಾರೆ.

ಶಿವಸೇನೆ ಆಳ್ವಿಕೆಯ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಉಪನಗರ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಕಂಗನಾ ಅವರ ಕಛೇರಿಯನ್ನು ಅಕ್ರಮ ಕಟ್ಟಡವೆಂದು  ಕೆಡವಿದ ಕೆಲ ದಿನಗಳ ನಂತರ ಈ ಮಹತ್ವದ ಭೇಟಿ ನಡೆದಿದೆ