ಹೆಜಮಾಡಿಯಲ್ಲಿ ಸದ್ಯಕ್ಕಿಲ್ಲ ಟೋಲ್ ಹೆಚ್ಚಳ ; ಜನಪ್ರತಿನಿಧಿಗಳ ತುರ್ತು ಸಭೆ, ಚೆಂಡು ಮುಖ್ಯಮಂತ್ರಿ ಅಂಗಳಕ್ಕೆ, ಉಡುಪಿ ನೋಂದಣಿ ವಾಹನಗಳಿಗೆ ವಿನಾಯ್ತಿ ಸಲಹೆ

03-12-22 04:48 pm       Udupi Correspondent   ಕರಾವಳಿ

ಹೆಜಮಾಡಿಯಲ್ಲಿ ಡಿ.4ರಿಂದ ಡಬಲ್ ವಸೂಲಿ ಎನ್ನುವ ಪ್ರಕಟಣೆಯಿಂದ ಎಚ್ಚೆತ್ತ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ.

ಉಡುಪಿ, ಡಿ.3: ಹೆಜಮಾಡಿಯಲ್ಲಿ ಡಿ.4ರಿಂದ ಡಬಲ್ ವಸೂಲಿ ಎನ್ನುವ ಪ್ರಕಟಣೆಯಿಂದ ಎಚ್ಚೆತ್ತ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತಿತರರು ಇದ್ದರು.

ಸಭೆಯಲ್ಲಿ ಈ ಹಂತದಲ್ಲಿ ಹೆಜಮಾಡಿಯಲ್ಲಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಜನಪ್ರತಿನಿಧಿಗಳು ವಿರೋಧ ಸೂಚಿಸಿದ್ದಾರೆ. ಅಲ್ಲದೆ, ಒಂದೇ ಬಾರಿಗೆ ಡಬಲ್ ವಸೂಲಿ ಮಾಡಿದರೆ ಪ್ರಮುಖವಾಗಿ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ ಎಂದು ಚರ್ಚೆ ನಡೆಸಿದ್ದು, ಶಾಸಕರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಶಾಸಕ ರಘುಪತಿ ಭಟ್, ಶುಲ್ಕ ವಸೂಲಿಗೆ ವಿರೋಧ ಸೂಚಿಸಿದ್ದು, ಈ ರೀತಿ ದರ ಹೆಚ್ಚಿಸುವುದು ಜನವಿರೋಧಿ ನೀತಿ ಎಂದು ಹೇಳಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಭಾಗವಹಿಸಿ ಅಧಿಕಾರಿಗಳು ಮತ್ತು ಶಾಸಕರ ಅಹವಾಲು ಕೇಳಿದ್ದಾರೆ.

ಬಳಿಕ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದು, ಅಲ್ಲಿವರೆಗೂ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹಿಸುವುದನ್ನು ಮುಂದೂಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸಲಹೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇಂಧನ ಸಚಿವ ಸುನಿಲ್ ಕುಮಾರ್ ಕೂಡ ತರಾತುರಿಯಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಈಗಾಗಲೇ ಶಾಸಕ ರಘುಪತಿ ಭಟ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತಂದಿರುವುದರಿಂದ ಸಮಸ್ಯೆಗೆ ಪರ್ಯಾಯ ಹುಡುಕುವ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಸರಕಾರದ ಪಾಪದ ಕೂಸು

ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಚಿವ ಸುನಿಲ್ ಕುಮಾರ್, ಸುರತ್ಕಲ್ ಟೋಲ್ ಗೇಟ್ ಅನ್ನುವುದು 2012-13ರಲ್ಲಿ ಆಗಿನ ಸರಕಾರ ತಂದಿಟ್ಟ ಪಾಪದ ಕೂಸು. ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸುವ ನೆಪದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆಜಮಾಡಿಯಲ್ಲಿ ವಿಲೀನಗೊಳಿಸುವ ಜನವಿರೋಧಿ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಉಡುಪಿ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ. ಸಮಸ್ಯೆ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಮನವರಿಕೆ ಮಾಡುತ್ತೇವೆ. ಅಲ್ಲಿ ವರೆಗೂ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹ ಮಾಡದಂತೆ ಹೆದ್ದಾರಿ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದರು.

ಸುರತ್ಕಲ್ ನಲ್ಲಿ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾಕ್ಕೆ ಹಾಕಿದರೆ, ಅಲ್ಲಿಂದ ದಿನನಿತ್ಯ ಸಾಗುವ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ನಾವು ಇದಕ್ಕಾಗಿ ಎರಡು ಪ್ರಸ್ತಾವನೆ ಇಟ್ಟಿದ್ದೇವೆ. ಉಡುಪಿ ನೋಂದಣಿಯ ಕೆಎ 20 ನಂಬರ್ ಇರುವ ವಾಹನಗಳಿಗೆ ರಿಯಾಯ್ತಿ ನೀಡಬೇಕು. ಅದಕ್ಕೆ ಪ್ರತ್ಯೇಕ ದಾರಿ ಮಾಡಿಕೊಟ್ಟು ಕೇವಲ ಹೆಜಮಾಡಿ ಟೋಲನ್ನು ಮಾತ್ರ ಕಟ್ಟುವಂತೆ ವ್ಯವಸ್ಥೆ ಮಾಡಬೇಕು. ಇನ್ನೊಂದು ಈ ಟೋಲಿನ ಹೊರೆಯನ್ನು ಒಂದೇ ಕಡೆ ಹೊರಿಸುವುದರ ಬದಲು ಮೂರ್ನಾಲ್ಕು ಕಡೆಗಳಲ್ಲಿ ಹಂಚಿಕೊಳ್ಳುವ ಪ್ರಸ್ತಾಪ ಇಟ್ಟಿದ್ದೇವೆ.

ಸುರತ್ಕಲ್ ಟೋಲ್ ರದ್ದುಗೊಂಡ ನೆಪದಲ್ಲಿ ಅಲ್ಲಿನ ಶುಲ್ಕವನ್ನು ಪಕ್ಕದ ಇನ್ನೊಂದು ಟೋಲ್ ಪ್ಲಾಜಾದಲ್ಲಿ ಹೊರಿಸುವುದು ಅವೈಜ್ಞಾನಿಕ. ಇದನ್ನು ದೆಹಲಿ ಹಂತದಲ್ಲಿ ಸಮಸ್ಯೆ ಸರಿಪಡಿಸಲು ಸಂಸದರ ಜೊತೆಗೆ ಮಾತನಾಡುತ್ತೇವೆ. ಮುಖ್ಯಮಂತ್ರಿ ಜೊತೆ ಇವತ್ತೇ ಮಾತನಾಡುವುದಾಗಿ ಉಸ್ತುವಾರಿ ಸಚಿವ ಅಂಗಾರ ಹೇಳಿದ್ದಾರೆ. ನಾವು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ನಾವು ಜಿಲ್ಲೆಯ ಜನರ ಪರ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

Hejmady Double Toll collection temporary withheld clarifies udupi district administration.