ಎಂಆರ್ ಪಿಎಲ್ ಮಾಲಿನ್ಯ ಸೋರಿಕೆ ; ಕುತ್ತೆತ್ತೂರು ಆಸುಪಾಸಿನಲ್ಲಿ ಮತ್ತೆ ಸತ್ತು ಬಿದ್ದ ಮೀನುಗಳು, ಹಲವು ಜನರು ಅಸ್ವಸ್ಥ, ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಪರಿಸರ ಅಧಿಕಾರಿಗಳ ಪರಿಶೀಲನೆ ನಾಟಕ ! 

26-07-23 10:06 pm       Mangalore Correspondent   ಕರಾವಳಿ

ಪ್ರತಿ ಬಾರಿಯಂತೆ ಎಂಆರ್ ಪಿಎಲ್ ಆಸುಪಾಸಿನಲ್ಲಿ ಕೈಗಾರಿಕೆ ತ್ಯಾಜ್ಯದ ಮಾಲಿನ್ಯ ಸ್ಥಳೀಯ ತೋಡುಗಳಲ್ಲಿ ಹರಿದು ನದಿ ಸೇರುತ್ತಿದೆ. ಸುರತ್ಕಲ್ ಸಮೀಪದ ಕುತ್ತೆತ್ತೂರು, ಆತ್ರುಕೋಡಿ ಭಾಗದಲ್ಲಿ ಮಾಲಿನ್ಯ ಮಳೆನೀರಿಗೆ ಸೇರುತ್ತಿದ್ದು, ಸ್ಥಳೀಯ ತೋಡುಗಳಲ್ಲಿ ನೀರು ನೊರೆ ಮಿಶ್ರಿತವಾಗಿರುವುದು ಎದ್ದು ಕಾಣುತ್ತಿದೆ.

ಮಂಗಳೂರು, ಜುಲೈ 26: ಪ್ರತಿ ಬಾರಿಯಂತೆ ಎಂಆರ್ ಪಿಎಲ್ ಆಸುಪಾಸಿನಲ್ಲಿ ಕೈಗಾರಿಕೆ ತ್ಯಾಜ್ಯದ ಮಾಲಿನ್ಯ ಸ್ಥಳೀಯ ತೋಡುಗಳಲ್ಲಿ ಹರಿದು ನದಿ ಸೇರುತ್ತಿದೆ. ಸುರತ್ಕಲ್ ಸಮೀಪದ ಕುತ್ತೆತ್ತೂರು, ಆತ್ರುಕೋಡಿ ಭಾಗದಲ್ಲಿ ಮಾಲಿನ್ಯ ಮಳೆನೀರಿಗೆ ಸೇರುತ್ತಿದ್ದು, ಸ್ಥಳೀಯ ತೋಡುಗಳಲ್ಲಿ ನೀರು ನೊರೆ ಮಿಶ್ರಿತವಾಗಿರುವುದು ಎದ್ದು ಕಾಣುತ್ತಿದೆ. ಮಾಲಿನ್ಯದ ಪರಿಣಾಮ ಹಲವರು ಅಸ್ವಸ್ಥಗೊಂಡಿದ್ದಾರೆ.‌ 

ಅಪಾಯಕಾರಿ ಮಾಲಿನ್ಯ ಸೇರುತ್ತಿರುವುದರಿಂದ ತೋಡು, ನದಿಗಳಲ್ಲಿ ಮೀನುಗಳು ಸತ್ತು ಬಿದ್ದಿವೆ. ಅಲ್ಲದೆ, ಕುತ್ತೆತ್ತೂರು ಆಸುಪಾಸಿನ ಕೃಷಿ ಭೂಮಿಯೂ ಮಲಿನಗೊಂಡಿದೆ. ಕೃಷಿ ಗದ್ದೆಗಳಲ್ಲಿಯೂ ಮೀನುಗಳು ಸತ್ತು ತೇಲುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ, ಎಂಆರ್ ಪಿಎಲ್ ಘಟಕದ ಒಳಗಿರುವ ತ್ಯಾಜ್ಯ ಸಂಸ್ಕರಣಾ ಘಟಕ ಮಳೆಗಾಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಂಆರ್ ಪಿಎಲ್ ಸ್ಥಾವರ ಇರುವ ಕಳವಾರು, ಪೆರ್ಮುದೆ ಭಾಗ ಹಿಂದೆ ಅತ್ಯಂತ ಫಲಭರಿತ ಮತ್ತು ಅತ್ಯಂತ ನೀರಿನ ಒರತೆ ಇರುವ ಪ್ರದೇಶ. ಹೀಗಾಗಿ ಮಳೆಗಾಲದಲ್ಲಿ ನೀರು ಉಕ್ಕಿ ಬರುತ್ತಿದ್ದು, ಅದರ ಜೊತೆಗೆ ಕೈಗಾರಿಕೆಯ ತ್ಯಾಜ್ಯವನ್ನೂ ಹೊರಗೆ ಬಿಡಲಾಗುತ್ತಿದೆಯಾ ಎನ್ನುವ ಸಂಶಯ ಉಂಟಾಗಿದೆ.

ಸ್ಥಳೀಯ ತೋಡು, ನದಿಗಳ ಮೂಲಕ ನೀರು ಸೇರುವ ತ್ಯಾಜ್ಯ ನೇರವಾಗಿ ಸಮುದ್ರ ಪಾಲಾಗುತ್ತಿದೆ. ಇದರಿಂದ ಸಮುದ್ರ ಮಾಲಿನ್ಯವೂ ಆಗುತ್ತಿದೆ. ಈ ಬಗ್ಗೆ ಸ್ಥಳೀಯರು ಪ್ರತಿ ಬಾರಿ ಎಂಆರ್ ಪಿಎಲ್ ಘಟಕದ ಅಧಿಕಾರಿಗಳಿಗೆ ಮನವಿ ಕೊಟ್ಟು ಗಂಭೀರ ಎಚ್ಚರಿಕೆ ನೀಡಿದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಸರ ನಿಯಂತ್ರಣ ಅಧಿಕಾರಿಗಳು ಕೂಡ ನಾಮ್ಕೇವಾಸ್ತೆ ಸ್ಥಳಕ್ಕೆ ಭೇಟಿ ಕೊಟ್ಟು ಜನರ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಗುರುವಾರ ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕುತ್ತೆತ್ತೂರು ಆಸುಪಾಸಿನಲ್ಲಿ ಪರಿಸರ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯ ನಾಟಕವಾಡಿದ್ದಾರೆ. ಸ್ಥಳೀಯ ನಿವಾಸಿಗಳಲ್ಲಿ ಆರೋಗ್ಯದಲ್ಲಿ ಏರು ಪೇರು ಉಂಟಾಗಿದ್ದು ವೈದ್ಯರು ಬಂದು ತಪಾಸಣೆ ನಡೆಸಿದ್ದಾರೆ.‌

ಎಂಆರ್ ಪಿಎಲ್ ಘಟಕದ ತ್ಯಾಜ್ಯವನ್ನು ಮಳೆಗಾಲ ಹೊರತುಪಡಿಸಿ ಬೇರೆ ಕಡೆಗೆ ಒಯ್ದು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ಪ್ರತಿ ಬಾರಿ ನೀರಿಗೆ ಮಿಶ್ರಣಗೊಂಡು ಜಲಮಾಲಿನ್ಯ ಮಾಡುತ್ತದೆ. ಘಟಕದ ಒಳಗೆ ತ್ಯಾಜ್ಯ ಸಂಸ್ಕರಣೆ ಘಟಕ ಸರಿಯಾಗಿಲ್ಲವೋ ಅಥವಾ ಹಾಗೆಯೇ ಹೊರಗೆ ಬಿಡಲಾಗುತ್ತದೋ ಗೊತ್ತಿಲ್ಲ. ಮಳೆಗಾಲದಲ್ಲಿ ಸ್ಥಳೀಯ ತೋಡುಗಳಲ್ಲಿ ಮೀನುಗಳಿರುವುದರಿಂದ ತ್ಯಾಜ್ಯ ಹೊರಗೆ ಬಂದ ಕೂಡಲೇ ಸಾಯುತ್ತವೆ. ಮೀನು ಸತ್ತು ಬಿದ್ದುದನ್ನು ನೋಡಲು ಅಲ್ಲಿಗೆ ತೆರಳಿದವರಿಗೆ, ಕೃಷಿ ಗದ್ದೆಯಲ್ಲಿ ಶೇಖರಗೊಂಡ ನೀರಿನಲ್ಲಿ ಕಾಲು ಇಟ್ಟವರಿಗೆ ಕಾಲು ತುರಿಕೆಯಾಗುತ್ತದೆ. ಈ ಬಾರಿ ಮಾಲಿನ್ಯದ ಪರಿಣಾಮ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಪಡೆದಿದ್ದಾರೆ. ಘಟನೆ ಬಗ್ಗೆ ಡಿವೈಎಫ್ಐ ಕಾರ್ಯಕರ್ತರು ಹಲವು ಬಾರಿ ಪ್ರತಿಭಟನೆ ನಡೆಸಿದರೂ, ಅಧಿಕಾರಸ್ಥರು ಕಾಂಗ್ರೆಸ್- ಬಿಜೆಪಿ ಆದಿಯಾಗಿ ನಿರ್ಲಕ್ಷ್ಯ ವಹಿಸುವುದು ಇಲ್ಲಿನ ದುರವಸ್ಥೆಗೆ ಕನ್ನಡಿ ಹಿಡಿಯುತ್ತದೆ.

MRPL pollution, Kuthethur Colony witness huge dead fish, resident's fall sick, officer reach spot.