ಮುಸ್ಲಿಮರಿಗೆ ಮಾತ್ರ ಮೀಸಲು ಯಾಕೆ? ಬೌದ್ಧರು, ಜೈನ್, ಕ್ರೈಸ್ತರ ಬಗ್ಗೆ ಕಾಂಗ್ರೆಸಿಗೆ ಕಾಳಜಿ ಇಲ್ಲವೇ ? ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾಸ್ ಶರ್ಮಾ ಪ್ರಶ್ನೆ 

07-05-23 01:59 pm       Mangalore Correspondent   ಕರಾವಳಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ಮೀಸಲು ಕೊಡುತ್ತೇವೆ ಎಂದಿದ್ದಾರೆ. ಯಾಕೆ ಇವರಿಗೆ ಮುಸ್ಲಿಮರು ಮಾತ್ರ ಕಾಣುತ್ತಾರೆ. ಬೌದ್ಧರು, ಜೈನ್, ಸಿಖ್, ಕ್ರೈಸ್ತರು, ಪಾರ್ಸಿಗಳು ಯಾಕೆ ಕಾಣೋದಿಲ್ಲ.‌

ಮಂಗಳೂರು, ಮೇ 7 : ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ಮೀಸಲು ಕೊಡುತ್ತೇವೆ ಎಂದಿದ್ದಾರೆ. ಯಾಕೆ ಇವರಿಗೆ ಮುಸ್ಲಿಮರು ಮಾತ್ರ ಕಾಣುತ್ತಾರೆ. ಬೌದ್ಧರು, ಜೈನ್, ಸಿಖ್, ಕ್ರೈಸ್ತರು, ಪಾರ್ಸಿಗಳು ಯಾಕೆ ಕಾಣೋದಿಲ್ಲ.‌ ಅಂಬೇಡ್ಕರ್ ಸಂವಿಧಾನದಲ್ಲಿ ಧರ್ಮ ಆಧರಿಸಿ ಮೀಸಲಾತಿ ಕೊಟ್ಟಿಲ್ಲ. ಆರ್ಥಿಕ ಹಿಂದುಳಿದವರಿಗಷ್ಟೆ ಮೀಸಲು ಕೊಟ್ಟಿರುವುದು. ಪ್ರಿಯಾಂಕ ಗಾಂಧಿ ಮುಸ್ಲಿಮರಿಗೆ ಮೀಸಲು ಕೊಡುತ್ತೇವೆ ಎಂದಿದ್ದಾರೆ. ಕಾಂಗ್ರೆಸಿಗೆ ಮುಸ್ಲಿಮರ ತುಷ್ಟೀಕರಣ ಮಾತ್ರ ಮುಖ್ಯ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾಸ್ ಶರ್ಮಾ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 

ನಗರದ ಲಾಲ್ ಬಾಗಿನ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪಿಎಫ್ಐ ಈಗಾಗಲೇ ಬ್ಯಾನ್ ಆಗಿರುವಂಥ ಮೂಲಭೂತವಾದಿ ಸಂಘಟನೆ. ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಪಿಎಫ್ಐ, ಐಸಿಸ್ ಜೊತೆಗೆ ಹೋಲಿಸುವ ಅಗತ್ಯವಿತ್ತೇ ? ಯಾಕೆ ಹಿಂದು ಸಂಘಟನೆಯನ್ನು ಉಗ್ರವಾದಿಗಳ ರೀತಿ ತೋರಿಸಬೇಕಿತ್ತು?  ಬಜರಂಗದಳ ಮೇಲೆ ದೇಶದ ಯಾವುದೇ ಕಡೆ ದೇಶದ್ರೋಹದ ಕೇಸು ದಾಖಲಾಗಿಲ್ಲ, ದೇಶದ್ರೋಹಿ ಕೆಲಸ ಮಾಡಿಲ್ಲ. ಕೆಲವು ಕಡೆ ಮೋರಲ್ ಪೊಲೀಸಿಂಗ್ ಕೇಸು ಆಗಿರಬಹುದು. ಪಿಎಫ್ಐ ಮೋರಲ್ ಪೊಲೀಸಿಂಗ್ ಕಾರಣಕ್ಕೆ ಬ್ಯಾನ್ ಆಗಿದ್ದಲ್ಲ.‌ ಕಾಂಗ್ರೆಸಿಗೆ, ಬಜರಂಗದಳ ಬದಲು ಬೇರೊಂದು ಮೂಲಭೂತವಾದಿ ಸಂಘಟನೆಯನ್ನು ತೋರಿಸಬಹುದಿತ್ತು. ಆದರೆ ಹಿಂದು ಸಂಘಟನೆಯನ್ನೂ ಪಿಎಫ್ಐ ಜೊತೆಗೆ ಒಂದೇ ರೀತಿ ಎಂದು ಬಿಂಬಿಸುವುದು ಕಾಂಗ್ರೆಸ್ ಯೋಜನೆ ಎಂದು ಹೇಳಿದರು.‌

ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮೇಲಿನ ನೂರಾರು ಕೇಸುಗಳನ್ನು ಹಿಂಪಡೆದಿದ್ದಾರೆ. ಇದು ತುಷ್ಟೀಕರಣಕ್ಕಾಗಿ ಅಲ್ಲವೇ ಎಂದು ಹಿಮಾಂತ್ ಬಿಸ್ವಾಸ್ ಶರ್ಮಾ ಪ್ರಶ್ನೆ ಮಾಡಿದರು. ಪಿಎಫ್ಐಯನ್ನು ನಿಷೇಧ ಮಾಡಿದ್ದರೂ ಕಾಂಗ್ರೆಸಿನ ಯಾವುದೇ ನಾಯಕ ಹೇಳಿಕೆ ಕೊಟ್ಟಿಲ್ಲ. ಇವರು ದೇಶದ ಪರವಾಗಿದ್ದರೆ, ಮೂಲಭೂತವಾದಿ ಸಂಘಟನೆಗಳ ವಿರುದ್ಧ ಇದ್ದರೆ ಹೇಳಿಕೆ ಕೊಡಬೇಕಿತ್ತು ಎಂದರು.  

ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯಾಗಬೇಕು. ಈ ಕಾನೂನು ಬಂದರೆ, ಬಹುಪತ್ನಿತ್ವ ನಿಷೇಧ ಆಗುತ್ತದೆ. ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರ ಘನತೆ ಹೆಚ್ಚಿಸಿದ್ದು ಬಿಜೆಪಿ. ಬಹುಪತ್ನಿತ್ವದಿಂದಾಗಿ ಮಹಿಳೆಯರಿಗೆ ಗೌರವ ಇಲ್ಲದಂತಾಗಿದೆ. ಮಕ್ಕಳು ಮಾಡುವುದಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ.  ಎನ್ನಾರ್ಸಿ ಮತ್ತು ಏಕರೂಪದ ಕಾನೂನು ದೇಶದಲ್ಲಿ ಜಾರಿಯಾದರೆ, ಇವೆಲ್ಲ ಅನುಷ್ಟ ಪದ್ಧತಿಗೆ ಬ್ರೇಕ್ ಬೀಳಲಿದೆ ಎಂದರು ಬಿಸ್ವಾಸ್ ಶರ್ಮಾ. 

ಒಂದು ವಾರದಲ್ಲಿ ಮೋದಿ ರಾಜ್ಯದಲ್ಲಿ ನಡೆಸಿದ ರ್ಯಾಲಿ ಪರಿಣಾಮ ಬಿಜೆಪಿ ಪರ ವಾತಾವರಣ ಉಂಟಾಗಿದೆ. ‌ಬಿಜೆಪಿ ರಾಜ್ಯದಲ್ಲಿ 150 ಸೀಟು ಗೆಲ್ಲುವುದು ಖಚಿತ ಎಂದರು.

Congress engages in corruption wherever it holds power slams Assam chief minister Himanta Biswa Sarma in Mangalore. Assam chief minister Himanta Biswa Sarma expressed his admiration for the culture, tradition, and contributions of Karnataka during his two-month stay in the state. He stated, "When I observe the campaigning, rallies, and people's involvement, I am confident that the BJP will secure more than 150 seats in the Karnataka elections."