Mangalore News: ಆಟಿ ತಿಂಗಳು ಪೂರ್ತಿ ಬಿಸಿಲು ; 20 ವರ್ಷಗಳಲ್ಲೇ ಮೊದಲು, ಸೊರಗಿದ ನದಿಗಳು, ಒಣಗಿದ ಗದ್ದೆಗಳು, ಕರಾವಳಿಗೆ ಬರಗಾಲದ ಮುನ್ಸೂಚನೆ ! 

19-08-23 03:50 pm       Mangalore Correspondent   ಕರಾವಳಿ

‘’ಆಟಿದ ದೊಂಬುಗು ಆನೆದ ಬೆರಿ ಪುಡಾವು..’’ (ಆಷಾಢ ತಿಂಗಳ ಬಿಸಿಲಿಗೆ ಆನೆಯ ಬೆನ್ನಿನ ಚರ್ಮವೂ ಒಡೆದು ಹೋದೀತು) ಹೀಗಂತ ತುಳುವಿನಲ್ಲಿ ಗಾದೆ ಇದೆ.

ಮಂಗಳೂರು, ಆಗಸ್ಟ್ 18: ‘’ಆಟಿದ ದೊಂಬುಗು ಆನೆದ ಬೆರಿ ಪುಡಾವು..’’ (ಆಷಾಢ ತಿಂಗಳ ಬಿಸಿಲಿಗೆ ಆನೆಯ ಬೆನ್ನಿನ ಚರ್ಮವೂ ಒಡೆದು ಹೋದೀತು) ಹೀಗಂತ ತುಳುವಿನಲ್ಲಿ ಗಾದೆ ಇದೆ. ಹಿಂದಿನ ಕಾಲದಿಂದಲೂ ಜೂನ್, ಜುಲೈ ತಿಂಗಳಲ್ಲಿ ಜೋರು ಮಳೆಯಾದ ಬಳಿಕ ತಿಳಿಯಾದ ಆಗಸದಲ್ಲಿ ಆಗಸ್ಟ್ ಅಂದರೆ, ತುಳುವಿನ ಆಟಿ ತಿಂಗಳಲ್ಲಿ ಕೆಲವೊಮ್ಮೆ ಜೋರು ಬಿಸಿಲು ಬರುವುದಿತ್ತು. ಹೀಗೆ ಬಿಸಿಲು ಬಂದರೆ, ಸೂರ್ಯ ಕಿರಣಗಳು ಭಾರೀ ಪ್ರಖರವಾಗಿರುತ್ತಿದ್ದವು. ಇದೇ ಕಾರಣಕ್ಕೆ ಆಟಿ ತಿಂಗಳಲ್ಲಿ ಭಾರೀ ಮಳೆಯ ನಡುವೆಯೂ ಒಂದೆರಡು ಬಿಸಿಲು ಬಂದರೂ, ಅದರ ಬಿಸಿ ತಾಳಲಾರದೆ ಈ ಗಾದೆ ಹುಟ್ಟಿದ್ದಿರಬೇಕು.  

ಆದರೆ ಈ ಬಾರಿಯದ್ದು ಮಾತ್ರ ಆಟಿ ತಿಂಗಳಲ್ಲಿ ಬಿಸಿಲ ಝಳ ಹಿಂದೆಂದೂ ಕಂಡರಿಯದ ರೀತಿಯಿತ್ತು. ಕಳೆದ ಜುಲೈ ಮಧ್ಯದಿಂದಲೇ ಬಿಸಿಲು ಶುರುವಾಗಿತ್ತು. ಈ ತಿಂಗಳ ಸಂಕ್ರಮಣ ಅಂದರೆ, ಆಟಿ ತಿಂಗಳು ಪೂರ್ತಿ ಕೊನೆಯಾಗುವ ವರೆಗೂ ಬಿಸಿಲ ಝಳಕ್ಕೆ ಕರಾವಳಿ ಮತ್ತು ಮಲೆನಾಡು ಅಕ್ಷರಶಃ ಕರಟಿ ಹೋಗಿದೆ. ಇತ್ತೀಚಿನ 15-20 ವರ್ಷಗಳಲ್ಲಿ ಆಟಿ ತಿಂಗಳಲ್ಲಿ ಈ ಪರಿಯ ಬಿಸಿಲು ಕಂಡಿದ್ದೇ ಇಲ್ಲ ಎನ್ನುತ್ತಾರೆ ಹಿರಿಯರು. ಈ ಬಾರಿ ಜೂನ್ ತಿಂಗಳಲ್ಲಿ ಮಳೆಯೇ ಇರಲಿಲ್ಲ. ಜುಲೈ ಆರಂಭದಲ್ಲಿ ಎರಡು ವಾರ ಮಳೆಯಾಗಿದ್ದು ಬಿಟ್ಟರೆ, ಆನಂತರ ಮಳೆ ಕಾಣೆಯಾಗಿತ್ತು. ಒಟ್ಟಾರೆ ಈ ಸಲದ ಮಳೆಗಾಲವೇ ವಿಚಿತ್ರ ಅನ್ನುವಂತಿದೆ.

ಆಟಿ ತಿಂಗಳ ಬಿಸಿಲಿನ ತಾಪ ಎಷ್ಟಿತ್ತೆಂದರೆ, ನದಿಯಲ್ಲೂ ನೀರಿನ ಪ್ರಮಾಣ ವಿಪರೀತ ಕಡಿಮೆಯಾಗಿದೆ. ಮಳೆ ಇಲ್ಲದೆ ಕರಾವಳಿಯ ಗದ್ದೆಗಳೆಲ್ಲ ಒಣಗಿ ಹೋಗಿವೆ. ಹೆಚ್ಚಿನ ಕಡೆ ಮಳೆಯನ್ನೇ ಆಶ್ರಯಿಸಿ ಮಾಡುವ ಕೃಷಿ, ಗದ್ದೆಗಳು ನೀರಿಲ್ಲದೆ ಸೊರಗಿದ್ದು, ರೈತ ತಲೆಗೆ ಕೈಹೊತ್ತು ಕಂಗಾಲು ಆಗಿದ್ದಾನೆ. ಕೆಲವು ಕಡೆ ಗುಡ್ಡದಿಂದ, ತೋಡುಗಳಲ್ಲಿ ಹರಿದು ಬರುವ ನೀರನ್ನು ಅಡ್ಡಗಟ್ಟಿ ಕೃಷಿಗೆ ಬಳಸುತ್ತಾರೆ. ಆದರೆ ಆಟಿ ತಿಂಗಳ ಬಿಸಿಲಿನ ಝಳಕ್ಕೆ ಹೊಳೆ, ತೋಡಿನಲ್ಲೂ ನೀರಿನ ಒರತೆ ಕಡಿಮೆಯಾಗಿದ್ದು ಭತ್ತದ ಗದ್ದೆಗಳು ಒಣಗಲಾರಂಭಿಸಿದೆ. ಹೆಚ್ಚಿನ ಕಡೆ ಹೊಳೆಗಳಿಂದ ಪಂಪ್ ನಲ್ಲಿ ನೀರೆತ್ತ ಗದ್ದೆಗೆ ಹಾಯಿಸುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಪಂಪ್ ಬಳಸಿ ನೀರು ಹಾಯಿಸುವ ಸ್ಥಿತಿ ಬಂದಿದ್ದು ಇದೇ ಮೊದಲು ಅನ್ನೋ ಮಾತನ್ನು ಜನರು ಹೇಳುತ್ತಿದ್ದಾರೆ.

ಮೊನ್ನೆ ಜುಲೈ ಆರಂಭದಲ್ಲಿ ಉಪ್ಪಿನಂಗಡಿ, ಬಂಟ್ವಾಳದಲ್ಲಿ ಉಕ್ಕಿ ಹರಿದಿದ್ದ ನೇತ್ರಾವತಿ ನದಿಯಲ್ಲಿ ನೀರು ಪಾತಾಳಕ್ಕೆ ಹೋಗಿದೆ. ಈಗಲೇ ನದಿ ನೀರು ಬರಿದಾಗಿದ್ದು ನೋಡಿದರೆ, ಡಿಸೆಂಬರ್ ಹೊತ್ತಿಗೆ ಪೂರ್ತಿ ನದಿ ಖಾಲಿಯಾಗುವ ಸಾಧ್ಯತೆಯಿದೆ. ಮಳೆ ಬಾರದೇ ಇದ್ದರೆ, ಕರಾವಳಿಯಲ್ಲಿ ಕೃಷಿ ಬಿಡಿ ಬದುಕುವುದೇ ದುಸ್ತರ ಅನ್ನುವ ಸ್ಥಿತಿ ಬರಲಿದೆ. ಈ ಬಾರಿ ಪಶ್ಚಿಮ ಘಟ್ಟದ ಭಾಗದಲ್ಲಿ ತೀವ್ರವಾಗಿ ಮಳೆ ಇಳಿಮುಖ ಆಗಿರುವುದು ನದಿಗಳ ಸಹಜ ಒರತೆಗೇ ಪೆಟ್ಟು ಕೊಟ್ಟಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗಿನಲ್ಲೂ ಮಳೆ ಕಡಿಮೆಯಾಗಿದ್ದು, ಯಾವತ್ತೂ ಸೋನೆ ಆಗಿರಬೇಕಿದ್ದ ಜಾಗದಲ್ಲಿ ವಾತಾವರಣ ಶುಷ್ಕವಾಗುತ್ತಿರುವುದು ವಾತಾವರಣದಲ್ಲಿ ಭಾರೀ ಬದಲಾವಣೆ ಆಗಿರುವುದನ್ನು ಎದ್ದು ತೋರಿಸಿದೆ.

ಎತ್ತಿನಹೊಳೆ ಯೋಜನೆಯ ಶಾಪ !

ಎತ್ತಿನಹೊಳೆ ಯೋಜನೆಯ ಹೆಸರಲ್ಲಿ ರಾಜಕಾರಣಿಗಳು ಪಶ್ಚಿಮ ಘಟ್ಟದ ಕಾಡುಗಳನ್ನು ಕಡಿದು ಬೆಟ್ಟವನ್ನೇ ಅಗೆದು ಹಾಕಿದ್ದರ ಪರಿಣಾಮ ಘಟ್ಟದ ಭಾಗದಲ್ಲಿ ಮಳೆಯೇ ಕಾಣೆಯಾಗಿದೆ. ಇದರ ಭೀಕರ ಪರಿಣಾಮ ಢಾಳಾಗಿ ಕಾಣಿಸುತ್ತಿದ್ದರೂ, ಆಳುವ ಸರ್ಕಾರಗಳು ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೇ ಇರುವುದು ಶೋಚನೀಯ. ಕಳೆದ 2-3 ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಜೀವ ಜಲಕ್ಕೆ ಕೊರತೆ ಆಗಿರಲಿಲ್ಲ. ಈ ಬಾರಿಯೂ ಆಗಸ್ಟ್ ಕೊನೆಗೆ ಮಳೆ ಆಗುತ್ತೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಮಳೆ ಆಗದೇ ಇದ್ದರೆ ಈ ಸಲ ಕರಾವಳಿ ಬಿಸಿಲ ಧಗೆಗೆ ಕರಟಿ ಹೋಗುವುದು ಖಚಿತ.

Famine sings in Mangalore, first time in the last 20 years, rivers and plants dried up even amid rains.