20-30 ಸಾವಿರ ಮತಗಳ ಅಂತರದಲ್ಲಿ ಗೆದ್ದವನಿಗೆ ಸೀಮಂತದಲ್ಲಿ ಲಾಭ ಬೇಡ ; ಬೊಬ್ಬೆ ಹೊಡೆದು ಢಂಗುರ ಹೊಡೆದವರಿಗೆ ಅಭಿನಂದನೆ ! 

28-09-22 08:04 pm       Mangalore Correspondent   ಕರಾವಳಿ

ಚುನಾವಣೆಯಲ್ಲಿ ಇಪ್ಪತ್ತು, ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆದ್ದವನಿಗೆ ಸಾಮೂಹಿಕ ಸೀಮಂತದಲ್ಲಿ ರಾಜಕೀಯ ಲಾಭ ಪಡೆಯುವ ಅಗತ್ಯತೆ ಇಲ್ಲ.

ಉಳ್ಳಾಲ, ಸೆ.28 : ಚುನಾವಣೆಯಲ್ಲಿ ಇಪ್ಪತ್ತು, ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆದ್ದವನಿಗೆ ಸಾಮೂಹಿಕ ಸೀಮಂತದಲ್ಲಿ ರಾಜಕೀಯ ಲಾಭ ಪಡೆಯುವ ಅಗತ್ಯತೆ ಇಲ್ಲ. ನಾಲ್ಕು ಜನ ಬಂದು ಬೊಬ್ಬೆ ಹೊಡೆದರೆ ಇಂತಹ ಮಾದರಿ ಕಾರ್ಯಕ್ರಮದ ಬಗ್ಗೆ ಊರಿಗೆ ಢಂಗುರ ಬಾರಿಸಿದಂತಾಯ್ತು. ಅವರಿಗೆ ನನ್ನ ಅಭಿನಂದನೆ ಎಂದು ಬಜರಂಗದಳದ ಕಾರ್ಯಕರ್ತರಿಗೆ ಶಾಸಕ ಯು.ಟಿ ಖಾದರ್ ಟಾಂಗ್ ನೀಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಪ್ರಯುಕ್ತ ಬುಧವಾರ ಕೊಲ್ಯದ ನಾರಾಯಣಗುರು ಸಭಾಭವನದಲ್ಲಿ ನಡೆದ ಅನ್ನಪ್ರಾಶನ, ಪೌಷ್ಟಿಕ ಆಹಾರ ,ಶಿಶು ಪ್ರದರ್ಶನ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಸಭಾಂಗಣದ ಹೊರಗೆ ಹಾಕಲಾಗಿದ್ದ ಫ್ಲೆಕ್ಸ್ ವಿಚಾರದಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಫ್ಲೆಕ್ಸಲ್ಲಿ ಉಳ್ಳಾಲ ಶಾಸಕ ಯು.ಟಿ ಖಾದರ್ ಮತ್ತು ಅವರ ಪಕ್ಕದಲ್ಲಿ ಸ್ಥಳೀಯ ಹಿಂದು ಗರ್ಭಿಣಿ ಮಹಿಳೆಯೋರ್ವರ ಭಾವಚಿತ್ರ ಹಾಕಲಾಗಿತ್ತು. ಕಾರ್ಯಕ್ರಮದ ಆಯೋಜಕರು ಫ್ಲೆಕ್ಸ್ ನಲ್ಲಿ ಸ್ಥಳೀಯ ಹಿಂದು ಕಾರ್ಯಕರ್ತನ ಸಹೋದರಿ ಗರ್ಭಿಣಿಯಾಗಿದ್ದ ಭಾವಚಿತ್ರವನ್ನ ಅನುಮತಿ ಇಲ್ಲದೆ ಜಾಲತಾಣದಿಂದ ನಕಲು ಮಾಡಿ ಮುದ್ರಿಸಿದ್ದರು. ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಕಾರ್ಯಕ್ರಮ ಆಯೋಜಕರು ಫ್ಲೆಕ್ಸನ್ನ ತೆರವುಗೊಳಿಸಿದ್ದರು.

ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖಾದರ್, ಗರ್ಭಿಣಿಯರಿಗೆ ಅಗತ್ಯ ಉಳ್ಳ ಅರ್ಥಪೂರ್ಣ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಸೇರಿರುವ ಗರ್ಭಿಣಿಯರನ್ನ ಉದ್ದೇಶಿಸಿ ಮಾತನಾಡಿದ ಅವರು ಟೆನ್ಷನ್ ರಹಿತ ಆರೋಗ್ಯವಂತ ಮಗು ಮತ್ತು ತಾಯಂದಿರು ಸಮಾಜದಲ್ಲಿ ರೂಪುಗೊಳ್ಳಲಿ ಎಂದು ಹಾರೈಸಿದರು. 

ಶಾಸಕ ಖಾದರ್ ಅವರು ಮಕ್ಕಳಿಗೆ ಅನ್ನಪ್ರಾಶನ‌ ನಡೆಸಿದರು. ಸುಮಂಗಲೆಯರಿಂದ ಗರ್ಭಿಣಿಯರಿಗೆ ಬಾಗಿನ, ಫಲ, ಪುಷ್ಪ, ಉಡುಗೊರೆ, ಆರತಿ ಎತ್ತಿ ಸಾಮೂಹಿಕ ಸೀಮಂತ ನಡೆಸಲಾಯಿತು.

ಸಾಮೂಹಿಕ ಸೀಮಂತದಲ್ಲಿ ಶಾಸಕ ಖಾದರ್ ಜೊತೆ ಗರ್ಭಿಣಿ ಮಹಿಳೆಯ ಫ್ಲೆಕ್ಸ್ ; ಆಯೋಜಕರ ಎಡವಟ್ಟು, ಬಜರಂಗದಳ ಆಕ್ರೋಶಕ್ಕೆ ಫ್ಲೆಕ್ಸ್ ತೆರವು !

Banner of a pregnant woman without permission at Ullal, UT Khader slams Bajarangdal members.