ಚಿಟ್ ಫಂಡ್ ಹಣ ಮರಳಿಸದೆ ಮೋಸ ; ಹಣ ಕೇಳಿ ಸುಸ್ತಾಗಿ ನೊಂದ ವೃದ್ಧ ಆತ್ಮಹತ್ಯೆ 

04-06-22 11:22 am       Mangalore Correspondent   ಕರಾವಳಿ

ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರಿಗೆ ಇಬ್ಬರು ಚಿಟ್ ಫಂಡ್ ಹಣ ಮರಳಿಸದೆ ಮೋಸ ಮಾಡಿದ್ದು, ಹಣ ಕೇಳಿ ಸುಸ್ತಾದ ವೃದ್ಧ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಾಡೂರು ಶಾಲೆ ಬಳಿ ನಡೆದಿದೆ. 

ಉಳ್ಳಾಲ, ಜೂ.4: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರಿಗೆ ಇಬ್ಬರು ಚಿಟ್ ಫಂಡ್ ಹಣ ಮರಳಿಸದೆ ಮೋಸ ಮಾಡಿದ್ದು, ಹಣ ಕೇಳಿ ಸುಸ್ತಾದ ವೃದ್ಧ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಾಡೂರು ಶಾಲೆ ಬಳಿ ನಡೆದಿದೆ. 

ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆ ಬಳಿಯ ನಿವಾಸಿ ಜಯರಾಮ ಶೆಟ್ಟಿ(71) ಆತ್ಮಹತ್ಯೆಗೈದ ದುರ್ದೈವಿ. ಜಯರಾಮ ಅವರು ಇಂದು ಬೆಳಗ್ಗೆ ಮನೆಯ ಕೋಣೆಯೊಳಗೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿ ಲೀನಾ ಜೆ ಶೆಟ್ಟಿ ಅವರು ಬೆಳಗ್ಗೆ ಚಹಾ ಕೊಡಲೆಂದು ಹೋಗುವಾಗ ಪ್ರಕರಣ ಬೆಳಕಿಗೆ ಬಂದಿದೆ. 

ಜಯರಾಮ್ ಶೆಟ್ಟಿ ಅವರು ಮಾಡೂರು ಬಸ್ಸು ತಂಗುದಾಣದ ಬಳಿಯ ಪಂಚಾಯತ್ ಕಟ್ಟಡದ ಅಂಗಡಿಯಲ್ಲಿ ಸೀಯಾಳ ವ್ಯಾಪಾರಿಯಾಗಿದ್ದು , ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರಂತೆ. ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ ಎಂಬಂತೆ ಜಯರಾಮ್ ಶೆಟ್ಟಿ ಅವರ ಚಿಟ್ ಫಂಡ್ ಹಣ ಇಸ್ಕೊಂಡವರು ಹಣ ಮರಳಿಸದೆ ಮೋಸ ಮಾಡಿದ್ದರಂತೆ. ಇದರಿಂದ ಜಯರಾಮ ಶೆಟ್ಟಿ ಅವರು ನಷ್ಟ ಅನುಭವಿಸಿದ್ದು ಅದರ ಚಿಂತೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ಅವರ ಪತ್ನಿ ಲೀನಾ ಪೊಲೀಸರಿಗೆ ದೂರು ನೀಡಿದ್ದಾರೆ.

ಜಯರಾಮ್ ಶೆಟ್ಟಿ ಅವರ ಪತ್ನಿ ಲೀನಾ ಜೆ ಶೆಟ್ಟಿ ಅವರು ಕೋಟೆಕಾರು ಪಂಚಾಯತ್ ಮಾಜಿ ಸದಸ್ಯರಾಗಿದ್ದಾರೆ. ಮೃತ ಜಯರಾಮ್ ಅವರು ಪತ್ನಿ, ಮೂರು ಪುತ್ರಿಯರು, ಮೊಮ್ಮಕ್ಕಳನ್ನ ಅಗಲಿದ್ದಾರೆ. ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

Mangalore 71 year old man commits suicide due to loss in chit fund finance at Maduru in Ullal. The deceased has been identified as Jayaram Shetty (71)