ವೃತ್ತಿಯಲ್ಲಿ ಪೊಲೀಸ್, ಪ್ರವೃತ್ತಿಯಲ್ಲಿ ಚಿತ್ರ ಕಲಾವಿದ ! ಈತನ ಕುಂಚದಲ್ಲರಳುತ್ತಿವೆ ಮುಖದ ಪಡಿಯಚ್ಚು ! ಪೆನ್ಸಿಲ್ ಆರ್ಟ್ ಕರತಲಾಮಲಕ ! 

10-06-22 06:52 pm       Mangalore Correspondent   ಕರಾವಳಿ

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕೀರ್ತಿ ಶೇಷ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು, ಐಎಎಸ್ ಅಧಿಕಾರಿ ಸಿಂಧು ರೂಪೇಶ್ ಹೀಗೆ ಅಧಿಕಾರಿಗಳು, ಗಣ್ಯರು ಸೇರಿದಂತೆ ಹೆಸರಾಂತ ಸಿನಿಮಾ ಕಲಾವಿದರ ಭಾವಚಿತ್ರಗಳನ್ನು ತನ್ನ ಕೈಚಳಕದಲ್ಲಿ ಮೂಡಿಸಿದವರು ಮಂಗಳೂರಿನ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿರುವ ಚಿತ್ರಕಲಾವಿದ ಮಹೇಶ್ ಆಚಾರ್ಯ. 

ಮಂಗಳೂರು, ಜೂ.10 : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕೀರ್ತಿ ಶೇಷ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು, ಐಎಎಸ್ ಅಧಿಕಾರಿ ಸಿಂಧು ರೂಪೇಶ್ ಹೀಗೆ ಅಧಿಕಾರಿಗಳು, ಗಣ್ಯರು ಸೇರಿದಂತೆ ಹೆಸರಾಂತ ಸಿನಿಮಾ ಕಲಾವಿದರ ಭಾವಚಿತ್ರಗಳನ್ನು ತನ್ನ ಕೈಚಳಕದಲ್ಲಿ ಮೂಡಿಸಿದವರು ಮಂಗಳೂರಿನ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿರುವ ಚಿತ್ರಕಲಾವಿದ ಮಹೇಶ್ ಆಚಾರ್ಯ. 

ಮಂಗಳೂರಿನ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಆಚಾರ್ಯ ಅವರು ಪ್ರಬುದ್ಧ ಚಿತ್ರ ಕಲಾವಿದ. ಬಿಡುವಿಲ್ಲದ ಕರ್ತವ್ಯದ ನಡುವೆಯೂ ಇವರೊಳಗಿನ ಕಲಾವಿದನ ತುಡಿತ ಮಾತ್ರ ಸ್ವಲ್ಪನೂ ಇಂಗಿಲ್ಲ. ಬಿಡುವು ಸಿಕ್ಕಾಗೆಲ್ಲ ಚಿತ್ರಗಳನ್ನ ಬಿಡಿಸೋ ಹವ್ಯಾಸವನ್ನ ರೂಢಿಸಿಕೊಂಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿಣಿ ಸಿಂಧೂ ರೂಪೇಶ್, ಉಡುಪಿ ಪೇಜಾವರ ಮಠಾಧೀಶ ಕೀರ್ತಿಶೇಷ ವಿಶ್ವೇಶ್ವರ ತೀರ್ಥ ಶ್ರೀಗಳು ಮತ್ತು ಹೆಸರಾಂತ ಸಿನೆಮಾ ಸ್ಟಾರ್ ಗಳ ಚಿತ್ರಗಳನ್ನ ಮಹೇಶ್ ಅವರು ತನ್ನ ಕುಂಚದಲ್ಲಿ ಬಿಡಿಸಿದ್ದಾರೆ.

ಮಹೇಶ್ ಅವರು ಇತ್ತೀಚಿಗೆ ಸ್ಯಾಂಡಲ್ ವುಡ್ಡಲ್ಲಿ ನಟ, ನಿರ್ದೇಶಕನಾಗಿ ಮಿಂಚುತ್ತಿರುವ ಕುಡ್ಲದ ರಾಜ್ ಬಿ.ಶೆಟ್ಟಿ ಅವರ ಸುಂದರವಾದ ಪೆನ್ಸಿಲ್ ಆರ್ಟ್ ಚಿತ್ರವನ್ನ ಬಿಡಿಸಿದ್ದು ಅದನ್ನ ರಾಜ್ ಶೆಟ್ಟಿ ಅವರಿಗೆ ನೀಡಿದ್ದರು. ಮಹೇಶ್ ಅವರ ಕಲಾ ಚಾತುರ್ಯವನ್ನ ಸ್ವತಃ ರಾಜ್ ಬಿ ಶೆಟ್ಟಿ ಮೆಚ್ಚಿ ಪ್ರಶಂಸಿದ್ದಾರೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ರಾಯಪ್ಪ ಕೋಡಿ ನಿವಾಸಿಗಳಾದ ಅರುಣ್ ಆಚಾರ್ಯ ಮತ್ತು ಲಲಿತಾ ದಂಪತಿಯ ನಾಲ್ವರು ಗಂಡು ಮಕ್ಕಳಲ್ಲಿ ಮಹೇಶ್ ಎರಡನೇ ಪುತ್ರ. ಹಿರಿಯ ಅಣ್ಣ ಮನೋಜ್ ಅವರೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಿರಿಯರಾದ ಮಹೇಂದ್ರ ಮತ್ತು ಮೌನೇಶ್ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ.

ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವರೆಗೆ ಓದಿದ ಮಹೇಶ್ ನಂತರ ಮೂಲ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೈಸ್ಕೂಲ್ ವರೆಗಿನ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣದ ಬಳಿಕ ಮೆಕ್ಯಾನಿಕಲ್ ಡಿಪ್ಲೋಮಾ ಮುಗಿಸಿದ್ದಾರೆ. ಕಳೆದ ಐದು ವರುಷಗಳಿಂದ ಪೊಲೀಸ್ ಇಲಾಖೆಗೆ ಸೇರಿ ಇದೀಗ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಪದೋನ್ನತಿ ಪಡೆದು ಕರ್ತವ್ಯ ನಿರ್ಹಿಸುತ್ತಿದ್ದಾರೆ. 

ಪ್ರವೃತ್ತಿಯಲ್ಲಿ ಚಿತ್ರ ಕಲಾವಿದನಾಗಿರುವ ಮಹೇಶ್ ಅವರಿಗೆ ಮೂಕ ಪ್ರಾಣಿಗಳಲ್ಲೂ ಅಪಾರ ಪ್ರೀತಿ ಇದ್ದು ಮನೆಯಲ್ಲಿ ವಿವಿಧ ತಳಿಗಳ ನಾಯಿ, ಬೆಕ್ಕುಗಳನ್ನ ಸಾಕಿ ಅದಕ್ಕೆ ತರಬೇತಿ ನೀಡಿ ಸಲಹುತ್ತಿದ್ದಾರೆ. ವಿಶ್ವಕರ್ಮ ಜನಾಂಗದವರಲ್ಲಿ ಕಲೆ ಎಂಬುದು ರಕ್ತಗತವಾಗಿಯೇ ಬೆಳೆದು ಬಂದಿದೆಯೆಂದು ಮಹೇಶ್ ಹೇಳುತ್ತಾರೆ. ಅವರು ಹೈಸ್ಕೂಲ್ ನಲ್ಲಿರುವಾಗಲೇ ಡ್ರಾಯಿಂಗ್ ಟೀಚರ್ ಆಗಿದ್ದ ಪ್ರೇಮನಾಥ್ ಮರಣೆ ಅವರಿಂದ ಚಿತ್ರಕಲೆಯತ್ತ ಆಕರ್ಷಿತರಾಗಿ ಚಿತ್ರ ಕಲಾವಿದರಾಗಿದ್ದರು. ಹೈಸ್ಕೂಲಲ್ಲಿ ಮಹೇಶ್ ಅವರು ಬಿಡಿಸಿ ಬಹುಮಾನ ಪಡೆದಿದ್ದ ಚಿತ್ರಗಳ ಬಗ್ಗೆ ಹಲವು ಪತ್ರಿಕೆಗಳಲ್ಲಿ ವರದಿ ಬಿತ್ತರವಾಗಿತ್ತು.

ಮಹೇಶ್ ಅವರು ನಿಂತಲ್ಲೇ ಯಾವುದೇ ವ್ಯಕ್ತಿಗಳ ವ್ಯಂಗ್ಯ (ಕಾರ್ಟೂನ್) ಚಿತ್ರಗಳನ್ನ ಬಿಡಿಸುವುದರಲ್ಲೂ ನಿಸ್ಸೀಮರು. ಅವರು ಆಯಿಲ್ ಪೇಸ್ಟ್, ವಾಟರ್ ಕಲರ್, ಪೆನ್ಸಿಲ್ ಆರ್ಟ್ ಚಿತ್ರಕಲೆಗಳನ್ನ ಕರಗತ ಮಾಡಿಕೊಂಡಿದ್ದಾರೆ. ಇಷ್ಟಲ್ಲದೆ ಯುವಪೀಳಿಗೆಗೆ ಪೊಲೀಸ್ ಇಲಾಖೆಗೆ ಸೇರಲು ಸಲಹೆ ನೀಡುವುದಲ್ಲದೆ ಅದಕ್ಕೆ ಬೇಕಾದ ಅಗತ್ಯ ಮಾಹಿತಿ, ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ.

Mangalore south traffic Police constable Mahesh Acharya loves pencil art have a look.