ನೈತಿಕ ಪೊಲೀಸ್ ಪ್ರಕರಣ ; ಮುಖ್ಯಮಂತ್ರಿಗೆ ಕಾನೂನು ಗೊತ್ತಿಲ್ವೇ.. ಇವ್ರೇ ಬೆಂಬಲಿಸಿ ಹೇಳಿಕೆ ನೀಡಿದ್ರೆ ಕಾನೂನು, ಪೊಲೀಸ್ ವ್ಯವಸ್ಥೆ ಯಾಕಿರೋದು? 

17-12-22 01:30 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಾನೂನಿನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ, ಮುಖ್ಯಮಂತ್ರಿ ಇದಕ್ಕೆ ಪ್ರೋತ್ಸಾಹ ನೀಡುವ ರೀತಿ ಹೇಳಿಕೆ ಕೊಡ್ತಿದಾರೆ.

ಮಂಗಳೂರು, ಡಿ.17 : ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಾನೂನಿನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ, ಮುಖ್ಯಮಂತ್ರಿ ಇದಕ್ಕೆ ಪ್ರೋತ್ಸಾಹ ನೀಡುವ ರೀತಿ ಹೇಳಿಕೆ ಕೊಡ್ತಿದಾರೆ. ಏಕ್ಷನ್ ಗೆ ರಿಯಾಕ್ಷನ್ ಅಂದರೇನು? ಪೊಲೀಸರು ಮತ್ತೆ ಯಾಕಿರೋದು ಅಂತ ಪ್ರಶ್ನೆ ಮಾಡಿದ್ದಾರೆ.  

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಕಳೆದ ಎರಡು ತಿಂಗಳಲ್ಲಿ ಈ ಭಾಗದಲ್ಲಿ ಏಳೆಂಟು ನೈತಿಕ ಪೊಲೀಸ್ ಪ್ರಕರಣ ಆಗಿದ್ಯಂತೆ. ಇಂಥ ಕೃತ್ಯವನ್ನು ಉಗ್ರವಾಗಿ ಖಂಡಿಸ್ತೇನೆ. ಯಾರು ಇದನ್ನು ಮಾಡ್ತಿದ್ದಾರೋ, ಅಂಥವರ ಮೇಲೆ ಕಠಿಣ ಕಾನೂನು ಕ್ರಮ ತಗೋಬೇಕು. ಮುಖ್ಯಮಂತ್ರಿಗೆ ಕಾನೂನು ಗೊತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಅನಗತ್ಯವಾಗಿ ಕಾನೂನು ಕೈಗೆ ತೆಗೆದುಕೊಂಡು ಶಾಂತಿ ಕದಡದೋದಾದ್ರೆ ಪೊಲೀಸ್ ವ್ಯವಸ್ಥೆ ಮತ್ತೆ ಯಾಕಿರೋದು ? ದೇಶದಲ್ಲಿ ಸಂವಿಧಾನ ಅಂತ ಯಾಕಿರೋದು ? ಎಂದು ಪ್ರಶ್ನೆ ಮಾಡಿದ್ದಾರೆ. 

ಇಂಥ ವಿಚಾರದಲ್ಲಿ ಮುಖ್ಯಮಂತ್ರಿಯೇ ಏಕ್ಷನ್ ಗೆ ರಿಯಾಕ್ಷನ್ ಅಂತ ಹೇಳಿಕೆ ಕೊಟ್ಟರೆ ಏನರ್ಥ. ಮುಖ್ಯಮಂತ್ರಿ ಹೇಳಿದ್ರು ಅಂತ ಕಾನೂನು ಕೈಗೆ ತಗೊಳ್ತಿದಾರೆ. ಯಾರೇ ಆಗಲಿ, ಕಾನೂನು ಸುವ್ಯವಸ್ಥೆ ಕುಂದುಂಟಾಗುವ ರೀತಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಯೋತ್ಪಾದನೆ ಹೇಳಿಕೆ ಕುರಿತ ಪ್ರಶ್ನೆಗೆ, ಕೆಪಿಸಿಸಿ ಅಧ್ಯಕ್ಷರು ಭಯೋತ್ಪಾದಕರ ಪರ ಅಂತ ಹೇಳಿಕೆ ಕೊಟ್ಟಿದ್ದಾರೆಯೇ ?ಬಿಜೆಪಿಯವರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ತಿದೆ ಎಂದಿದ್ದಾರೆ.‌ ಬಿಜೆಪಿ ಬ್ಲಾಸ್ಟ್ ಪ್ರಕರಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದಿರುವುದು. ಬಿಜೆಪಿಯವ್ರಿಗೆ ಬೇಕಾದ್ದು ಇಂಥದ್ದೇ ಅಲ್ವಾ.. ತಮಗೆ ಬೇಕಾದ ರೀತಿ ತಿರುಚಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. 

ಕಾಂಗ್ರೆಸ್ ಕಾಲದಲ್ಲಿ ಭಯೋತ್ಪಾದನೆ ಹೆಚ್ಚಳ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ ಸರಕಾರ ಭಯೋತ್ಪಾದನೆಯನ್ನು ಹತ್ತಿಕ್ಕಲಿ. ಈಗ ಎಂಟು ವರ್ಷಗಳಿಂದ ಡಬಲ್ ಇಂಜಿನ್ ಸರಕಾರ ಅಧಿಕಾರದಲ್ಲಿದೆಯಲ್ಲ, ಹತ್ತಿಕ್ಕಲಿ.‌ ಉಗ್ರವಾದಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿ, ಯಾರು ಬೇಡ ಎಂದಿದ್ದು. ನಿಮಗೆ ಜನರು ಅಧಿಕಾರ ಕೊಟ್ಟಿದ್ದು ಯಾಕೆ. ಜನರನ್ನು ಪ್ರಚೋದನೆ ಮಾಡೋದಕ್ಕಾ.. ದಿಕ್ಕು ತಪ್ಪಿಸುವುದಕ್ಕಾ. ಯಾರು ದೇಶದ್ರೋಹ ಕೆಲಸ ಮಾಡುತ್ತಿದ್ದಾರೆ ಅಂತ ಪತ್ತೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

Repeated moral police incidents in Mangalore, Congress leader Siddaramaiah slams CM Bommai in Mangalore.