ಜಿಹಾದಿ ಮಾನಸಿಕತೆಯೇ ಪ್ರವೀಣ್ ಕೊಲೆಗೆ ಕಾರಣ, ಒಂಬತ್ತು ಮಂದಿ ವಶಕ್ಕೆ ; ಸಚಿವ ಸುನಿಲ್ 

27-07-22 09:59 pm       Mangalore Correspondent   ಕರಾವಳಿ

ಆರೋಪಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ‌

ಮಂಗಳೂರು, ಜುಲೈ 27: ನಾವು ಮನೆಯ ಮಗನನ್ನು ಕಳೆದುಕೊಂಡಿದ್ದೇವೆ. ಘಟನೆ ಖಂಡಿಸಲು ನಮ್ಮಲ್ಲಿ ಪದಗಳಿಲ್ಲ. ಪ್ರಕರಣದಲ್ಲಿ ಈಗಾಗಲೇ ಒಂಬತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ‌

ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ಬಿಡುಗಡೆ ಮಾಡಿರುವ ಸುನಿಲ್ ಕುಮಾರ್, ದೇಶದಲ್ಲಿ ಜಿಹಾದಿ ಮಾನಸಿಕತೆ ಹಬ್ಬುತ್ತಿದ್ದು ಅದರ ಪರಿಣಾಮವನ್ನು ನಾವು ನೋಡುತ್ತಿದ್ದೇವೆ. ಅದನ್ನು ಮಟ್ಟ ಹಾಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತವೆ. ನಾನೂ ಹಿಂದೂ ಸಂಘಟನೆಯಲ್ಲೇ ಬೆಳೆದು ಸಾರ್ವಜನಿಕ ಜೀವನಕ್ಕೆ ಬಂದವನು. ಕಾರ್ಯಕರ್ತನನ್ನು ಕಳೆದುಕೊಂಡಾಗ ಮತ್ತೊಬ್ಬ ಕಾರ್ಯಕರ್ತನಿಗೆ ಆಗುವ ಆಕ್ರೋಶ ನನಗೆ ಅರಿವಿದೆ. ಈ ರೀತಿಯ ಆಕ್ರೋಶವನ್ನು ನಾನೂ ಅನುಭವಿಸಿದ್ದೇನೆ. 

Mangaluru: Praveen killed for condemning Udaipur murder; several BJP youth  workers resign - Daijiworld.com

ಆದರೆ ಕೊಲೆ ಮಾಡಿದ ಜಿಹಾದಿಗಳನ್ನು ಬಗ್ಗುಬಡಿದೇ ಬಡಿಯುತ್ತೇವೆ. ಹಾಗೇ ಬಿಡೋದಿಲ್ಲ. ಪೊಲೀಸ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮುಖ್ಯಮಂತ್ರಿಗಳಿಗೂ ನಿರಂತರ ಮಾಹಿತಿ ನೀಡುತ್ತಿದ್ದೇನೆ. ಮುಂದಿನೆರಡು ದಿನ ಮಂಗಳೂರಿನಲ್ಲೇ ಇದ್ದು ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ, ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ. ದೇಶದ ಉತ್ತರದಿಂದ ದಕ್ಷಿಣ ತುದಿ ವರೆಗೆ ನಡೆಯುತ್ತಿರುವ ಜಿಹಾದಿ ಮಾನಸಿಕತೆಯೇ ಪ್ರವೀಣ್ ಕೊಲೆಗೆ ಕಾರಣ.‌ ಇದೇ ಜಿಹಾದಿ ಮಾನಸಿಕತೆಯೇ ಪ.ಬಂಗಾಳ, ಕೇರಳದಲ್ಲಿ ಕಾರ್ಯಕರ್ತರನ್ನು ಬಲಿ ಪಡೆಯುತ್ತಿದೆ. 

ಹಾಗಂತ, ಪ್ರವೀಣ್ ಕೊಲೆ ವಿಚಾರವನ್ನು ಚುನಾವಣೆ ವಿಷಯವಾಗಿಸೋದಿಲ್ಲ. ಚುನಾವಣೆಗೆ ಬೇಕಾದ ವಿಷಯಗಳೇ ಬೇರೆ ಇದೆ. ಪ್ರವೀಣ್ ಕೊಲೆಯನ್ನು ಚುನಾವಣಾ ವಿಷಯ ಮಾಡುವ ಇರಾದೆ ಬಿಜೆಪಿಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

Jihadhi mindset is the reason for Praveens murder in Bellare, says Minister Sunil Kumar