ಕಡೆಗೂ ರೆಬಲ್ ಸ್ಟಾರ್ ಏಕನಾಥ ಶಿಂಧೆ ಹೊಸ ಮುಖ್ಯಮಂತ್ರಿ! ಬಿಜೆಪಿ ಬೇಷರತ್ ಬೆಂಬಲ, ಬಾಳಾ ಸಾಹೇಬರಿಗೆ ಸಂದ ಜಯ ಎಂದ ಫಡ್ನವಿಸ್ !

30-06-22 05:41 pm       HK News Desk   ಕರಾವಳಿ

ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗಿತ್ತು. ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಶಿವಸೇನೆಯ ಬಂಡಾಯ ಶಾಸಕರ ಗುಂಪು ಏಕನಾಥ ಶಿಂಧೆ ನೇತೃತ್ವದಲ್ಲಿ ಮುಂಬೈ ತಲುಪಿದ ಕೂಡಲೇ ಚಿತ್ರಣವೇ ಬದಲಾಗಿದೆ.

ಮುಂಬೈ, ಜೂನ್ 30: ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗಿತ್ತು. ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಶಿವಸೇನೆಯ ಬಂಡಾಯ ಶಾಸಕರ ಗುಂಪು ಏಕನಾಥ ಶಿಂಧೆ ನೇತೃತ್ವದಲ್ಲಿ ಮುಂಬೈ ತಲುಪಿದ ಕೂಡಲೇ ಚಿತ್ರಣವೇ ಬದಲಾಗಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ ಶಿಂಧೆ ರಾಜ್ಯಪಾಲರನ್ನು ಭೇಟಿಯಾಗಿ ಹೊರಬಂದ ಬಳಿಕ ಏಕನಾಥ ಶಿಂಧೆ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾಹಿತಿ ಹೊರಬಿಡಲಾಗಿದೆ.

ಏಕನಾಥ ಶಿಂಧೆ ಇಂದು ಸಂಜೆ 7 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ ಪ್ರಕಟಿಸಿದ್ದಾರೆ. ಇದು ಬಾಳಾ ಸಾಹೇಬರಿಗೆ ಸಂದ ಜಯ. ಅಲ್ಲದೆ, ಶಿವಸೇನೆ ಸರಕಾರಕ್ಕೆ ಬಿಜೆಪಿ ಹೊರಗಿನಿಂದ ಬೆಂಬಲ ನೀಡಲಿದ್ದು, ಹೊಸ ಸಚಿವ ಸಂಪುಟದಲ್ಲಿ ತಾನು ಸೇರ್ಪಡೆಯಾಗುತ್ತಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೋವಾದಿಂದ ಮುಂಬೈಗೆ ಆಗಮಿಸಿದ ಏಕನಾಥ ಶಿಂಧೆ ಗುಂಪು ಮೊದಲಿಗೆ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಮಾತುಕತೆಯ ವೇಳೆ ಕರ್ನಾಟಕದ ಬಿಜೆಪಿ ನಾಯಕ, ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಕೂಡ ಜೊತೆಗಿದ್ದರು. ಆನಂತರ, ತಮಗೆ ಬೆಂಬಲ ಹೊಂದಿರುವ ಪಕ್ಷೇತರ ಶಾಸಕರು, ಬಿಜೆಪಿ ಶಾಸಕರ ಪಟ್ಟಿಯನ್ನು ಇಬ್ಬರು ನಾಯಕರು ಜಂಟಿಯಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ನೀಡಿದರು.

ರಾಜಭವನದಿಂದ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು. ಅಲ್ಲದೆ, 2019ರಲ್ಲಿ ನಾವು ಜೊತೆಯಾಗಿಯೇ ಚುನಾವಣೆ ಸ್ಪರ್ಧಿಸಿದ್ದೆವು. ನಮಗೆ ಪೂರ್ಣ ಬಹುಮತ ಸಿಕ್ಕಿತ್ತು. 170 ಸ್ಥಾನಗಳನ್ನು ಪಡೆದಿದ್ದೆವು. ಆದರೆ ಶಿವಸೇನೆ ನಾಯಕರು ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ನಡೆಸಿದರು. ತಮ್ಮ ಜೊತೆಗಿದ್ದ ಶಾಸಕರ ಮಾತನ್ನೇ ಕೇಳದೆ ಹೊಸ ಮೈತ್ರಿಕೂಟ ಮಾಡಿಕೊಂಡರು. ಆಗಿನಿಂದಲೂ ಈ ಸರಕಾರವನ್ನು ಉರುಳಿಸಬೇಕೆಂದು ಪ್ರಯತ್ನ ಪಟ್ಟಿದ್ದರು ಎಂದು ಹೇಳಿದರು.

ಉದ್ಧವ್ ಠಾಕ್ರೆ ಸರಕಾರದಲ್ಲಿ ಪ್ರತಿ ಬಾರಿ ಹಿಂದುತ್ವಕ್ಕೆ ಅಪಮಾನ ಮಾಡಲಾಯಿತು. ವೀರ ಸಾವರ್ಕರ್ ಬಗ್ಗೆ ಅಪಮಾನ ಮಾಡಿದರು. ಆಡಳಿತ ಬಿಟ್ಟು ಹೋಗುವ ಕೊನೆ ಕ್ಷಣದಲ್ಲಿ ಔರಂಗಾಬಾದ್ ಬದಲು ಸಂಬಾಜಿನಗರ್ ಎಂದು ಹೆಸರಿಡಲು ಉದ್ಧವ್ ಠಾಕ್ರೆ ಮುಂದಾಗಿದ್ದರು. ಆದರೆ ರಾಜ್ಯಪಾಲರು ಒಮ್ಮೆ ವಿಶ್ವಾಸ ಮತ ಸಾಬೀತು ಪಡಿಸಲು ಪತ್ರ ನೀಡಿದ ಬಳಿಕ ಸಚಿವ ಸಂಪುಟದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ನಿಯಮ ಬಾಹಿರ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಇದೇ ವೇಳೆ, ಏಕನಾಥ ಶಿಂಧೆ ಗುಂಪಿನ ಜೊತೆಗಿದ್ದ ಕೆಲವು ಶಾಸಕರು ಮಾತನಾಡಿ, ನಾವೇನು ಠಾಕ್ರೆ ವಿರುದ್ಧ ಇಲ್ಲ. ಅವರು ಮಹಾ ವಿಘಾಟಿ ಮೈತ್ರಿ ಕಡಿದು ಬರಬೇಕು. ನಾವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ. ನಮಗೆ ಬಾಳಾ ಸಾಹೇಬರೇ ಮಾದರಿ. ಅವರ ತತ್ವ, ಸಿದ್ಧಾಂತಗಳಷ್ಟೇ ಮುಖ್ಯ ಎಂದರು.

ಬೆಳಗ್ಗಿನಿಂದಲೂ ದೇವೇಂದ್ರ ಫಡ್ನವಿಸ್ ಅವರೇ ಸಿಎಂ ಆಗುತ್ತಾರೆಂದು ಹೇಳಲಾಗಿತ್ತು. ಕೊನೆ ಕ್ಷಣದಲ್ಲಿ ಫಡ್ನವಿಸ್ ಮನಸ್ಸು ಬದಲಾಯಿಸಿ ಬೇಷರತ್ ಬೆಂಬಲ ನೀಡಿ ಶಿವಸೇನೆ ಸರಕಾರ ಸ್ಥಾಪನೆಗೆ ಅನುವು ನೀಡಿದ್ದು ಕುತೂಹಲದ ಅಂಶ. ಶಿವಸೇನೆಯ ಒಟ್ಟು 55 ಶಾಸಕರಲ್ಲಿ 39 ಮಂದಿ ಏಕನಾಥ ಶಿಂಧೆ ಜೊತೆಗಿದ್ದಾರೆ. ಪಕ್ಷದಲ್ಲಿ ಒಬ್ಬ ನಾಯಕ ಮೂರನೇ ಎರಡರಷ್ಟು ಬಹುಮತ ಹೊಂದಿದ್ದರೆ, ಪಕ್ಷದ ಅಧಿಪತ್ಯ ಪಡೆಯಬಹುದು ಎಂಬ ನಿಯಮದಡಿ ಏಕನಾಥ ಶಿಂಧೆ, ಠಾಕ್ರೆ ಮತ್ತು ಕುಟುಂಬವನ್ನು ಬದಿಗಿಟ್ಟು ಸರಕಾರ ರಚಿಸಲು ಮುಂದಾಗಿದ್ದಾರೆ.

Shiv Sena rebel Eknath Shinde will be the next Maharashtra Chief Minister, the BJP's Devendra Fadnavis said on Thursday, in a move that very few saw coming. The bombshell capped the coup in the Sena that unseated Uddhav Thackeray a day ago.