Puttur Panchyath Elections, Arun Puthila: ಪುತ್ತೂರಿನಲ್ಲಿ ಮತ್ತೆ ಬಿಜೆಪಿಗೆ ಮುಖಭಂಗ ; ಎರಡು ಗ್ರಾಪಂ ಚುನಾವಣೆಯಲ್ಲು ಮೂರನೇ ಸ್ಥಾನಕ್ಕಿಳಿದ ಬಿಜೆಪಿ, ಗೆದ್ದು ಬೀಗಿದ ಪುತ್ತಿಲ ಪರಿವಾರ ! 

26-07-23 01:41 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಬಿಜೆಪಿ ವಿರುದ್ಧದ ಪುತ್ತಿಲ ಪರಿವಾರದ ನಾಗಾಲೋಟ ಮುಂದುವರಿದಿದೆ. ಎರಡು ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪರಿವಾರ ಬಿಜೆಪಿಗೆ ಮತ್ತೆ ಠಕ್ಕರ್ ನೀಡಿದೆ.

ಮಂಗಳೂರು, ಜುಲೈ 26: ಪುತ್ತೂರಿನಲ್ಲಿ ಬಿಜೆಪಿ ವಿರುದ್ಧದ ಪುತ್ತಿಲ ಪರಿವಾರದ ನಾಗಾಲೋಟ ಮುಂದುವರಿದಿದೆ. ಎರಡು ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪರಿವಾರ ಬಿಜೆಪಿಗೆ ಮತ್ತೆ ಠಕ್ಕರ್ ನೀಡಿದೆ. ಪುತ್ತೂರಿನಲ್ಲಿ ಮತ್ತೆ ಬಿಜೆಪಿಯನ್ನ ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ ಪುತ್ತಿಲ ಪರಿವಾರ ಒಂದು ಸ್ಥಾನದಲ್ಲಿ ಗೆದ್ದು ಬೀಗಿದೆ.‌

ಎರಡು ಸ್ಥಾನಗಳಿಗೆ ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ಪುತ್ತೂರಿನ ನಿಡ್ಪಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ರೈ ನೆಲ್ಲಿಕಟ್ಟೆ ಗೆಲುವು ಕಂಡರೆ, ಆರ್ಯಾಪು ಕ್ಷೇತ್ರದಲ್ಲಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದಾರೆ. ಎರಡು ಗ್ರಾಪಂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 

ಆರ್ಯಾಪು ಕ್ಷೇತ್ರದಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಪಡೆದು ನಿಕಟ ಸ್ಪರ್ಧಿ ಕಾಂಗ್ರೆಸಿನ ಅಭ್ಯರ್ಥಿ ಪುರುಷೋತ್ತಮ ಪ್ರಭು(353) ಅವರನ್ನು 149 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ ಭಂಡಾರಿ 140 ಮತಗಳನ್ನಷ್ಟೆ ಪಡೆದಿದ್ದಾರೆ. ಇಲ್ಲಿ ಗೆದ್ದ ಪುತ್ತಿಲ ಪರಿವಾರದ ಅಭ್ಯರ್ಥಿ ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ಕೇಸರಿ ಕುರ್ತಾ ತೊಟ್ಟು ಬೆಂಬಲಿಗರ ಜೊತೆ ವಿಜಯೋತ್ಸವ ಆಚರಿಸಿದ್ದಾರೆ. ನಿಡ್ಪಳ್ಳಿ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸತೀಶ್ ರೈ 235 ಮತಗಳನ್ನು ಪಡೆದಿದ್ದು ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ ರೈ(208) ವಿರುದ್ಧ 27 ಮತಗಳಿಂದ ಜಯ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 85 ಮತ ಗಳಿಸಿದ್ದಾರೆ.

ಎರಡು ಕಡೆಯೂ ರಾಷ್ಟ್ರೀಯ ಪಕ್ಷ ಬಿಜೆಪಿ ಮುಗ್ಗರಿಸಿದ್ದು ಅಸೆಂಬ್ಲಿ ಚುನಾವಣೆ ರೀತಿಯಲ್ಲೇ ಪುತ್ತಿಲ ಬೆಂಬಲಿಗರು ತಮ್ಮವರ ವಿರುದ್ಧವೇ ತೊಡೆ ತಟ್ಟಿ ಗೆದ್ದು ಬೀಗಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ಹೋಗಿರುವುದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ರಾಷ್ಟ್ರೀಯ ಪಕ್ಷದ ಪಾಲಿಗೆ ಮತ್ತೊಮ್ಮೆ ತೀವ್ರ ಮುಖಭಂಗ ಆದಂತಾಗಿದೆ. 

ಗ್ರಾಪಂ ಗೆಲುವಿನ ಬಗ್ಗೆ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಪ್ರತಿಕ್ರಿಯೆ ನೀಡಿದ್ದು ನಮ್ಮ ಸ್ಪರ್ಧೆ ಧರ್ಮ ಹಾಗೂ ಹಿಂದುತ್ವದ ಪ್ರತಿಪಾದನೆಯ ಯೋಚನೆಯಡಿಯಲ್ಲಿ ಮಾತ್ರ. ಯಾವುದೇ ಪಕ್ಷದ ವಿರುದ್ಧ ಅಲ್ಲ. ಆ ಕುರಿತಾಗಿ ನಾವು ಹೇಳಿಕೆ ನೀಡುವುದೂ ಇಲ್ಲ. ಕಾರ್ಯಕರ್ತರ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಯಕರ್ತನ ಭಾವನೆಗಳಿಗೆ ಜನಪ್ರತಿನಿಧಿಗಳು ಬೆಲೆ ಕೊಡಬೇಕು.  ನಮ್ಮ ಯೋಚನೆ ಮೋದಿ ಮತ್ತು ಯೋಗಿ ಮಾದರಿಯ ಆಡಳಿತ ಕರ್ನಾಟಕದಲ್ಲಿ ಇರಬೇಕು ಎನ್ನುವುದು. ಮತದಾರ ಯಾವುದರ ಪರ ಇದ್ದಾರೆ ಅನ್ನೋದು ಈ ಚುನಾವಣೆಯಲ್ಲಿ ಗೊತ್ತಾಗಿದೆ. ಕಾರ್ಯಕರ್ತರ, ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರ ಭಾವನೆಗಳಿಗೆ ತಕ್ಕಂತೆ ಸಂಘಟನೆ ಬಲಪಡಿಸುತ್ತೇವೆ. ರಾಜ್ಯ‌ ಮಟ್ಟಕ್ಕೆ ಬೇಕಾದರೆ ವಿಸ್ತರಣೆ ಮಾಡುವುದಕ್ಕೂ ತಯಾರಿ ಇದ್ದೇವೆ ಎಂದು ತಿಳಿಸಿದ್ದಾರೆ. ‌

Puttur Arun Puthila team bags Panchyath elections in two places against BJP, BJP in third place. Arun Puthila is about to contest for MP elections as Independant candidate.