ಪ್ರತೀಕಾರಕ್ಕಾಗಿ ವಿಧಾನ ಪರಿಷತ್ ರದ್ದುಪಡಿಸಲು ಹೊರಟ್ರಾ ಜಗನ್ ರೆಡ್ಡಿ ?

15-09-20 12:58 pm       Headline Karnataka News Network   ದೇಶ - ವಿದೇಶ

ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ರದ್ದುಗೊಳಿಸಲು ಕೇಂದ್ರ ಸರಕಾರ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳಬೇಕೆಂದು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮನವಿ ಮಾಡಿದ್ದಾರೆ.

ಅಮರಾವತಿ, ಸೆಪ್ಟಂಬರ್ 15: ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ರದ್ದುಗೊಳಿಸಲು ಕೇಂದ್ರ ಸರಕಾರ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳಬೇಕೆಂದು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ವೈಎಸ್ಆರ್ ಪಕ್ಷದ ಸಂಸದರಿಗೆ ಜಗನ್ ರೆಡ್ಡಿ ಸೂಚನೆ ನೀಡಿದ್ದಾರೆ. ಎಪಿ ದಿಶಾ ಕ್ರಿಮಿನಲ್ ಲಾ (ತಿದ್ದುಪಡಿ) ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ರಾಷ್ಟ್ರಪತಿ ಅಂಕಿತ ಬೀಳುವಂತೆ ಮಾಡಲು ಕೇಂದ್ರವನ್ನು ಮನವಿ ಮಾಡಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆ ಕಳೆದ ಜನವರಿ 27ರಂದು ವಿಧಾನ ಪರಿಷತ್ ರದ್ದುಗೊಳಿಸಲು ನಿರ್ಣಯ ತೆಗೆದುಕೊಂಡಿತ್ತು. ಆದರೆ ಸಂವಿಧಾನಾತ್ಮಕ ಅಂಗವೊಂದನ್ನು ರದ್ದುಪಡಿಸಲು ಕೇಂದ್ರ ಸರಕಾರದ ಅನುಮತಿ ಬೇಕಾಗುತ್ತದೆ. ಅದಕ್ಕಾಗಿ ಈಗ ಸಂಸತ್ತಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಂತೆ ತನ್ನ ಸಂಸದರಿಗೆ ಜಗನ್ ರೆಡ್ಡಿ ಒತ್ತಾಯಿಸಿದ್ದಾರೆ. 58 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ತೆಲುಗು ದೇಶಂ ಪಕ್ಷದ ಸದಸ್ಯರು ಬಹುಮತ ಹೊಂದಿದ್ದು, ಶಾಸನ ಸಭೆಯಲ್ಲಿ ಪಾಸ್ ಮಾಡಿದ ಪ್ರಮುಖ ಮಸೂದೆಗಳು ಜಾರಿಯಾಗದೆ ಉಳಿದುಕೊಂಡಿವೆ. ಇದಕ್ಕಾಗಿ ವಿಧಾನ ಪರಿಷತ್ತನ್ನೇ ರದ್ದುಪಡಿಸುವ ಅಪಾಯಕಾರಿ ನಡೆಗೆ ಅಲ್ಲಿನ ಮುಖ್ಯಮಂತ್ರಿ ಮುಂದಾಗಿದ್ದಾರೆ.

ಕಳೆದ ವರ್ಷ ಯುವತಿ ಒಬ್ಬಳ ರೇಪ್ ಅಂಡ್ ಮರ್ಡರ್ ಪ್ರಕರಣ ಸಂಚಲನ ಮೂಡಿಸಿದ ಸಂದರ್ಭದಲ್ಲಿ ಶೀಘ್ರ ತನಿಖೆಗಾಗಿ ಆಂಧ್ರ ಪ್ರದೇಶ ಸರಕಾರ ದಿಶಾ ಹೆಸರಲ್ಲಿ ಎಪಿ ದಿಶಾ ಕ್ರಿಮಿನಲ್ ಬಿಲ್ ತಂದಿತ್ತು. ಆದರೆ ಈ ಮಸೂದೆ ರಾಷ್ಟ್ರಪತಿ ಅಂಕಿತ ಸಿಗದೆ ಇನ್ನೂ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ವಿಧಾನ ಪರಿಷತ್ ರದ್ದು ಮತ್ತು ರಾಷ್ಟ್ರಪತಿ ಅಂಕಿತ ಎರಡು ವಿಚಾರದಲ್ಲೂ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಿಎಂ ಜಗನ್ ರೆಡ್ಡಿ ತಂತ್ರ ರೂಪಿಸಿದ್ದಾರೆ.