ರಾಹುಲ್ ವಿಚಾರಣೆ ; ಮಂಗಳೂರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸಿಗರ ಧಿಕ್ಕಾರ, ಪ್ರತಿಭಟನೆ, ನಾಯಕರು ಪೊಲೀಸ್ ವಶಕ್ಕೆ

17-06-22 03:38 pm       Mangalore Correspondent   ಕರಾವಳಿ

ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಆದಾಯ ತೆರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಮಂಗಳೂರು, ಜೂನ್ 17: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಆದಾಯ ತೆರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಫಳ್ನೀರಿನ ಮಥಾಯಸ್ ಪಾರ್ಕ್ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಾ ಅತ್ತಾವರದ ಆದಾಯ ತೆರಿಗೆ ಕಚೇರಿ ಬಳಿಗೆ ತೆರಳಿದರು. ಆದರೆ, ನಡುವೆ ಪೊಲೀಸರು ಅಡ್ಡ ಹಾಕಿದ್ದು, ಬ್ಯಾರಿಕೇಡ್ ಇಟ್ಟು ಕಾರ್ಯಕರ್ತರನ್ನು ತಡೆದಿದ್ದಾರೆ. ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಪೊಲೀಸರ ತಡೆಬೇಲಿಯ ಮೇಲೇರಿ ಘೋಷಣೆ ಕೂಗಿದ್ದಾರೆ.

ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಜೆಆರ್ ಲೋಬೊ, ಐವಾನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಿಥುನ್ ರೈ ಸೇರಿದಂತೆ ಹಲವಾರು ನಾಯಕರು ಇದ್ದರು. ರಸ್ತೆ ತಡೆಯಾಗಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸರು ಕೆಲಕಾಲ ಪ್ರತಿಭಟನೆಗೆ ಅವಕಾಶ ಕೊಟ್ಟು ಬಳಿಕ ಬಂಧನಕ್ಕೆ ಮುಂದಾದರು. ಒಂದು ಕಡೆಯಿಂದ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತ ಪ್ರತಿಭಟನಾಕಾರರನ್ನು ಎತ್ತಿ ಪೊಲೀಸ್ ಬಸ್ಸಿಗೆ ಒಯ್ದರು. ರಮಾನಾಥ ರೈ ಸೇರಿದಂತೆ ಬಹುತೇಕ ಎಲ್ಲ ನಾಯಕರು, ಕಾರ್ಯಕರ್ತರನ್ನು ಬಸ್ಸಿನಲ್ಲಿ ತುಂಬಿಸಿ ಪಾಂಡೇಶ್ವರ ಠಾಣೆಗೆ ಒಯ್ದು ಬಿಟ್ಟಿದ್ದಾರೆ.

Dakshina Kannada district Congress committee staged a protest against the BJP-led union government over the Enforcement Directorate (ED) summoning Congress leader Rahul Gandhi in the National Herald case.