ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿಗೆ ಹೊಸ ಪ್ರಯತ್ನ, ದಕ್ಷಿಣ ಕನ್ನಡದ ಹಳ್ಳಿಗಳಲ್ಲಿ ಉಚಿತ ಹೃದಯ ತಪಾಸಣೆ 

07-06-23 09:13 pm       Mangalore Correspondent   ಕರಾವಳಿ

ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ ನಡೆಸುವುದಕ್ಕಾಗಿ ಹೃದಯ ತಜ್ಞರೇ ಹಳ್ಳಿ ಹಳ್ಳಿಗೆ ತೆರಳಿ, ಜನರನ್ನು ಉಚಿತವಾಗಿ ಪರೀಕ್ಷೆ ನಡೆಸುವ ಹೃದಯ ವೈಶಾಲ್ಯ ಯೋಜನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. 

ಮಂಗಳೂರು, ಜೂ.7: ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ ನಡೆಸುವುದಕ್ಕಾಗಿ ಹೃದಯ ತಜ್ಞರೇ ಹಳ್ಳಿ ಹಳ್ಳಿಗೆ ತೆರಳಿ, ಜನರನ್ನು ಉಚಿತವಾಗಿ ಪರೀಕ್ಷೆ ನಡೆಸುವ ಹೃದಯ ವೈಶಾಲ್ಯ ಯೋಜನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. 

ಬುಧವಾರ ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕಾರ್ಡಿಯಾಲಜಿ ಡೋರ್ ಸ್ಟೆಪ್ ಫೌಂಡೇಶನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಹಾಗೂ ತಂಡದವರಿಂದ "ಹೃದಯ ತಜ್ಞ ಮನೆ ಬಾಗಿಲಿಗೆ" ಯೋಜನೆಗೆ ಚಾಲನೆ ನೀಡಲಾಯಿತು. 

ಈ ವೇಳೆ ಮಾತನಾಡಿದ ಜಿಪಂ ಸಿಇಓ ಡಾ.ಕುಮಾರ್, ಯೋಜನೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿರುವ ಬಗ್ಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ, ಯೋಜನೆಯ ಸೂತ್ರಧಾರಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್  ಅವರ ಚಿಂತನೆಯಲ್ಲಿ ಯೋಜನೆ ಮೂಡಿಬಂದಿದ್ದು ಗ್ರಾಮೀಣ ಜನರ ಆರೋಗ್ಯದ ದೃಷ್ಠಿಯಿಂದ ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ, ಅವರ ಮನೆ ಬಾಗಿಲಲ್ಲೇ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೃದಯ ವೈಶಾಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪ್ರತೀ ಬುಧವಾರ ತಜ್ಞ ವೈದ್ಯರು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಸಾರ್ವಜನಿಕರನ್ನು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು. 

ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಮಾತನಾಡಿ, ಹೃದಯ ವೈಶಾಲ್ಯ ಯೋಜನೆ ಜಿಲ್ಲೆಗೆ ಮಾತ್ರ ಸೀಮಿತವಾಗದೇ, ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎನ್ನುವ ಆಶಯವಿದೆ. ಯೋಜನೆಯನ್ನು ಯಶಸ್ವಿಗೊಳಿಸುವ ಜಾವಬ್ದಾರಿ ಊರಿನ ಜನರು ಹಾಗೂ ಆರೋಗ್ಯಾಧಿಕಾರಿಗಳ ಮೇಲಿದೆ. ಈ ಯೋಜನೆಯನ್ನು ಮುಂದೆಯೂ ಎಲ್ಲಾ ಕಡೆಗಳಲ್ಲಿ ಅನುಷ್ಠಾನ ತರಲಾಗುವುದು ಎಂದರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯೆ ಶ್ವೇತಾ ಪ್ರವೀಣ್ ಜೈನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ| ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ್ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಸುಜಯ್, ವಕೀಲ ಬಾಹುಬಲಿ ಪ್ರಸಾದ್, ಮತ್ತಿತರ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಫಲಾನುಭವಿಗಳು ಈ ಸಂದರ್ಭದಲ್ಲಿದ್ದರು.

Mangalore Free Heart Check at door service in Dakshina Kannada under Cardiologist Dr Padmanabha Kamath.