ಕಯ್ಯಾರ ಹೆಸರನ್ನು ಪಠ್ಯದಿಂದ ತೆಗೆದಿದ್ದು ಅನ್ಯಾಯ, ಬಂಟ ಸಮಾಜಕ್ಕೆ ಅವಮಾನ ; ಅಜಿತ್ ಕುಮಾರ್ ರೈ

29-06-22 04:08 pm       Mangalore Correspondent   ಕರಾವಳಿ

ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಸರಕಾರ ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನೇ ಪಠ್ಯ ಪುಸ್ತಕದಿಂದ ತೆಗೆದು ಹಾಕಿದ್ದು, ಇಡೀ ಬಂಟ ಸಮಾಜಕ್ಕೆ ಅವಮಾನ ಮಾಡಿದೆ.

ಮಂಗಳೂರು, ಜೂನ್ 29: ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಸರಕಾರ ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನೇ ಪಠ್ಯ ಪುಸ್ತಕದಿಂದ ತೆಗೆದು ಹಾಕಿದ್ದು, ಇಡೀ ಬಂಟ ಸಮಾಜಕ್ಕೆ ಅವಮಾನ ಮಾಡಿದೆ. ಕಯ್ಯಾರ ಅವರು ಕಾಸರಗೋಡು ಜಿಲ್ಲೆ ಕರ್ನಾಟಕ ಸೇರಬೇಕೆಂದು ತಮ್ಮ ಜೀವಿತದ ಕಡೆ ವರೆಗೂ ಧ್ವನಿ ಎತ್ತಿದವರು. ನಾಡು, ನುಡಿಗಾಗಿ ಶ್ರಮಿಸಿದ ಕಯ್ಯಾರ ಅವರನ್ನು ಪಠ್ಯದಿಂದ ತೆಗೆದು ಹಾಕಿ, ಬಂಟ ಸಮಾಜಕ್ಕೆ ನೋವುಂಟು ಮಾಡಿದೆ. ಇದನ್ನು ಸರಿಪಡಿಸದಿದ್ದರೆ ಅದರ ಬೆಲೆ ತೆರಬೇಕಾಗಬಹುದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಎಚ್ಚರಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲಿನ ಸಂಘದ ಅಮೃತೋತ್ಸವ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಯ್ಯಾರ ಅವರು ಈ ನಾಡಿಗೆ ನೀಡಿರುವ ಕೊಡುಗೆಯನ್ನು ನಾವು ಮರೆಯಬಾರದು. 7ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿದ್ದ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎನ್ನುವ ಪಠ್ಯದಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರನ್ನೇ ತೆಗೆದು ಬಿಟ್ಟಿದ್ದಾರೆ. ಕರ್ನಾಟಕ ಏಕೀಕರಣ ಪ್ರಶಸ್ತಿ, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ, ಮಂಗಳೂರು ವಿವಿಯ ಗೌರವ ಡಾಕ್ಟರೇಟ್, ಹಂಪಿ ವಿವಿಯ ನಾಡೋಜ ಪ್ರಶಸ್ತಿ ಪಡೆದಿದ್ದವರು. ವೇದವನ್ನೇ ಕನ್ನಡಕ್ಕೆ ಭಾಷಾಂತರ ಮಾಡಿದ ವ್ಯಕ್ತಿ ಕಯ್ಯಾರ ಅವರು.

ತಮ್ಮ 101ನೇ ವಯಸ್ಸಿನಲ್ಲೂ ಕಾಸರಗೋಡು ಕರ್ನಾಟಕ ಸೇರಬೇಕೆಂದು ಹಕ್ಕೊತ್ತಾಯ ಮಂಡಿಸಿದ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು ಪಠ್ಯದಿಂದ ತೆಗೆದು ಹಾಕಿದ್ದು ಯಾಕೆ.. ಆಮೂಲಕ ಯಾವ ರೀತಿಯ ಸಂದೇಶವನ್ನು ಪಠ್ಯ ಪುಸ್ತಕ ಸಮಿತಿ ಕೊಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು. ಇಲ್ಲದೇ ಇದ್ದರೆ, ದೇಶ- ವಿದೇಶದಲ್ಲಿ ಬಂಟ ಸಮುದಾಯ ಧ್ವನಿ ಎತ್ತಲಿದೆ. ಇಡೀ ಜಗತ್ತಿನಲ್ಲಿ ಬಂಟರು ಇದ್ದಾರೆ. ಬಂಟ ಸಮಾಜಕ್ಕೆ ನೋವಾಗಿದೆ. ಅದನ್ನು ಸಮುದಾಯದ ಜನರು ತೋರಿಸಲಿದ್ದಾರೆ ಎಂದು ಅಜಿತ್ ಕುಮಾರ್ ರೈ ಹೇಳಿದ್ದಾರೆ.

ಸಾಹಿತಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ವಿಧಿವಶ- Kannada Prabha

ಕಯ್ಯಾರ ಕಿಂಞಣ್ಣ ರೈ ಕುಟುಂಬ ಸದಸ್ಯರು, ಕಾವು ಹೇಮನಾಥ ಶೆಟ್ಟಿ, ಬಾಲಕೃಷ್ಣ ರೈ ಸೇರಿದಂತೆ ಪ್ರಮುಖರು ಇದ್ದರು.

Freedom fighter Kayyar Kinhanna Rais name taken out from text book is a shame for Bunt Community slams Ajith Kumar Rai during a press meet held by Bunts Sangh in Mangaluru.