Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂಗಾರು ಜೋರು ; ತುಂಬಿ ಹರಿದ ಫಲ್ಗುಣಿ- ನೇತ್ರಾವತಿ, ಇನ್ನೂ ಒಂದು ವಾರ ಭಾರೀ ಮಳೆಯ ಸೂಚನೆ, ಬೆಳ್ತಂಗಡಿಗೆ ಎನ್ ಡಿ ಆರ್ ಎಫ್ ನಿಯೋಜನೆ

01-08-26 10:25 pm       HK News Staffer   ಕರಾವಳಿ

ಕರಾವಳಿ ಭಾಗದಲ್ಲಿ ಕೊನೆಗೂ ಮಳೆ ಬಿರುಸಾಗಿದ್ದು ಮುಂಗಾರಿನ ವೈಭವ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಿ ಶನಿವಾರ ಇಡೀ ದಿನ ಮಳೆಯಾಗಿದ್ದು ನದಿ ಕೊಳ್ಳಗಳು ತುಂಬಿ ಹರಿಯತೊಡಗಿವೆ. ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ನದಿಗಳು ಭೋರ್ಗರೆದು ಹರಿದಿದೆ. 

ಮಂಗಳೂರು, ಆ.1: ಕರಾವಳಿ ಭಾಗದಲ್ಲಿ ಕೊನೆಗೂ ಮಳೆ ಬಿರುಸಾಗಿದ್ದು ಮುಂಗಾರಿನ ವೈಭವ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಿ ಶನಿವಾರ ಇಡೀ ದಿನ ಮಳೆಯಾಗಿದ್ದು ನದಿ ಕೊಳ್ಳಗಳು ತುಂಬಿ ಹರಿಯತೊಡಗಿವೆ. ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ನದಿಗಳು ಭೋರ್ಗರೆದು ಹರಿದಿದೆ. 

ಇದೇ ವೇಳೆ, ಹವಾಮಾನ ಇಲಾಖೆಯಿಂದ ಇನ್ನೊಂದು ವಾರ ಕಾಲ ಇದೇ ರೀತಿ ನಿರಂತರ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಜೋರಾದ ಮಳೆ ಬರುವುದು ವಾಡಿಕೆ. ಆದರೆ ಈ ಬಾರಿ ಜೂನ್, ಜುಲೈ ತಿಂಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ. ಹೆಚ್ಚಿನ ದಿನಗಳಲ್ಲಿ ಬಿಸಿಲಿದ್ದುದರಿಂದ ಭತ್ತ ಕೃಷಿಕರಿಗೆ ನೀರಿಲ್ಲದೆ ತೊಂದರೆಯಾಗಿತ್ತು. ಈಗ ಅಗಸ್ಟ್ ಕಾಲಿಡುತ್ತಿದ್ದಂತೆ ಮರೆಯಾಗಿದ್ದ ಮಳೆರಾಯ ಧುತ್ತನೆ ಬಂದಿದ್ದಾನೆ‌. ಕೇರಳ, ಕರ್ನಾಟಕದ ಕರಾವಳಿಯಲ್ಲಿ ಬಿರುಸಿನ ಮಳೆಯಾಗಿದೆ.  

ನಿರಂತರ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ಹರಿವು ಹೆಚ್ಚಿದ್ದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ಧರ್ಮಸ್ಥಳ ಬಳಿಯ ಸ್ನಾನಘಟ್ಟ ಮುಳುಗಡೆಯಾಗಿದ್ದು ಭಕ್ತರ ಸ್ನಾನಕ್ಕಾಗಿ ಭದ್ರತೆ ಕಲ್ಪಿಸಲಾಗಿದೆ. ಇದಲ್ಲದೆ, ಆಸುಪಾಸಿನಲ್ಲಿ ಹೊಳೆಗಳು ಕೂಡ ತುಂಬಿ ಹರಿದಿದ್ದು ಮುಂಜಾಗ್ರತಾ ಕ್ರಮಕ್ಕಾಗಿ ಎನ್ ಡಿಆರ್ ಎಫ್ ತಂಡವನ್ನು ಬೆಳ್ತಂಗಡಿಗೆ ಕರೆಸಲಾಗಿದೆ. 30 ಮಂದಿಯ ತಂಡ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಬೀಡು ಬಿಟ್ಟಿದೆ‌. 

ಮಳೆಯಿಂದಾಗಿ ಧರ್ಮಸ್ಥಳ ಬಳಿಯ ಮುಂಡಾಜೆಯಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದೆ. ಧರ್ಮಸ್ಥಳ - ಮಣ್ಣಸಂಕ ರಸ್ತೆ ನೇತ್ರಾವತಿ ನೆರೆಯಿಂದಾಗಿ ಜಲಾವೃತಗೊಂಡಿದೆ. ಸವಣಾಲು ಎಂಬಲ್ಲಿ ಫಲ್ಗುಣಿ ನೆರೆಯಿಂದಾಗಿ ಸೇತುವೆ ಮೇಲೆ ನೀರು ಹರಿದಿದೆ. ನೇತ್ರಾವತಿ ನದಿ ಈ ಮಳೆಗಾಲದಲ್ಲಿ ಮೊದಲ ಬಾರಿಗೆ ತುಂಬಿ ಹರಿದಿದ್ದು ವಿಶೇಷ. ಹಿಂದೆಲ್ಲ ನೇತ್ರಾವತಿ ನದಿಯಲ್ಲಿ ಹಲವು ಬಾರಿ ನೆರೆ ಬಂದು ಬಂಟ್ವಾಳದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸ್ಥಿತಿಯಾಗುತ್ತಿತ್ತು.