ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ದಂಡು ; ಕುಟುಂಬದ ಜೊತೆ ನಿಲ್ಲುತ್ತೇವೆ, 50 ಲಕ್ಷ ಪರಿಹಾರ, ದೇಶ ಛಿದ್ರಗೊಳಿಸುವ ಕೃತ್ಯ ಎಂದ ಸಿಎಂ

28-07-22 08:31 pm       Mangalore Correspondent   ಕರಾವಳಿ

ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ದೌಡಾಯಿಸಿ ಬಂದಿದ್ದಾರೆ.

ಸುಳ್ಯ, ಜುಲೈ 28: ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ದೌಡಾಯಿಸಿ ಬಂದಿದ್ದಾರೆ. ಮನೆಯವರನ್ನು ಕಂಡು ಸಾಂತ್ವನ ಹೇಳಿದ ಮುಖ್ಯಮಂತ್ರಿ ಇಡೀ ಕುಟುಂಬದ ಜೊತೆಗೆ ರಾಜ್ಯ ಸರಕಾರ ಮತ್ತು ಬಿಜೆಪಿ ಪಕ್ಷವು ನಿಲ್ಲಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಹತ್ಯೆ ಘಟನೆ ತೀರಾ ಅಮಾನವೀಯ. ಇದೊಂದು ಪೂರ್ವಯೋಜಿತ ಕೃತ್ಯ. ಕರಾವಳಿ ಭಾಗದಲ್ಲಿ ಕಳೆದ ಹತ್ತು ವರ್ಷದಿಂದ ಸಮಾಜಘಾತುಕ ಶಕ್ತಿಗಳ ಕೃತ್ಯ ಹೆಚ್ಚುತ್ತಿದೆ. ಕೇರಳದ ಕಡೆಯಿಂದಲೂ ಈ ರೀತಿಯ ಕೃತ್ಯಕ್ಕೆ ಪ್ರೇರಣೆ ಸಿಕ್ಕಿದೆ. ಇದು ಕೇವಲ ಒಬ್ಬನ ಕೊಲೆಯಲ್ಲ, ದೇಶವನ್ನು ಛಿದ್ರ ಮಾಡುವ ಕೃತ್ಯ ಎಂದು ಹೇಳಿದರು.

ಈಗಾಗಲೇ ಪ್ರಕರಣದ ತನಿಖೆ ಅರಂಭವಾಗಿದ್ದು ಅತೀ ಶೀಘ್ರದಲ್ಲಿ ಎಲ್ಲ ಆರೋಪಿಗಳ ಬಂಧಿಸಲಾಗುವುದು. ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ, ಅವರೊಬ್ಬ ದಕ್ಷ ಅಧಿಕಾರಿ. ಕೃತ್ಯಕ್ಕೆ ಬೆಂಬಲ ಕೊಟ್ಟ ಸಂಘಟನೆ, ಯಾವುದೇ ಜಾಲ ಇದ್ದರೂ ಭೇದಿಸುತ್ತೇವೆ. ಪ್ರವೀಣ್  ಮಡದಿಯೂ ಅದೇ ಬೇಡಿಕೆ ಇಟ್ಡಿದ್ದಾರೆ. ಮಡದಿ ಮುಂದಿಟ್ಟ ಎಲ್ಲಾ ಆಗ್ರಹವನ್ನು ಎಲ್ಲಾ ಪಾಲಿಸ್ತೇವೆ. ಪ್ರವೀಣ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ಹಾಗೂ ಪಕ್ಷದಿಂದ 25 ರೂ. ಲಕ್ಷ ನೀಡಿದ್ದೇವೆ ಎಂದು ತಿಳಿಸಿದರು.

ಕಟುಕರಿಗೆ ಶಿಕ್ಷೆ ಆದಾಗ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ. ಈಗಾಗಲೇ ತನಿಖೆ ಆರಂಭವಾಗಿದೆ. ಕೇರಳ, ಉತ್ತರ ಪ್ರದೇಶ, ರಾಜಸ್ಥಾನದಲ್ಲೂ ಇದೇ ರೀತಿಯ ಕೃತ್ಯ ನಡೆದಿದೆ. ಈಗಾಗಲೇ ಎನ್ಐಎ ತನಿಖಾ ತಂಡದ ಕಚೇರಿಯನ್ನು ಕರ್ನಾಟಕದಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಮಂಗಳೂರು ಭಾಗದಲ್ಲಿ ಆದಷ್ಡು ಬೇಗ ಎನ್ಐಎ ಕಚೇರಿ ತರುತ್ತೇವೆ ಎಂದು ಹೇಳಿದರು. ಎನ್ಐಎ ತನಿಖೆಗೆ ಒಪ್ಪಿಸ್ತೀರಾ ಎಂಬ ಪ್ರಶ್ನೆಗೆ, ಅಗತ್ಯ ಬಿದ್ದರೆ ತನಿಖೆಗೆ ಕೊಡುತ್ತೀವಿ ಎಂದಿದ್ದಾರೆ.

ಮಸೂದ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ಯಾ ಎನ್ನುವ ಪ್ರಶ್ನೆಗೆ, ಆ ಕೊಲೆಗೂ, ಇದಕ್ಕೂ ಇರುವ ಸಂಬಂಧ ತನಿಖೆಯಿಂದಲೇ ಗೊತ್ತಾಗಬೇಕು. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೈಜಾಂಶ ಶೀಘ್ರದಲ್ಲಿ ಹೊರಬರಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹೊರಡುತ್ತಲೇ ಧಿಕ್ಕಾರ ಘೋಷಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ಮನೆಗೆ ಬಂದು ಹಿಂದೆ ತೆರಳುತ್ತಲೇ ಸೇರಿದ್ದ ಕಾರ್ಯಕರ್ತರು ಮತ್ತೆ ಧಿಕ್ಕಾರ ಕೂಗಿದ್ದಾರೆ. ಪ್ರವೀಣ್ ನಿವಾಸದ ಬಳಿಯೇ ಘೋಷಣೆ ಕೂಗಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಲಾಠಿಚಾರ್ಜ್ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಿಎಂ ಹೊರಡುವ ವೇಳೆ ಬೇಕೇ ಬೇಕು, ನ್ಯಾಯ ಬೇಕು ಅಂತ ಘೋಷಣೆ ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧವೂ ಮತ್ತೆ ಘೋಷಣೆ ಕೇಳಿಬಂದಿದೆ. ನಿನ್ನೆಯ ಆಕ್ರೋಶದ ಬಳಿಕ ಇಂದು ಮುಖ್ಯಮಂತ್ರಿ ಜೊತೆಗೇ ನಳಿನ್ ಆಗಮಿಸಿದ್ದರು. ಸಿಎಂ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ, ಸುನಿಲ್ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಇದ್ದರು.

Chief minister Basavaraj Bommai visited the bereaved family of slain BJP youth leader Praveen Kumar Nettare on Thursday, July 27.He pacified the family over the tragedy and lent an ear to their words of agony. Earlier, speaking to reporters at the Mangaluru airport prior to leaving for Praveen's house , he said, "Soon after the murder of Praveen i have been in contact with the police officials of district. We are in touch with the Kerala police as well who are helping us nab the culprit. As the murder occured in the border, the primilinary investigations have revealed that there is a Kerala connection."