ಬಿಜೆಪಿಯವರು ದೇವಸ್ಥಾನಗಳ ಮುಂದೆ ಹುಂಡಿ ಹಣ ಕಳ್ಳರಿದ್ದಾರೆ ಅಂತ ಬೋರ್ಡ್ ಅಕ್ಬೇಕು ; ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

01-07-26 09:49 pm       HK News Desk   ಕರ್ನಾಟಕ

ಬೆಂಗಳೂರು, ಜುಲೈ 02:ಅಯೋಧ್ಯೆ ರಾಮಮಂದಿರ ಹುಂಡಿಯಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಇಷ್ಟು ದಿನಗಳ ಕಾಲ ದೇವಸ್ಥಾನಗಳ ಮುಂದೆ ಚಪ್ಪಲಿ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಲಾಗುತಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, ಜುಲೈ 02:ಅಯೋಧ್ಯೆ ರಾಮಮಂದಿರ ಹುಂಡಿಯಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಇಷ್ಟು ದಿನಗಳ ಕಾಲ ದೇವಸ್ಥಾನಗಳ ಮುಂದೆ ಚಪ್ಪಲಿ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಲಾಗುತಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರಕ್ಕೆ ಸೇರಿದ 200 ಕೋಟಿ ರೂ. ದೇಣಿಗೆ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ಆಮೆಗತಿಯಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಸುಪ್ರೀಂಕೋರ್ಟ್​​ನ ನಿವೃತ್ತ ನ್ಯಾಯಾಧೀಶರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ದುರ್ಬಳಕೆಯಾಗಿರುವ 200 ಕೋಟಿ ರೂ. ಹಣಕ್ಕೆ ಕರ್ನಾಟಕದ ನಂಟಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕ ಮೂಲದ ವ್ಯಕ್ತಿಗೂ ಹಣ ತಲುಪಿದೆ. ಈ ಹಿಂದೆ ಗೋ ಹತ್ಯೆ ತಡೆ ಕಾಯ್ದೆ ಜಾರಿ ತರಲು ಸಹಕರಿಸಿದಕ್ಕಾಗಿ ವ್ಯಕ್ತಿಗೆ ಹಲವು ರಿವಾರ್ಡ್​​ಗಳು ಬಂದಿವೆ. ಈ ಬಗ್ಗೆ ನ್ಯಾಯಯುತವಾಗಿ ಸಮಗ್ರ ತನಿಖೆ ನಡೆಸಿದಾಗ ಸತ್ಯ ಹೊರಬರಲಿದೆ ಎಂದರು.

ರಾಜ್ಯದಲ್ಲಿ ಆರಂಭಗೊಂಡಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧ ಮಾತನಾಡಿದ ಹರಿಪ್ರಸಾದ್, ಗ್ಯಾರಂಟಿ ಯೋಜನೆಯ ಹಣ ಬರುತ್ತಿದೆ ಎಂದು ನಿರ್ಲಕ್ಷ್ಯಿಸಬೇಡಿ. ನಾನಾ ಕಾರಣಗಳಿಂದ ಪಟ್ಟಿಯಿಂದ ಕೈ ಬಿಟ್ಟರೆ ಸರ್ಕಾರದ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್ ಕಡೆಯಿಂದ ಪ್ರತ್ಯೇಕ ಎಸ್ಐಆರ್ ಕೈಗೊಂಡಿದ್ದು, ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ನೈಜತೆ ಪರಿಶೀಲಿಸಲಿದ್ದಾರೆ. ರಾಜ್ಯದೆಲ್ಲೆಡೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್​ಆರ್) ನಿಯೋಜಿಸಲಾಗಿದೆ. ಕಾಂಗ್ರೆಸ್ ಸೋತ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಂದ ಅಗತ್ಯಕ್ಕೆ ಅನುಗುಣವಾಗಿ ಬಿಎಲ್​ಆರ್​​ಗಳನ್ನು ನಿಯೋಜಿಸದಿದ್ದರಿಂದ ಹಿನ್ನಡೆಯಾಗಿದೆ ಎಂದು ಹೇಳಿದರು.

ರಾಮ್ ಮಾಧವ್ ಪಾಕಿಸ್ತಾನದ ಜೊತೆ 4 ಬಾರಿ ಗುಪ್ತ ಸಭೆ ಮಾಡಿದ್ದು ಯಾಕೆ?:ಇದಕ್ಕೂ ಮುನ್ನ, ಭಾರತ್ ಜೋಡೋ ಭವನದಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಹರಿಪ್ರಸಾದ್, ಸದ್ಯದಲ್ಲೇ ಜೆಬಿಎ ಚುನಾವಣೆ ಬರಲಿದೆ. ಬಿಜೆಪಿ ಹೈಕಮಾಂಡ್ ಜಿಬಿಎ ಚುನಾವಣಾ ಉಸ್ತುವಾರಿಯಾಗಿ ರಾಮ್ ಮಾಧವ್ ಅವರನ್ನ ನಿಯೋಜಿಸಿದೆ. ಕೊಲಂಬೊ, ಲಂಡನ್ ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ. ಇತ್ತೀಚೆಗೆ ಅವರ ಗುರುಗಳಾದ ಮೋಹನ್ ಭಾಗವತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ನಾನು ಮಾತನಾಡಿದಾಗ 2 ವರ್ಷ ನನ್ನ ಹಿಂದೆ ಬಿದ್ದಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಬಳಿಕ ನನ್ನ ಸಹವಾಸ ಬಿಟ್ಟರು ಎಂದರು.