ಸಚಿವ ಗಡ್ಕರಿ ಹೇಳಿಯೂ ಟೋಲ್ ಗೇಟ್ ಮುಚ್ಚಿಸಲಾಗದಿದ್ದರೆ, ಭರತ್ ಶೆಟ್ಟಿ, ನಳಿನ್ ಕುಮಾರ್ ರಾಜಿನಾಮೆ ಕೊಟ್ಟು ಹೋಗಲಿ

17-06-22 09:51 pm       Mangalore Correspondent   ಕರಾವಳಿ

ಒಂದೋ ಸುಂಕ ಸಂಗ್ರಹಿಸುವುದನ್ನು ನಿಲ್ಲಿಸಬೇಕು, ಇಲ್ಲವೇ ಶಾಸಕ ಮತ್ತು ಸಂಸದರು ತಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಮಂಗಳೂರು, ಜೂನ್ 17: 60 ಕಿಮೀ ಒಳಗಿರುವ ಎಲ್ಲ ಟೋಲ್ ಗೇಟ್ ಗಳನ್ನು 90 ದಿನಗಳ ಒಳಗೆ ತೆರವುಗೊಳಿಸುವುದಾಗಿ ಸಚಿವ ಗಡ್ಕರಿ ಹೇಳಿದ್ದರು. ಸಂಸತ್ತಿನಲ್ಲಿ ಗಡ್ಕರಿ ಹೇಳಿರುವ ಮಾತನ್ನು ಉಲ್ಲೇಖಿಸಿ, ಇಲ್ಲಿನ ಶಾಸಕ, ಸಂಸದರು ಸುರತ್ಕಲ್ ಟೋಲ್ ಗೇಟ್ ಬಂದ್ ಆಗುವುದಾಗಿ ಹೇಳಿದ್ದರು. ಆದರೆ 90 ದಿನಗಳ ಗಡುವು ಮುಗಿಯಲು ಇನ್ನು ಮೂರೇ ದಿನ ಬಾಕಿಯಿದ್ದು, ಜೂನ್ 22ಕ್ಕೆ ಕೊನೆಯಾಗುತ್ತದೆ. ಒಂದೋ ಸುಂಕ ಸಂಗ್ರಹಿಸುವುದನ್ನು ನಿಲ್ಲಿಸಬೇಕು, ಇಲ್ಲವೇ ಶಾಸಕ ಮತ್ತು ಸಂಸದರು ತಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರತಿ ಬಾರಿ ಟೋಲ್ ಗೇಟ್ ವಿರೋಧಿ ಹೋರಾಟದ ಸಂದರ್ಭದಲ್ಲಿ ಗಡ್ಕರಿ ಜೊತೆಗೆ ಸಭೆ ನಡೆಸಿದ್ದಾಗಿ ಹೇಳಿ ಹೋರಾಟದ ತೀವ್ರತೆ ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಪ್ರತಿಭಟನೆ ತೀವ್ರಗೊಂಡಾಗ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಗೇಟನ್ನು ಎನ್ಎಂಪಿಟಿ ಬಂದರಿನ ಒಳಗೆ ವರ್ಗಾಯಿಸಲು ಸೂಚನೆ ನೀಡಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಒಂದೆಡೆ ಟೋಲ್ ಕೇಂದ್ರ ಅಕ್ರಮ ಎಂದು ಒಪ್ಪಿಕೊಂಡು ರದ್ದುಪಡಿಸುವ ಹೇಳಿಕೆ ನೀಡಿ, ಹೋರಾಟದ ಕಾವು ಕಡಿಮೆಯಾದಾಗ ಮೌನ ತಾಳುವುದು ಜನರಿಗೆ ಮಾಡುವ ದ್ರೋಹ.

ಹಾಗಾಗಿ ಸುರತ್ಕಲ್ ಅಕ್ರಮ ಟೋಲ್ ಕೇಂದ್ರ ಮುಂದುವರಿಯುವುದಕ್ಕೆ ಸಂಸದ ನಳಿನ್ ಕುಮಾರ್ ಮತ್ತು ಶಾಸಕ ಭರತ್ ಶೆಟ್ಟಿಯೇ ಕಾರಣ. ಟೋಲ್ ಕೇಂದ್ರ ವಿಚಾರದಲ್ಲಿ ತಮ್ಮ ವೈಫಲ್ಯ ಒಪ್ಪಿಕೊಂಡು ರಾಜಿನಾಮೆ ಕೊಟ್ಟು ಹೋಗಲಿ. ಟೋಲ್ ಕೇಂದ್ರ ಮುಚ್ಚಿಸದಿದ್ದರೆ ಈ ಕುರಿತ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಟೋಲ್ ಗೇಟ್ ವಿರೋಧಿ ಹೋರಾಟಗಾರರು ಹಣ ಪಡೆದಿದ್ದಾಗಿ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ. ಟೋಲ್ ವಿರುದ್ಧ ಜನರೇ ಹೋರಾಟ ನಡೆಸುತ್ತಿರುವುದನ್ನು ನಕಲಿ ಎನ್ನುತ್ತಿರುವುದು ಶಾಸಕರ ಹತಾಶೆಯನ್ನು ತೋರಿಸುತ್ತದೆ. ಯಾವುದೇ ಆಧಾರ ಇಲ್ಲದೆ ಒಬ್ಬ ಜನಪ್ರತಿನಿಧಿ ಇಂತಹ ಆರೋಪ ಹೊರಿಸುವುದನ್ನು ಖಂಡಿಸುತ್ತೇವೆ.

ಹಣ ಪಡೆದಿದ್ದರೆ ಬಹಿರಂಗಪಡಿಸಿ, ಇಲ್ಲವೇ ಕ್ಷಮೆ ಯಾಚಿಸಿ

ಹಣ ಪಡೆದಿರುವುದು ತಿಳಿದಿದ್ದರೆ, ವಿವಿರ ಬಹಿರಂಗ ಪಡಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಹಣ ಪಡೆದಿರುವ ಆರೋಪ ಇದ್ದರೆ, ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟುವ ಕೆಲಸ ಮಾಡಲಿ. ಕ್ಷೇತ್ರದ ಶಾಸಕರಾಗಿ ತಮ್ಮ ವೈಫಲ್ಯ ಮುಚ್ಚಿ ಹಾಕಲು ಯಾರದ್ದೋ ಮೇಲೆ ಆರೋಪ ಹೊರಿಸುವುದಲ್ಲ. ಶಾಸಕರು ತಾವೇ ಸ್ವತಃ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಇವರು ಹೋರಾಟದ ನೇತೃತ್ವ ವಹಿಸಿಕೊಳ್ಳುವುದಿದ್ದರೆ ವೇದಿಕೆಯು ಅವರೊಂದಿಗೆ ಕೈಜೋಡಿಸುತ್ತದೆ. ಆದರೆ ಆಡಳಿತ ಪಕ್ಷದ ಶಾಸಕರಾಗಿ ಮಂಗಳೂರು ಪಾಲಿಕೆಯಿಂದ ಹಿಡಿದು ರಾಜ್ಯ, ಕೇಂದ್ರದಲ್ಲಿ ಇವರದೇ ಸರಕಾರ ಇರುವಾಗ ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಅನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಮುನೀರ್ ಸವಾಲು ಹಾಕಿದ್ದಾರೆ.

ಟೋಲ್ ಗೇಟ್ ಸಂಗ್ರಹದ ಗುತ್ತಿಗೆ ಪಡೆದವರು ಯಾರು, ಇಲ್ಲಿ ಉಪ ಗುತ್ತಿಗೆ ಪಡೆದವರು ಯಾರು, ಯಾವ ಪಕ್ಷಕ್ಕೆ ಸೇರಿದವರು ಎಂಬದನ್ನೂ ಬಹಿರಂಗಪಡಿಸಲಿ. ಇದರ ಜೊತೆಗೆ ಟೋಲ್ ಸಂಗ್ರಹದಲ್ಲಿ ಶಾಸಕ, ಸಂಸದರಿಗೆ ಎಷ್ಟು ಪಾಲು ಹೋಗುತ್ತದೆ ಅನ್ನುವುದನ್ನೂ ತಿಳಿಸಲಿ ಎಂದು ಮುನೀರ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಪುರುಷೋತ್ತಮ ಚಿತ್ರಾಪುರ, ಎಂ.ದೇವದಾಸ್, ದಿನೇಶ್ ಹೆಗ್ಡೆ ಉಳೆಪಾಡಿ, ವೈ.ರಾಘವೇಂದ್ರ ರಾವ್, ರಮೇಶ್ ಕೋಟ್ಯಾನ್, ದಿನೇಶ್ ಕುಂಪಲ, ಬಿ.ಕೆ.ಇಮ್ತಿಯಾಜ್, ಪ್ರತಿಭಾ ಕುಳಾಯಿ ಮತ್ತಿತರಿದ್ದರು.

Deadline for scrapping Surathkal Toll plaza is over let MLA Bharath Shetty and MP Nalin Kumar Kateel resign from their post slams Muneer Katipalla. Mr. Katipalla said that people have been given false promises on the closure of the toll plaza in the last six years. The recent reported statement of Union Transport Minister Nitin Gadkari that the toll plaza will be shifting to New Mangalore Port Authority premises is another lie as there is no official communication in this regard