ಭಾರೀ ಮಳೆ ; ಕಲ್ಲಾಪು ಪ್ರದೇಶ ಜಲಾವೃತ, ಐವತ್ತಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ವಿರುದ್ಧ ಯುಟಿ ಖಾದರ್ ಗರಂ 

05-07-22 09:35 pm       Mangalore Correspondent   ಕರಾವಳಿ

ನಿರಂತರ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತೊಕ್ಕೊಟ್ಟು ಬಳಿಯ ಕಲ್ಲಾಪು ಪ್ರದೇಶ ಜಲಾವೃತವಾಗಿದ್ದು ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ತೊಂದರೆಗೀಡಾಗಿದ್ದಾರೆ‌.  

ಉಳ್ಳಾಲ, ಜು.5: ನಿರಂತರ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತೊಕ್ಕೊಟ್ಟು ಬಳಿಯ ಕಲ್ಲಾಪು ಪ್ರದೇಶ ಜಲಾವೃತವಾಗಿದ್ದು ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ತೊಂದರೆಗೀಡಾಗಿದ್ದಾರೆ‌.  

ಕಲ್ಲಾಪು ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಯು.ಟಿ ಖಾದರ್, ಪ್ರಾಕೃತಿಕ ವಿಕೋಪ ಸಭೆ ನಡೆಸದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗರಂ ಆಗಿದ್ದಾರೆ. ಕಲ್ಲಾಪಿನ ಸುಮಾರು ಐವತ್ತಕ್ಕೂ ಹೆಚ್ಚಿನ ಮನೆಗಳು, ಸಭಾಂಗಣ, ವಾಣಿಜ್ಯ ಕಟ್ಟಡಗಳು ಜಲಾವೃತಗೊಂಡಿವೆ. ಪ್ರತೀ ವರ್ಷವೂ ಈ ಪ್ರದೇಶಗಳು ಮಳೆಗಾಲದಲ್ಲಿ ನೆರೆಗೆ ಜಲಾವೃತಗೊಳ್ಳುತ್ತದೆ. 

ಸ್ಥಳೀಯರಾದ ಮಹಮ್ಮದ್ ತಯ್ಯುಬ್ ಹೇಳುವ ಪ್ರಕಾರ ಈ ಬಾರಿ ಇನ್ನೂ ನೆರೆ ಬಂದಿಲ್ಲ. ಅಸಮರ್ಪಕ ಚರಂಡಿಗಳಲ್ಲಿ ನೀರು ಹರಿಯದ ಪರಿಣಾಮ‌ ಪ್ರದೇಶ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಂಡ ವೇಳೆ ಕಲ್ಲಾಪುವಿನ ರಸ್ತೆ ಬದಿಯಲ್ಲಿದ್ದ ರಾಜ ಕಾಲುವೆ ಮುಚ್ಚಲ್ಪಟ್ಟಿದ್ದು ಇದರಿಂದ ಕಲ್ಲಾಪು ಪ್ರದೇಶದಲ್ಲಿ ಮಳೆ ನೀರು ಹರಿಯದೆ ಕೃತಕ ನೆರೆ ಉಂಟಾಗುತ್ತಿದೆ. ಇದರಿಂದ ಸ್ಥಳೀಯರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ. 

ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೆರ್ಮನ್ನೂರು ಗ್ರಾಮ‌ಕರಣಿಕೆ ಶ್ವೇತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಹೆದ್ದಾರಿ ಬದಿಯ ರಾಜಕಾಲುವೆಯನ್ನ ಸರಿಪಡಿಸಲು ಸೂಚಿಸಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಕರಾವಳಿಯಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಪ್ರಾಕೃತಿಕ ವಿಕೋಪ ಸಭೆ ನಡೆಸಿಲ್ಲ. ನೆರೆ ಪೀಡಿತರ ರಕ್ಷಣೆಗೆ ಬೋಟ್ ಕೂಡ ಇಲ್ಲ, ಖಾಸಗಿ ಬೋಟ್ ನವರಿಗೆ ದುಡ್ಡು ಕೊಟ್ಟು ತರಿಸುವಂತಹ ಅನಿವಾರ್ಯತೆ ಇದ್ದು ಸಚಿವರು ಆದಷ್ಟು ಬೇಗನೆ‌ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ರಾಜೇಶ್ ಯು.ಬಿ, ಸ್ಥಳೀಯರಾದ ಪುರುಷೋತ್ತಮ ಕಲ್ಲಾಪು ಇದ್ದರು.

Heavy rains in Mangaluru, Kalapu flooded with water in Ullal, MLA Khader visits spot