ನಾಯಕರೆಲ್ಲ ಅರ್ಧಕ್ಕೆ ಓಡಿದ್ರಲ್ಲ, ನಾಚಿಕೆ ಆಗಲ್ವೇ..? ನಮ್ಮ ಸರಕಾರ ಇದ್ರೂ ಹೆಣ ಬೀಳೋದಾದ್ರೆ ನಾವು ಯಾರನ್ನು ನಂಬಬೇಕು ; ಅಂಗಾರ ವಿರುದ್ಧ ಆಕ್ರೋಶ  

27-07-22 09:34 pm       Mangalore Correspondent   ಕರಾವಳಿ

ಬೇರೆಲ್ಲ ನಾಯಕರು ಹೆದರಿ ಓಡಿದರು. ಹರೀಶ್ ಪೂಂಜ ಮಾತ್ರ ಕೊನೆಯ ವರೆಗೆ ನಿಂತಿದ್ದು. ಈಗ ಯಾಕೆ ನೀವು ಬಂದಿದ್ದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರನ್ನು ಬಿಜೆಪಿ ಕಾರ್ಯಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಸುಳ್ಯ, ಜುಲೈ 27: ಬೇರೆಲ್ಲ ನಾಯಕರು ಹೆದರಿ ಓಡಿದರು. ಹರೀಶ್ ಪೂಂಜ ಮಾತ್ರ ಕೊನೆಯ ವರೆಗೆ ನಿಂತಿದ್ದು. ಈಗ ಯಾಕೆ ನೀವು ಬಂದಿದ್ದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರನ್ನು ಬಿಜೆಪಿ ಕಾರ್ಯಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಂಜೆ ವೇಳೆಗೆ ಬಂದ ಸಚಿವ ಅಂಗಾರ ಮತ್ತು ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ ಅವರನ್ನು ಕಾರ್ಯಕರ್ತರು ತರಾಟೆ ಮಾಡಿದ್ದಾರೆ.

ಅವರನ್ನೆಲ್ಲ ನಾವು ಓಟು ಕೊಟ್ಟು ಗೆಲ್ಲಿಸಿದ್ದು ಯಾಕೆ. ಅವರೆಲ್ಲ ಅರ್ಧದಲ್ಲಿ ಓಡಿದ್ರಲ್ಲ. ಅವರಿಗೆ ನಾಚಿಕೆ ಆಗೋದಿಲ್ವೇ.. ಇವತ್ತು ಕಠಿಣ ಕ್ರಮ ಅಂತ ಹೇಳ್ತಾರೆ. ನಾಳೆ ಮತ್ತೆ ಹೆಣ ಬೀಳುತ್ತದೆ. ಬಿಜೆಪಿ ಸರಕಾರ ಬಂದರೂ, ಹೆಣ ಬೀಳೋದು ಅಂದ್ರೆ ನಾವು ಯಾರನ್ನು ನಂಬಬೇಕು. ನಾಯಕರೆಲ್ಲ ಬಂದರೂ, ಅರ್ಧದಲ್ಲಿಯೇ ಓಡಿದ್ರಲ್ಲ ಎಂದು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.

ಅಲ್ಲಿನ ಪರಿಸ್ಥಿತಿ ಸರಿ ಇರಲಿಲ್ಲ ಅಲ್ವೇ ಎಂದು ಅಂಗಾರ ಹೇಳಿದ್ದಕ್ಕೆ, ಏನು ಪರಿಸ್ಥಿತಿರೀ.. ನಿನ್ನೆ ರಾತ್ರಿ ಬರಲು ಆಗಿಲ್ಲ. ರಾತ್ರಿಯಾದರೂ, ನಿಮ್ಮ ಸಚಿವನಿಗೆ ಬರಲು ಆಗಿಲ್ಲ ಅಲ್ವೇ.. ಮೊನ್ನೆ ಹರ್ಷನ ಕೊಲೆ ಆಗಿದೆ. ನಾವು ಸಾಮಾನ್ಯ ಕಾರ್ಯಕರ್ತರು. ನಾವು ಓಟು ಕೊಟ್ಟು ಗೆಲ್ಲಿಸಿದ್ದು. ನಾವು ಚುನಾವಣೆಗೆ ಕೆಲಸ ಮಾಡೋದು. ನಿಮ್ಮ ನಾಯಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳಿಗೆ ಅಂಗಾರ ಮೂಕ ಪ್ರೇಕ್ಷಕನಾಗಿದ್ದರು. ಹಗಲಲ್ಲಿ ಬೆಳ್ಳಾರೆ ಪೇಟೆಯಲ್ಲಿ ಗಲಾಟೆ ಆಗುತ್ತಿದ್ದ ಸಂದರ್ಭದಲ್ಲಿಯೂ ಅಂಗಾರ ಸ್ಥಳಕ್ಕೆ ಬಂದಿರಲಿಲ್ಲ. ಆ ಕುರಿತ ಸಿಟ್ಟನ್ನೂ ಕಾರ್ಯಕರ್ತರು ಹೊರ ಹಾಕಿದ್ರು.

Bellare murder, Minister Anagara slammed by Praveen family. Minister Angara who visited praveens family was slammed left and right.