ಮದುವೆ ಮನೆಯಲ್ಲಿ ಕಳವಾದ ಸರಕ್ಕಾಗಿ ದೈವಕ್ಕೆ ಮೊರೆ ; ಹತ್ತು ದಿನದಲ್ಲಿ ದೈವದ ಗುಡಿಯಲ್ಲೇ ಸರ ಪತ್ತೆ ! 

28-05-22 06:37 pm       Udupi Correspondent   ಕರಾವಳಿ

ಮದುವೆ ಮನೆಯಲ್ಲಿ ಕಳವಾಗಿದ್ದ ಮಗುವಿನ ಚಿನ್ನದ ಸರವೊಂದು ದೈವ ಸನ್ನಿಧಿಯಲ್ಲಿ ಪತ್ತೆಯಾದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. 

ಉಡುಪಿ, ಮೇ 28 : ಮದುವೆ ಮನೆಯಲ್ಲಿ ಕಳವಾಗಿದ್ದ ಮಗುವಿನ ಚಿನ್ನದ ಸರವೊಂದು ದೈವ ಸನ್ನಿಧಿಯಲ್ಲಿ ಪತ್ತೆಯಾದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. 

ಮೇ 18ರಂದು ನಡೆದ ಪಡುಬಿದ್ರೆಯ ಮದುವೆ ಸಭಾಂಗಣದಲ್ಲಿ ಮಗುವಿನ ಚಿನ್ನದ ಸರ ಕಳವಾಗಿತ್ತು. ಇದರಿಂದ ನೊಂದ ಮಗುವಿನ ಕುಟುಂಬಸ್ಥರು ಕುಟುಂಬದ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ, ಕದ್ದವನಿಗೆ ತಕ್ಕ ಶಾಸ್ತಿ ಮಾಡುವಂತೆ ಕೇಳಿಕೊಂಡಿದ್ದರು. 

ಆದರೆ ಹತ್ತು ದಿನಗಳ ಬಳಿಕ ಪಡುಬಿದ್ರಿ ಸಮೀಪದ ಬೆಳಪು ಪಣಿಯೂರಿನಲ್ಲಿರುವ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವ ಸಾನಿಧ್ಯದಲ್ಲಿ ಸರ ಪತ್ತೆಯಾಗಿದ್ದು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ದೈವದ ಗುಡಿಯ ಮುಂದೆ ಉರಿಯುತ್ತಿದ್ದ ಕಾಲು ದೀಪದ ತಳದಲ್ಲಿ ಚಿನ್ನದ ಸರ ಕಂಡುಬಂದಿದ್ದು ಕದ್ದೊಯ್ದವರೇ ಸರವನ್ನು ದೈವದ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ.‌ ಕುಟುಂಬಸ್ಥರು ದೈವಕ್ಕೆ ಹರಕೆ ಹೇಳಿಕೊಂಡಿದ್ದನ್ನು ತಿಳಿದ ವ್ಯಕ್ತಿ ಭಯಗೊಂಡು ಸರವನ್ನು ಮರಳಿಸಲು ದೈವದ ಮುಂದೆಯೇ ಇಟ್ಟು ಹೋಗಿದ್ದಾನೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

Udupi Gold ornament of baby goes missing during wedding event found at temple in Padubidri.