ದೇಶವನ್ನು ಪೂಜೆ ಮಾಡೋರು ನಪುಂಸಕರಾ? ಇಟಲಿ ಮಹಿಳೆಯ ಪಾದಪೂಜೆ ಮಾಡೋರು ನಪುಂಸಕರಾ ? ಕಲ್ಲಡ್ಕ ಭಟ್ ಗರಂ 

30-05-22 10:52 pm       Mangalore Correspondent   ಕರಾವಳಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್​​ಎಸ್​ಎಸ್)​ ನಪುಂಸಕರು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ಆರ್​ಎಸ್ಎಸ್​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ದೇಶವನ್ನು ಪೂಜೆ ಮಾಡುವವರು ನಪುಂಸಕರಾ ಎಂದು ಪ್ರಶ್ನಿಸಿದ್ದಾರೆ. 

ಬಂಟ್ವಾಳ, ಮೇ 30 : ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್​​ಎಸ್​ಎಸ್)​ ನಪುಂಸಕರು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ಆರ್​ಎಸ್ಎಸ್​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ದೇಶವನ್ನು ಪೂಜೆ ಮಾಡುವವರು ನಪುಂಸಕರಾ ಎಂದು ಪ್ರಶ್ನಿಸಿದ್ದಾರೆ. 

ಕಲ್ಕಡ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಯ- ದ್ರಾವಿಡ ಎನ್ನುವುದು ಇಂಗ್ಲಿಷರು ಮಾಡಿದ ಸಂಸ್ಕೃತಿ. ಹೇಳಿ ಕೇಳಿ ಇವರು ಇಟಲಿಯಲ್ಲಿದ್ದ ಮಹಿಳೆಯ ಪಾದಪೂಜೆ ಮಾಡುತ್ತಾರಲ್ವಾ, ಅವರನ್ನು ಪೂಜೆ ಮಾಡುವವರು ನಪುಂಸಕರಾ? ದೇಶವನ್ನು ಪೂಜೆ ಮಾಡುವವರು ನಪುಂಸಕರಾ? ಎಂದು ಪ್ರಶ್ನಿಸಿದರು.

ಹಿಂದೊಮ್ಮೆ ಮುಸ್ಲಿಮರೇ ಇದ್ದ ವಿಮಾನ ದುರಂತ ಸಂಭವಿಸಿದ ಸಂದರ್ಭ ರಕ್ಷಣಾ ಕಾರ್ಯಕ್ಕೆ ತಕ್ಷಣ ಧಾವಿಸಿದ ಆರ್​ಎಸ್​ಎಸ್​ ಕಾರ್ಯಕರ್ತರನ್ನು ಆಗಿನ ವಿಮಾನಯಾನ ಸಚಿವ ಸಿ.ಎಂ ಇಬ್ರಾಹಿಂ ಅವರೇ ಪ್ರಶಂಸಿಸಿದ್ದರು. ದಿನನಿತ್ಯ ಭಾರತ ಮಾತಾ ಕಿ ಜೈ ಎನ್ನುವವರು ಆರ್​ಎಸ್​ಎಸ್​ನವರು. ಇಟಲಿಯಿಂದ ಬಂದವರಿಗೆ ಜೈಕಾರ ಹಾಕುವವರು ಅವರು. ದೇಶದ ವಿಭಜನೆ ಮಾಡಿದ್ದು ಯಾರು ಹೇಳಿ? ಆರ್​ಎಸ್ಎಸ್ಸಾ?. ವಿಶ್ವ ಹಿಂದೂ ಪರಿಷತ್ತಾ? ಇದೇ ನೆಹರೂ, ಗಾಂಧಿ, ಮುಸ್ಲಿಂ ಲೀಗ್ ಮಾಡಿದ್ದಲ್ವಾ? ಎಂದು ಪ್ರಶ್ನಿಸಿದ ಡಾ. ಭಟ್, ಹೊರಗಿನಿಂದಷ್ಟೇ ಅಲ್ಲ, ಒಳಗಿನಿಂದಲೂ ಪಾಕಿಸ್ತಾನ ಜಿಂದಾಬಾದ್ ಎನ್ನುವುದಕ್ಕೆ ಕಾರಣ ಕಾಂಗ್ರೆಸ್ ಅಲ್ವಾ ಎಂದು ಪ್ರಶ್ನಿಸಿದರು.

ಪಠ್ಯಪುಸ್ತಕ ಬರಲಿ, ಆವಾಗ ಅದರಲ್ಲೇನಿದೆ ಅನ್ನೋದು ಗೊತ್ತಾಗುತ್ತದೆ. ಅದಕ್ಕೂ ಮೊದಲೇ ಪೂರ್ವಗ್ರಹ ಪೀಡಿತವಾಗಿ ಪಠ್ಯಪುಸ್ತಕ ಕುರಿತು ವಿವಾದ ಮಾಡುವುದು ಸರಿಯಲ್ಲ ಎಂದರು.

ತಲೆತಲಾಂತರದಿಂದ ಹಿಂದೂಗಳು ನಾವು. ಹಿಂದೂ ಧರ್ಮ ಎಲ್ಲರನ್ನೂ ಒಟ್ಟು ಸೇರಿಸಿ, ಎಲ್ಲರೊಂದಿಗೆ ಜೊತೆಯಲ್ಲಿ ಸಾಗುವ ಧರ್ಮ. ಈ ಧರ್ಮದ ಬಗ್ಗೆ ಹೇಳಿದರೂ ತಪ್ಪು ಎನ್ನಲಾಗುತ್ತಿದೆ. ಕ್ರಿಶ್ಚಿಯನ್ನರ ಬಗ್ಗೆ, ಔರಂಗಜೇಬರ ಬಗ್ಗೆ ಹೇಳಿದರೆ ತಪ್ಪಲ್ಲ. ಹೆಡಗೇವಾರ್ ಬರೆದದ್ದನ್ನು ಹೇಳಿದರೆ ತಪ್ಪು ಹೇಗಾಗುತ್ತದೆ ಎಂದು ಕೇಳಿದ ಡಾ. ಭಟ್ ಅವರು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

Mangalore Dr Kalladka Prabhakar Bhat lashes out at Siddaramaiah for his tweets.