ಹಿಜಾಬ್ ದೂರು ಒಯ್ದ ವಿದ್ಯಾರ್ಥಿನಿಯರಿಗೆ ನಿರಾಶೆ, ಸಿಂಡಿಕೇಟ್ ನಿರ್ಣಯದ ಬಗ್ಗೆ ಮಧ್ಯಪ್ರವೇಶ ಸಾಧ್ಯವಿಲ್ಲ ; ದ.ಕ. ಜಿಲ್ಲಾಧಿಕಾರಿ

30-05-22 02:10 pm       Mangalore Correspondent   ಕರಾವಳಿ

ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಬಳಿ ಹೋಗಿದ್ದ ವಿದ್ಯಾರ್ಥಿನಿಯರಿಗೆ ನಿರಾಶೆಯಾಗಿದೆ.

ಮಂಗಳೂರು, ಮೇ 30: ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಬಳಿ ಹೋಗಿದ್ದ ವಿದ್ಯಾರ್ಥಿನಿಯರಿಗೆ ನಿರಾಶೆಯಾಗಿದೆ. ಹಂಪನಕಟ್ಟೆ ಪದವಿ ಕಾಲೇಜಿನ 16 ಮಂದಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಕೊಂಡೇ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು, ತಮ್ಮ ಅಹವಾಲನ್ನು ಜಿಲ್ಲಾಧಿಕಾರಿ ಬಳಿ ಹೇಳಿಕೊಂಡಿದ್ದರು. ಆದರೆ, ಮಂಗಳೂರು ವಿವಿಯ ಸಿಂಡಿಕೇಟ್ ನಿರ್ಧಾರದ ಬಗ್ಗೆ ಜಿಲ್ಲಾಡಳಿತ ವಿಮರ್ಶೆ ಮಾಡಲು ಬರುವುದಿಲ್ಲ ಎಂದು ಹೇಳಿ ಜಿಲ್ಲಾಧಿಕಾರಿ ಕಾನೂನು ಸಂಕೋಲೆಯಿಂದ ತಪ್ಪಿಸಿಕೊಂಡಿದ್ದಾರೆ.

ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿನಿಯರ ಜೊತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತುಕತೆ ನಡೆಸಿದ್ದಾರೆ. ಹೈಕೋರ್ಟ್ ತೀರ್ಪು ಪದವಿ ಕಾಲೇಜಿಗೆ ಅನ್ವಯ ಆಗುತ್ತಾ ಎನ್ನುವ ಬಗ್ಗೆ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಬಳಿ ಪ್ರಶ್ನೆ ಮಾಡಿದ್ದರು. ಆದರೆ ಮಂಗಳೂರು ವಿವಿ ಸ್ವಾಯತ್ತ ಸಂಸ್ಥೆಯಾಗಿದ್ದು, ಹೈಕೋರ್ಟ್ ತೀರ್ಪು ಆಧರಿಸಿ ಸಿಂಡಿಕೇಟ್ ಸಭೆ ನಿರ್ಣಯ ತೆಗೆದುಕೊಂಡಿದೆ. ಅದರ ಬಗ್ಗೆ ಜಿಲ್ಲಾಡಳಿತ ಮೂಗು ತೂರಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕೋರ್ಟ್ ತೀರ್ಪನ್ನು ಪಾಲಿಸಬೇಕೆಂದು ಕಾಲೇಜಿನ ಆಡಳಿತವೂ ನಿರ್ಧಾರಕ್ಕೆ ಬಂದಿದೆ. ಕಾಲೇಜಿನಲ್ಲಿ ಯಾವುದೇ ಕಾರಣಕ್ಕೂ ಗೊಂದಲ ಉಂಟಾಗಬಾರದು. ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗಲು ಕಾಲೇಜಿನ ಆಡಳಿತ ವ್ಯವಸ್ಥೆ ಮಾಡಿದೆ. ಅದರಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾರ್ಥಿನಿಯರಿಗೆ ತಿಳಿಸಿದ್ದಾರೆ.

ಸಭೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಹೈಕೋರ್ಟ್ ತೀರ್ಪಿನ ಬಗ್ಗೆ ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದನ್ನು ತಿಳಿಸಿದ್ದೇನೆ. ವಿವಿ ವ್ಯಾಪ್ತಿಯ ಕಾಲೇಜುಗಳು ಸಿಂಡಿಕೇಟ್ ನಿರ್ಣಯವನ್ನು ಪಾಲನೆ ಮಾಡಬೇಕಾಗುತ್ತದೆ. ಸಿಂಡಿಕೇಟ್ ನಿರ್ಣಯದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತೀರ್ಮಾನಿಸಲು ಅಥವಾ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಸಿಂಡಿಕೇಟ್ ನಿರ್ಣಯದ ಬಗ್ಗೆ ವಿದ್ಯಾರ್ಥಿನಿಯರು, ದಾಖಲೆ ಇದೆಯೇ ಎಂದು ಕೇಳಿದ್ದಾರೆ. ಅದರ ಬಗ್ಗೆ ಕಾನೂನು ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಕಾಲೇಜು ಕ್ಯಾಂಪಸ್ ನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವಂತೆ ಆಗಬಾರದು ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

ಪದವಿ ಕಾಲೇಜುಗಳಿಗೆ ಕೋರ್ಟ್ ಆದೇಶ ಅನ್ವಯ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಕಾಲೇಜುಗಳ ಬಗ್ಗೆ ಆಯಾ ಶಿಕ್ಷಣ ಸಂಸ್ಥೆಗಳು ನಿಯಮ ರೂಪಿಸುತ್ತವೆ. ಹಂಪನಕಟ್ಟೆ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವುದರಿಂದ ಅದರ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಲು ಬರುವುದಿಲ್ಲ. ಆದರೆ ಕಾನೂನು ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜಬಾವ್ದಾರಿ ನನಗಿದೆ. ಹಾಗಾಗಿ ಕಾಲೇಜು ಆವರಣದಲ್ಲಿ ಗೊಂದಲಕ್ಕೆ ಅವಕಾಶ ಮಾಡದಂತೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಾಳೆ ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಹುದೇ ಎಂದು ಕೇಳಿದ್ದಕ್ಕೆ, ಅದು ಅವರಿಗೆ ಬಿಟ್ಟಿದ್ದು, ನನಗೇನು ಗೊತ್ತಿಲ್ಲ ಎಂದರು ಜಿಲ್ಲಾಧಿಕಾರಿ.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕೊಠಡಿಯಿಂದ ಸಭೆ ಮುಗಿಸಿ ಹೊರಬಂದ ವಿದ್ಯಾರ್ಥಿನಿಯರು ನೇರವಾಗಿ ಅಲ್ಲಿಂದ ಹೊರ ತೆರಳಿದ್ದಾರೆ. ಈ ವೇಳೆ, ವಿದ್ಯಾರ್ಥಿನಿ ಗೌಸಿಯಾ ಎಂಬವರು ಜಿಲ್ಲಾಧಿಕಾರಿ ಜೊತೆಗಿನ ಸಭೆಯಲ್ಲಿ ಯಾವುದೇ ನಿರ್ಣಯ ಆಗಿಲ್ಲ ಎಂದಿದ್ದಾರೆ.

ಹಂಪನಕಟ್ಟೆ ಕಾಲೇಜಿನಲ್ಲಿ ಮತ್ತೆ ಹೈಡ್ರಾಮಾ ; ತರಗತಿ ಬಹಿಷ್ಕರಿಸಿ 16 ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಬಳಿಗೆ ! ಹೈಕೋರ್ಟ್ ತೀರ್ಪಿನ ಬಗ್ಗೆ ವಿಮರ್ಶೆ ಡೀಸಿ ಹೊಣೆ ! 

Hijab row in Mangalore, DC Rajendra says can't interfere in Syndicate decision, students disappointed. 16 Hijab students who approached the DC for help came out disappointed as Dc stated that he can't intervene in the Syndicate matter. He said that the students must abide by the court order and follow college regulations. 16 students were sent back from college as they didn't agree to remove the hijab.