ಹೆದ್ದಾರಿ ಗುಂಡಿಗೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ ; ಹೈವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಹೆಣ ಬೀಳಬೇಕು ? ರಸ್ತೆ ಗುಂಡಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

11-08-22 09:30 pm       Mangalore Correspondent   ಕರಾವಳಿ

ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಗುಂಡಿಗೆ ಬಿದ್ದು ಇಂಜಿನಿಯರಿಂಗ್ ಕಲಿಯುತ್ತಿದ್ದ ಯುವಕನೊಬ್ಬ ದುರಂತ ಸಾವಿಗೀಡಾದ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ನಡೆದಿದ್ದು, ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.

ಮಂಗಳೂರು, ಆಗಸ್ಟ್ 11: ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಗುಂಡಿಗೆ ಬಿದ್ದು ಇಂಜಿನಿಯರಿಂಗ್ ಕಲಿಯುತ್ತಿದ್ದ ಯುವಕನೊಬ್ಬ ದುರಂತ ಸಾವಿಗೀಡಾದ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ನಡೆದಿದ್ದು, ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.

ಆಗಸ್ಟ್ 5ರಂದು ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಕೊಂಚಾಡಿ ನಿವಾಸಿ ಅತೀಶ್ ಎಂಬ 21 ವರ್ಷದ ಯುವಕ ಕೈನೆಟಿಕ್ ಸ್ಕೂಟರಿನಲ್ಲಿ ನಂತೂರಿನಿಂದ ಬಿಕರ್ನಕಟ್ಟೆಯತ್ತ ತೆರಳುತ್ತಿದ್ದಾಗ ಹೆದ್ದಾರಿ ಗುಂಡಿ ತಿಳಿಯದೆ, ಅದಕ್ಕೆ ಬಿದ್ದು ನಿಯಂತ್ರಣ ಸಿಗದೆ ಡಿವೈಡರ್ ಮೇಲೆ ಪಲ್ಟಿಯಾಗಿದ್ದ. ಡಿವೈಡರ್ ಮೇಲೆ ಇಂಡಿಕೇಟರ್ ಗೆಂದು ಹಾಕಿರುವ ಕಬ್ಬಿಣದ ಕಂಬಕ್ಕೆ ಸವಾರ ಅತೀಶ್ ಬಡಿದಿದ್ದು ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವು ಕಂಡಿದ್ದ. ಅಪಘಾತ ನಡೆದ ಕೂಡಲೇ ಅಲ್ಲಿದ್ದ ಹೂವಿನ ವ್ಯಾಪಾರಸ್ಥರು ಗಾಯಾಳುವನ್ನು ಎಜೆ ಆಸ್ಪತ್ರೆಗೆ ಒಯ್ದಿದ್ದರು. ಆದರೆ, ಅಷ್ಟರಲ್ಲೇ ಯುವಕ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದರು.

ಈ ಬಗ್ಗೆ ಬಿಕರ್ನಕಟ್ಟೆಯ ಹೂವಿನ ವ್ಯಾಪಾರಿ ಸುಹೈಲ್ ಬಳಿ ಕೇಳಿದಾಗ, ಇಲ್ಲಿ ಹೆದ್ದಾರಿ ಗುಂಡಿ ಬಿದ್ದು ತಿಂಗಳು ಕಳೆದಿತ್ತು. 20ಕ್ಕೂ ಹೆಚ್ಚು ಮಂದಿ ಈ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಮೊನ್ನೆ ಯುವಕ ಸಾವು ಕಂಡಿದ್ದಾನೆ. ನಂತೂರಿನಲ್ಲಿ ಸಿಗ್ನಲ್ ಓಪನ್ ಆಗುತ್ತಿದ್ದಂತೆ ಸಾಧಾರಣ ಸ್ಪೀಡಲ್ಲೇ ಎಲ್ಲರೂ ಬರುತ್ತಾರೆ. ಆ ಕಡೆಯಿಂದ ಬರುವಾಗ ತಿರುವು ಇರುವುದರಿಂದ ಇಲ್ಲಿ ಗುಂಡಿ ಇರುವುದು ಕಾಣಲ್ಲ. ಮೊನ್ನೆ ಆ ಯುವಕನೂ ಅಷ್ಟೇನೂ ಸ್ಪೀಡಲ್ಲಿ ಇರಲಿಲ್ಲ. ಕೈನೆಟಿಕ್ ಆಗಿದ್ದರಿಂದ ಗುಂಡಿಗೆ ಬಿದ್ದು ನಿಯಂತ್ರಣ ಸಿಗದೆ ಡಿವೈಡರ್ ಮೇಲೆ ಬಿದ್ದಿದ್ದಾನೆ. ಅಲ್ಲಿದ್ದ ಕಂಬಕ್ಕೆ ತಲೆ ಬಡಿದಿದ್ದರಿಂದ ತೀವ್ರ ಗಾಯಗೊಂಡಿದ್ದ. ಹೆದ್ದಾರಿ ಗುಂಡಿಯಿಂದಲೇ ಇಲ್ಲಿ ಅಪಘಾತ ಆಗಿತ್ತು. ಮೊದಲಿಗೆ ಗುಂಡಿ ಬಿದ್ದಾಗ, ಜಲ್ಲಿ ಹುಡಿ ಹಾಕಿದ್ದರು. ಆನಂತರ ಮಳೆ ಬಂದಾಗ ಜಲ್ಲಿ ಹುಡಿ ಎದ್ದು ಹೋಗಿ ಮತ್ತಷ್ಟು ಗುಂಡಿ ಆಗಿತ್ತು. ಈಗ ಅಪಘಾತದಲ್ಲಿ ಯುವಕ ಸಾವು ಕಂಡಿದ್ದರಿಂದ ಡಾಮರು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಫಲಿತಾಂಶ ಬರುವಾಗ ಸ್ನೇಹಿತನೇ ಇಲ್ಲ

ಅತೀಶ್ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ. ಅಂತಿಮ ವರ್ಷದ ಸಿವಿಲ್ ಮಾಡುತ್ತಿದ್ದು, ಕಳೆದ ಜೂನ್ ತಿಂಗಳಲ್ಲಿ ಪರೀಕ್ಷೆ ಬರೆದಿದ್ದ. ಆಗಸ್ಟ್ 10ರಂದು ರಿಸಲ್ಟ್ ಬಂದಿದ್ದು ಅತಿ ಹೆಚ್ಚು ಮಾರ್ಕ್ ಪಡೆದಿದ್ದಾನೆ. ಕೆಲವೊಂದು ಸಬ್ಜೆಕ್ಟಲ್ಲಿ ನೂರಕ್ಕೆ ನೂರು ಪಡೆದಿದ್ದಾನೆ. ನಾವು ಇಬ್ಬರು ಒಟ್ಟಿಗೇ ಪರೀಕ್ಷೆಗೆ ತಯಾರಿ ನಡೆಸಿದ್ದೆವು. ಈಗ ಫಲಿತಾಂಶ ಬಂದಾಗ ಸಂಭ್ರಮಿಸಲು ಆತನೇ ಇಲ್ಲ ಎಂದು ಸಂಕಟ ತೋಡಿಕೊಂಡಿದ್ದಾರೆ, ಆತನ ಸ್ನೇಹಿತ ಲಿಖಿತ್ ರೈ. ಅಂದಹಾಗೆ, ಲಿಖಿತ್ ಸೇರಿದಂತೆ ಅತೀಶ್ ಸ್ನೇಹಿತರು ಜಾಲತಾಣದಲ್ಲಿ ಹೆದ್ದಾರಿ ಗುಂಡಿ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಲಿಖಿತ್ ಒಬ್ಬಂಟಿಯಾಗಿಯೇ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಮುಂದೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.

ಹೆದ್ದಾರಿ ಗುಂಡಿಯ ಕಾರಣಕ್ಕೆ ನನ್ನ ಗೆಳೆಯನ ಸಾವಾಗಿದೆ. ನಾವು ಈ ಬಗ್ಗೆ ಧ್ವನಿ ಎತ್ತಲಿದ್ದು ಸೆಕ್ಷನ್ ಇರುವುದರಿಂದ ಪ್ರತಿಭಟನೆ ನಡೆಸಿಲ್ಲ. ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸುತ್ತೇವೆ. ಮಂಗಳೂರಿನ ಎಲ್ಲ ಹೆದ್ದಾರಿ ಗುಂಡಿಗಳನ್ನೂ ಮುಚ್ಚಿಸುತ್ತೇವೆ ಎಂದು ಲಿಖಿತ್ ಹೇಳುತ್ತಾರೆ. ಜಾಲತಾಣದಲ್ಲಿ ನಡೆಸುತ್ತಿರುವ ಅಭಿಯಾನಕ್ಕೆ ಸಾರ್ವಜನಿಕ ವಲಯದಲ್ಲಿ ಬೆಂಬಲ ವ್ಯಕ್ತವಾಗಿದ್ದು, ನಿರ್ಲಜ್ಜ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿ ಗುಂಡಿಗೆ ಬಿದ್ದು ಯುವಕ ಬಲಿಯಾಗಿರುವುದು ಸಾರ್ವಜನಿಕರ ಸಾಕ್ಷಿ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದು ಹೈವೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Public is expressing anguish on the officials for their apathy of not filling the potholes in the city, because of which Aatish (20), a scooter rider, lost his life last Friday at Bikarnakatte Kandettu cross when he tried to evade a pothole on the road. Netizens have demanded to file a murder complaint against the concerned officials. Some others have vented anger against people’s representatives also.