ಟಿಪ್ಪು ದಾಳಿ ವೇಳೆ ತಮ್ಮನ್ನು ರಕ್ಷಿಸಿದ್ದಕ್ಕೆ ಬಂಟ ಸಮುದಾಯಕ್ಕೆ ಗೌರವ ; ಕಿನ್ನಿಗೋಳಿ ಚರ್ಚ್ ನಲ್ಲಿ ವಿಶಿಷ್ಟ ಸಂಪ್ರದಾಯ 

29-11-22 02:09 pm       Mangalore Correspondent   ಕರಾವಳಿ

220 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ದಾಳಿ ನಡೆಸಿದ ಸಂದರ್ಭ ತಮ್ಮನ್ನು ಹಾಗೂ ತಮ್ಮ ಪ್ರಾರ್ಥನಾ ಕೇಂದ್ರವನ್ನು ರಕ್ಷಿಸಿದ ನೆನಪಿನಲ್ಲಿ ಪ್ರತೀ ವರ್ಷ ಮೂರು ಬಂಟ ಸಮುದಾಯದ ಕುಟುಂಬಗಳಿಗೆ ಕ್ರೈಸ್ತ ಬಾಂಧವರು ಗೌರವ ಸಲ್ಲಿಸುವ ಸಂಪ್ರದಾಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ಕಿರೆಂ ಚರ್ಚ್ ನಲ್ಲಿ ನಡೆಯುತ್ತಿದೆ. 

ಮಂಗಳೂರು, ನ.29 : 220 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ದಾಳಿ ನಡೆಸಿದ ಸಂದರ್ಭ ತಮ್ಮನ್ನು ಹಾಗೂ ತಮ್ಮ ಪ್ರಾರ್ಥನಾ ಕೇಂದ್ರವನ್ನು ರಕ್ಷಿಸಿದ ನೆನಪಿನಲ್ಲಿ ಪ್ರತೀ ವರ್ಷ ಮೂರು ಬಂಟ ಸಮುದಾಯದ ಕುಟುಂಬಗಳಿಗೆ ಕ್ರೈಸ್ತ ಬಾಂಧವರು ಗೌರವ ಸಲ್ಲಿಸುವ ಸಂಪ್ರದಾಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ಕಿರೆಂ ಚರ್ಚ್ ನಲ್ಲಿ ನಡೆಯುತ್ತಿದೆ. 

ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಮಸ್ಕಟ್ಟೆ ಕಿರೆಂ ರೆಮದಿ ಅಮ್ಮನವರ ಇಗರ್ಜಿ  ಮಂಗಳೂರು ಡಯಾಸಿಸ್ ನ ಪ್ರಾಚೀನ ಚರ್ಚ್ ಗಳಲ್ಲಿ ಒಂದು. ದಾಮಸ್ಕಟ್ಟೆಯಲ್ಲಿರುವ ಕಿರೆಂ ರೆಮದಿ ಅಮ್ಮನವರ ಚರ್ಚ್ ಎಂದೇ ಪ್ರಸಿದ್ಧಿ ಹೊಂದಿರುವ ಈ ಚರ್ಚ್ ಸ್ಥಳೀಯ ಕ್ರೈಸ್ತರಿಂದ ನಿರ್ಮಾಣ ಆಗಿತ್ತು. ಟಿಪ್ಪು ಸುಲ್ತಾನ್ 1784 ರಲ್ಲಿ ಕಾರವಾರದಿಂದ ಕಾಸರಗೋಡಿನ ವರೆಗೆ ಕೆನರಾ ಕ್ರೈಸ್ತರ ಮೇಲೆ ದಾಳಿ ಮಾಡಿದ್ದ. 1784ರ ಫೆಬ್ರವರಿ 24 ರಂದು ಕಿನ್ನಿಗೋಳಿಯ ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾದಾಗ, ಸ್ಥಳೀಯ ಬಂಟ ಸಮುದಾಯದ ಯುವಕರು ಸೇರಿ ರಕ್ಷಣೆ ನೀಡಿದ್ದರು. 

ಸ್ಥಳೀಯ ಬಂಟ ಮನೆತನಗಳಾದ ಐಕಳ ಬಾವ, ತಾಳಿಪಾಡಿ ಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬದವರು ಟಿಪ್ಪು ಸೈನಿಕರನ್ನು ತಡೆದು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ನೂರಾರು ಕೈಸ್ತ ಬಾಂಧವರನ್ನು ಹಲವಾರು ದಿನಗಳ ಕಾಲ ತಮ್ಮ ಮನೆಯಲ್ಲಿಟ್ಟು ರಕ್ಷಣೆ ಮಾಡಿದ್ದರು. ಟಿಪ್ಪು ಸೈನಿಕರು ಮನೆ ಮನೆಗೆ ದಾಳಿ ಇಟ್ಟು ಕ್ರೈಸ್ತರನ್ನು ಹುಡುಕತೊಡಗಿದಾಗ, ಬಾಲಕರನ್ನು ತಮ್ಮ ಮನೆಯಲ್ಲಿಟ್ಟು ತಮ್ಮ ಕುಟುಂಬದ ಸದಸ್ಯನಂತೆ ಕಿವಿಗೆ ಚಿನ್ನದ ಓಲೆಗಳನ್ನು ಹಾಕಿ ಬಂಟ ಸಮುದಾಯದ ಸದಸ್ಯನಂತೆ ಬಿಂಬಿಸಿದ್ದರು. 

ಈ ವೇಳೆ, ಕೈಗೆ ಸಿಕ್ಕ ಸಾವಿರಾರು ಕ್ರೈಸ್ತರನ್ನು ಟಿಪ್ಪು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದ. ಆನಂತರ ಹಲವಾರು ವರ್ಷಗಳ ಬಳಿಕ ಬಂಧ ಮುಕ್ತಗೊಂಡ ಕ್ರೈಸ್ತ ಕುಟುಂಬದ ಸದಸ್ಯರು ಹಿಂತಿರುಗಿದಾಗ ಅವರಿಗೆ ಮಕ್ಕಳನ್ನು ಒಪ್ಪಿಸಲಾಗಿತ್ತು.  ಈ ಎಲ್ಲಾ ಕಾರಣದಿಂದ ಪ್ರತೀ ವರ್ಷ ನವಂಬರ್ ಕೊನೆಯ ವಾರದಲ್ಲಿ ನಡೆಯುವ ಕಿರೆಂ ರೆಮದಿ ಚರ್ಚ್ ನ ವಾರ್ಷಿಕ ಹಬ್ಬದಂದು ಈ ಮೂರು ಮನೆತನದವರಿಗೆ ಬಾಳೆಹಣ್ಣು, ಅಡಿಕೆ ಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಗುತ್ತದೆ.

ಗುತ್ತು ಮನೆತನದವರಿಗೆ ಪ್ರತೀ ವರ್ಷದಂತೆ ಈ ಬಾರಿಯೂ ಬಾಳೆಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಯಿತು. ತಾಳಿಪಾಡಿ ಗುತ್ತು ದಿನೇಶ್ ಭಂಡ್ರಿಯಾಲ್, ಸುಕುಮಾರ್ ಶೆಟ್ಟಿ, ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ, ಪ್ರಸಾದ್ ಶೆಟ್ಟಿ, ರಿಶಿತ್ ಶೆಟ್ಟಿ, ಐಕಳ ಬಾವ ಸುಕುಮಾರ್ ಭಂಡಾರಿ, ಜಯಪಾಲ ಶೆಟ್ಟಿ, ಭಾಸ್ಕರ್ ಶೆಟ್ಟಿ ಗೌರವ ಪಡೆದರೆ

ಪಣೀರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಿಕ್ಟೆರ್ ಡಿಮೆಲ್ಲೋ, ಕಿರೆಂ ಚರ್ಚ್ ಪ್ರಧಾನ ಧರ್ಮಗುರು ಓಸ್ವಾಲ್ಡ್ ಮೊಂತೆರೋ, ಸಹಾಯಕ ಧರ್ಮಗುರು ಸುನೀಲ್ ಡಿಸೋಜ, ಪಾದರ್ ಮ್ಯಾಕ್ಸಿಮ್ ನೊರೋನ್ನ, ಎಸ್.ವಿ.ಡಿ ಮನೆಯ ಧರ್ಮಗುರುಗಳು, ಕಿನ್ನಿಗೋಳಿ ವಲಯ ಧರ್ಮಗುರುಗಳು, ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸ್ಟೀವನ್  ಡಿಕುನ್ನ, ಕಾರ್ಯದರ್ಶಿ ಮ್ಯಾಕ್ಸಿಮ್ ಪಿಂಟೋ, ಸರ್ವ ಸಮಿತಿ ಚಾಲಕರಾದ ಸಂತಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದು ಸಂಪ್ರದಾಯ ಪ್ರಕಾರ ಗೌರವ ನೀಡಿದರು.

In a tradition, that is being followed from decades, , Catholics of the district of Dakshina Kannada felicitate members of three Hindu families and show their gratitude for having protected them during the attack from Tipu Sultan. This tradition is being held at Damaskatte, Kinnigoli near here every year.