ಉಳ್ಳಾಲ ನಗರಸಭೆಯಲ್ಲಿ ಭ್ರಷ್ಟಾಚಾರ ; ಆಡಳಿತಾರೂಢ ಕಾಂಗ್ರೆಸ್ ಸದಸ್ಯನಿಂದಲೇ ಅರೆನಗ್ನ ಪ್ರತಿಭಟನೆ 

15-09-22 10:59 pm       Mangalore Correspondent   ಕರಾವಳಿ

ಉಳ್ಳಾಲ ನಗರಸಭೆಗೆ ತೆರಿಗೆ ಹಣವನ್ನೂ ಅಧಿಕಾರಿಗಳು ಪಾವತಿಸದೆ ವಂಚಿಸುತ್ತಿದ್ದು, ನಾನಾ ರೀತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ತನ್ನ ಕ್ಷೇತ್ರಕ್ಕೆ ಅನುದಾನ ಮಂಜೂರಾದರೂ ಕಾಮಗಾರಿ ವಿಳಂಬಿಸಿದ ನಗರಾಡಳಿತದ ವಿರುದ್ಧ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರಾದ ರವಿಚಂದ್ರ ಗಟ್ಟಿ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. 

ಉಳ್ಳಾಲ, ಸೆ.15 : ಉಳ್ಳಾಲ ನಗರಸಭೆಗೆ ತೆರಿಗೆ ಹಣವನ್ನೂ ಅಧಿಕಾರಿಗಳು ಪಾವತಿಸದೆ ವಂಚಿಸುತ್ತಿದ್ದು, ನಾನಾ ರೀತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ತನ್ನ ಕ್ಷೇತ್ರಕ್ಕೆ ಅನುದಾನ ಮಂಜೂರಾದರೂ ಕಾಮಗಾರಿ ವಿಳಂಬಿಸಿದ ನಗರಾಡಳಿತದ ವಿರುದ್ಧ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರಾದ ರವಿಚಂದ್ರ ಗಟ್ಟಿ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. 

ಉಳ್ಳಾಲ ನಗರಸಭೆ ಸದಸ್ಯ ರವಿಚಂದ್ರ ಯಾನೆ ಪಾನಕ ರವಿ ನಗರಾಡಳಿತದ ವಿರುದ್ಧವೇ ಅರೆನಗ್ನವಾಗಿ ಪ್ರತಿಭಟಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಒಂದು ವೀಡಿಯೋ ತುಣುಕಲ್ಲಿ ನಗರಸಭೆಯ ಭ್ರಷ್ಟಾಚಾರದ ಬಗ್ಗೆ ರವಿ ಮಾತನಾಡಿದ್ದು ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ನಗರಸಭೆಯ ಅಧ್ಯಕ್ಷರಾದ ಚಿತ್ರಕಲಾ, ಉಪಾಧ್ಯಕ್ಷ ಆಯೂಬ್ ಮಂಚಿಲರವರು ನಲ್ವತ್ತರಿಂದ ಐವತ್ತು ಸಾವಿರ ರೂಪಾಯಿಗಳನ್ನ ಪಡೆಯುತ್ತಾರೆಂದು ಆರೋಪಿಸಿದ್ದಾರೆ. 

ಅಲ್ಲದೆ ನಗರದಾದ್ಯಂತ ಸಂಗ್ರಹಿಸಿದ ತೆರಿಗೆ ಹಣವನ್ನೂ ನಗರಸಭೆಗೆ ಕಟ್ಟದೆ ಜನರಿಗೆ ಸೈಬರ್ ನಲ್ಲಿ ಮುದ್ರಿತ ನಕಲಿ ರಶೀದಿ ನೀಡಿ ವಂಚಿಸುತ್ತಿದ್ದು ಇದರಲ್ಲಿ ತುಳಸಿ, ಚಂದ್ರ ಮತ್ತು ಆರೋಗ್ಯ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಿದ್ದಾರೆ. ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗುತ್ತಿದ್ದರೂ ಹಿಂದಿನ ಪೌರಾಯುಕ್ತ ರಾಯಪ್ಪ ಅವರು ಕೇವಲ ಸ್ವಚ್ಛ ಭಾರತವೆಂದು ಕಸದ ಹಿಂದೆ ಬಿದ್ದಿದ್ದರು. ಇದೀಗ ನೂತನವಾಗಿ ಬಂದಿರುವ ಪೌರಾಯುಕ್ತರು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕ ಬೇಕೆಂದು ಒತ್ತಾಯಿಸಿದ್ದಾರೆ.

 

ರವಿ ಪ್ರತಿನಿಧಿಸುತ್ತಿರುವ ವಾರ್ಡ್ ಗೆ ಕಾಮಗಾರಿ ನಡೆಸಲು 14 ನೇ ಹಣಕಾಸು ಯೋಜನೆಯಡಿ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಿಸದ ಧೋರಣೆ ವಿರುದ್ಧ ಗುರುವಾರ ನಗರಾಡಳಿತದ ಕಚೇರಿಯಲ್ಲಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

Mangalore Ullal town municipality corruption, Congress member does half naked protest.