ಹತ್ತು ದಿನದಲ್ಲಿ ಮೂರು ಕೊಲೆ ; ಆಗಸ್ಟ್ 5ರೊಳಗೆ ಆರೋಪಿಗಳ ಬಂಧಿಸದಿದ್ದರೆ ಮಂಗಳೂರಿನಲ್ಲಿ ಸತ್ಯಾಗ್ರಹ –ಎಚ್ಡಿಕೆ

01-08-22 09:52 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅಂತರದಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಆಗಸ್ಟ್ 5ರೊಳಗೆ ಬಂಧಿಸದಿದ್ದರೆ ಮಂಗಳೂರಿನಲ್ಲಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರು, ಆಗಸ್ಟ್ 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅಂತರದಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಆಗಸ್ಟ್ 5ರೊಳಗೆ ಬಂಧಿಸದಿದ್ದರೆ ಮಂಗಳೂರಿನಲ್ಲಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಇತ್ತೀಚೆಗೆ ಕೊಲೆಯಾಗಿರುವ ಪ್ರವೀಣ್, ಮಸೂದ್ ಮತ್ತು ಫಾಜಿಲ್ ಅವರ ಮನೆಗಳಿಗೆ ಭೇಟಿ ನೀಡಿದ್ದು, ಮೂರೂ ಕುಟುಂಬಗಳ ಆಗ್ರಹ ಒಂದೇ ಆಗಿತ್ತು. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಯಾವುದೇ ನಾಯಕರ ಮಕ್ಕಳು ಅಥವಾ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಾಯಕರ ಮಕ್ಕಳು ಈ ರೀತಿ ಕೊಲೆಯಾಗುತ್ತಿಲ್ಲ. ಸಿದ್ಧಾಂತಕ್ಕಾಗಿ ಬಡ ಕುಟುಂಬಗಳ ಯುವಕರೇ ಬಲಿಯಾಗುತ್ತಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ರೀತಿ 34 ಯುವಕರ ಕೊಲೆಯಾಗಿದ್ದವು. ಈಗ ಕಾಂಗ್ರೆಸಿನವರು ಬಿಜೆಪಿ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ನಾನು ಕೇಳ ಬಯಸುತ್ತೇನೆ, ಎರಡೂ ರಾಷ್ಟ್ರೀಯ ಪಕ್ಷಗಳು ಈ ಜಿಲ್ಲೆಯ ಜನರಿಗೆ ಕೊಟ್ಟಿರುವ ಕೊಡುಗೆ ಏನು ಹೇಳಲಿ. ಪ್ರತಿ ಬಾರಿ ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಕರಾವಳಿಯಲ್ಲಿ ಕೋಮು ದ್ವೇಷದ ಕೊಲೆಗಳಾಗುತ್ತಿರುವುದು ಯಾಕೆ. ಈ ಬಾರಿಯೂ ಅಂಥಹದ್ದೇ ಕೃತ್ಯ ನಡೆದಿದೆ. ಇದರ ನಡುವೆ, ಮುಖ್ಯಮಂತ್ರಿಯಾದವರು ಮಂಗಳೂರಿಗೆ ಬಂದು ಏನು ಸಂದೇಶವನ್ನು ಕೊಟ್ಟಿದ್ದಾರೆ. ಎರಡೂ ಕೋಮುಗಳ ನಡುವೆ ಸಾಮರಸ್ಯ ಬಿತ್ತುವ ಬದಲು ಒಂದು ಸಮುದಾಯದ ಓಲೈಕೆ ಮಾಡಿದ್ದಾರೆ. ಇವರು ಇರುವಾಗಲೇ ಸುರತ್ಕಲ್ ನಲ್ಲಿ ಫಾಜಿಲ್ ಕೊಲೆಯಾಗಿತ್ತು. ಆತನ ಮನೆಗೂ ಭೇಟಿ ನೀಡಿ ಹೋಗುತ್ತಿದ್ದರೆ, ಅವರ ಮನಸ್ಥಿತಿಯನ್ನು ಪ್ರಶ್ನೆ ಮಾಡುತ್ತಿರಲಿಲ್ಲ. ಈಗ ಅವರ ಮನಸ್ಥಿತಿಯನ್ನು ಪ್ರಶ್ನೆ ಮಾಡಬೇಕಾಗುತ್ತದೆ.

ಜೆಡಿಎಸ್ ಈ ಜಿಲ್ಲೆಯಲ್ಲಿ ಯಾವುದೇ ಬಲವನ್ನೂ ಹೊಂದಿಲ್ಲ. ಸತ್ಯಾಗ್ರಹ ಮಾಡಿ ನನಗೇನೂ ಲಾಭ ಇಲ್ಲ. ಆದರೂ, ಮೂರು ಕುಟುಂಬಗಳ ಪರ ನಿಲ್ಲುವುದಕ್ಕಾಗಿ ಸತ್ಯಾಗ್ರಹ ನಡೆಸುತ್ತೇನೆ. ಶಾಂತಿ, ಸಾಮರಸ್ಯ ನೆಲೆಸುವುದಕ್ಕಾಗಿ ಮೂರು ಕುಟುಂಬಗಳ ಪರ ಧ್ವನಿ ಎತ್ತಲು ಸತ್ಯಾಗ್ರಹ ನಡೆಸುತ್ತೇನೆ. ಈ ಜಿಲ್ಲೆಯ ಎಲ್ಲ ಯುವಕರು ಕೂಡ ಇದೇ ರೀತಿಯ ಆಗ್ರಹವನ್ನು ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಇದಕ್ಕೂ ಮುನ್ನ ಸುಳ್ಯ ನೆಟ್ಟಾರಿನಲ್ಲಿ ಪ್ರವೀಣ್ ಮನೆಗೆ ಹೋಗಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಕರಣವನ್ನು ಎನ್ಐಎಗೆ ವಹಿಸಿದೆ. ಈ ಹಿಂದೆ ಎನ್ಐಎಗೆ ಕೊಟ್ಟಿರುವ ಯಾವುದೇ ಕೇಸಿನಲ್ಲೂ ಪ್ರಗತಿ ಆಗಿಲ್ಲ. ಅಂಥದರಲ್ಲಿ ಎನ್ಐಎಗೆ ಕೊಟ್ಟು ಪ್ರಕರಣವನ್ನು ಹಳ್ಳ ಹಿಡಿಸುವುದು ಯಾಕೆ. ನಮ್ಮಲ್ಲಿ ಉತ್ತಮ ಅಧಿಕಾರಿಗಳು ಇಲ್ಲವೇ.. ಆರೋಪಿಗಳನ್ನು ಹಿಡಿಯಲು ನಮ್ಮ ಪೊಲೀಸರಿಂದ ಸಾಧ್ಯವಿಲ್ಲವೇ. ಈ ರೀತಿಯ ನಿರ್ಧಾರಗಳಿಂದ ನಮ್ಮ ಪೊಲೀಸರ ನೈತಿಕ ಸ್ಥೈರ್ಯ ಕುಂದುತ್ತದೆ ಎಂದು ಹೇಳಿದ್ದರು.

ಕುಮಾರಸ್ವಾಮಿ ನಿಯೋಗದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಬಿಎಂ ಫಾರೂಕ್, ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮಾಧವ ಗೌಡ, ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಕನ್ವೀನರ್ ಸುಶಿಲ್ ನೊರೊನ್ಹಾ, ಯೂತ್ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮತ್ತಿತರರಿದ್ದರು.

Former chief minister H D Kumarswamy has warned of a satyagraha he if the government failed to arrest the culprits behind three serial murders cases within August 5. Addressing media here on Monday, August 1, H D Kumaraswamy said, "I have visited the residences of Masood, Praveen and Fazil who were recently murdered in a span of 10 days. The families of the three deceased had only one strong demand, that is, to nab the culprit and put them behind bars at the earliest."