Exclusive Video: ಉಳ್ಳಾಲ ; ಹಾಡಹಗಲೇ ಮರಳು ದಂಧೆ ! ಲಗಾಮಿಲ್ಲದ ಮಾಫಿಯಾ ಹಿಂದೆ ಯಾರಿದ್ದಾರೆ ?

11-11-20 04:15 pm       Mangalore Correspondent - Special Report   ಕರಾವಳಿ

ಉಳ್ಳಾಲದಲ್ಲಿ ಮರಳು ಮಾಫಿಯಾ ದರ್ಬಾರಿನ ಮುಂದೆ ನಮ್ಮ ಸರಕಾರದ ಯಾವುದೇ ಕಾನೂನು ಕಟ್ಟಳೆಗಳಿಗೆ ಬೆಲೆಯೇ ಇಲ್ಲದಾಗಿದೆ.

ಉಳ್ಳಾಲ, ನವೆಂಬರ್ 11: ಕಡಲ ತೀರದಿಂದ ಮರಳು ತೆಗೆಯುವಂತಿಲ್ಲ. ಅಷ್ಟೇ ಅಲ್ಲ, ಸಿಆರ್ ಝೆಡ್ ವ್ಯಾಪ್ತಿಯ ನದಿಗಳಲ್ಲೂ ಮರಳು ತೆಗೆಯುವಂತಿಲ್ಲ. ಆದರೆ, ಉಳ್ಳಾಲದಲ್ಲಿ ಇವ್ಯಾವ ನಿಯಮಗಳೂ ಲೆಕ್ಕಕ್ಕೇ ಬರಲ್ಲ. ಹೌದು.. ಉಳ್ಳಾಲದಲ್ಲಿ ಮರಳು ಮಾಫಿಯಾ ದರ್ಬಾರಿನ ಮುಂದೆ ನಮ್ಮ ಸರಕಾರದ ಯಾವುದೇ ಕಾನೂನು ಕಟ್ಟಳೆಗಳಿಗೆ ಬೆಲೆಯೇ ಇಲ್ಲದಾಗಿದೆ. ಉಳ್ಳಾಲದ ಸಮುದ್ರ ತೀರದಿಂದ ಹಾಡಹಗಲೇ ರಾಜಾರೋಷವಾಗಿ ಮರಳನ್ನು ಎತ್ತಿ ರಾಶಿ ಹಾಕಿ ಒಯ್ಯುತ್ತಿರುವುದು ಬೆಳಕಿಗೆ ಬಂದಿದೆ.    

ಉಳ್ಳಾಲ ಪೊಲೀಸರು ಎಷ್ಟು ಸಮರ್ಥರು ಅಂದ್ರೆ, ಈ ಅಕ್ರಮ ನಡೆಯುತ್ತಿರೋದೇ ಠಾಣೆಯ ಕೂಗಳತೆ ದೂರದಲ್ಲಿ.  ಕೋಟೆಪುರ, ಕೋಡಿ ಕಡಲತೀರದಲ್ಲಿ ನಿತ್ಯವೂ ಹಗಲಿನಲ್ಲಿ ಮರಳನ್ನು ಮಾನವ ಶ್ರಮದಿಂದ ಎತ್ತಿ ರಾಶಿ ಹಾಕುತ್ತಿದ್ದು ಅದನ್ನು ರಾತ್ರಿಯಾಗುತ್ತಲೇ ಟಿಪ್ಪರ್ ಲಾರಿಗಳಿಗೆ ತುಂಬಿಸಿ ರವಾನಿಸಲಾಗುತ್ತಿದೆ. ಇಂಥ ಅಕ್ರಮ ಅದೆಷ್ಟೋ ದಿನಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಈ ಹಿಂದೆಯೇ ಹೆಡ್ ಲೈನ್ ಕರ್ನಾಟಕ ಸುದ್ದಿ ಬಿತ್ತರಿಸಿತ್ತು. ಆದರೆ, ಈ ಬಾರಿ ಮರಳನ್ನು ಮಾನವ ಶ್ರಮದಲ್ಲಿ ರಾಶಿ ಹಾಕುತ್ತಿರುವುದು, ತೀರದ ಉದ್ದಕ್ಕೂ ಟನ್ ಗಟ್ಟಲೆ ಮರಳನ್ನು ರಾಶಿ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಉಳ್ಳಾಲ ಠಾಣೆಯಿಂದ ಬಲಕ್ಕೆ ಕೋಟೆಪುರಕ್ಕೆ ತೆರಳುವ ರಸ್ತೆಯಲ್ಲಿ ಕೊನೆಯ ವರೆಗೆ ಸಾಗಿದರೆ ಈ ಚಿತ್ರಣ ಮಾಮೂಲಿ ಎನ್ನುತ್ತಾರೆ, ಅಲ್ಲಿನ ಸ್ಥಳೀಯರು. ದಿನವೂ ಅಲ್ಲಿಂದ ನೂರಾರು ಟಿಪ್ಪರ್ ಲಾರಿಗಳು ಮರಳನ್ನು ಎತ್ತಿ ಒಯ್ಯುತ್ತಿದ್ದು ಈ ಬಗ್ಗೆ ಪೊಲೀಸರನ್ನು ಹಿಡಿದು, ಗಣಿ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೂ ಗೊತ್ತು ಎನ್ನುತ್ತಾರೆ ಅಲ್ಲಿನ ಜನ.

ಉಳ್ಳಾಲ ಕೋಟೆಪುರ ಮತ್ತು ಕೋಡಿಯ ಫಿಶ್ ಮಿಲ್ ಫ್ಯಾಕ್ಟರಿ ಸಮೀಪದ ಕಡಲ ತೀರದಲ್ಲಿ ನಿತ್ಯವೂ ಮರಳು ಕಳ್ಳತನ ನಡೆಸಲಾಗುತ್ತಿದ್ದು, ಇದನ್ನು ತಲಪಾಡಿ ದೇವಿಪುರ ಗಡಿ ಪ್ರದೇಶಗಳಿಂದ ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದೆ. ಇದಕ್ಕೆ ಉಳ್ಳಾಲದ ಪೊಲೀಸರೇ ಬೆಂಗಾವಲಾಗಿದ್ದಾರೆಯೇ ಎನ್ನುವ ಅನುಮಾನವನ್ನು ಅಲ್ಲಿನ ಜನ ವ್ಯಕ್ತಪಡಿಸುತ್ತಾರೆ.

ಉಳ್ಳಾಲ ಠಾಣೆಗೆ ನೂತನ ಇನ್ಸ್ ಪೆಕ್ಟರ್ ಆಗಿ ತಿಂಗಳ ಹಿಂದೆ, ಸಂದೀಪ್ ಎಂಬವರು ಆಗಮಿಸಿದ್ದರು. ಆದರೆ, ಇನ್ಸ್ ಪೆಕ್ಟರ್ ಯಾರೇ ಇರಲಿ, ಠಾಣೆಯಲ್ಲಿ ಅನೇಕ ವರ್ಷಗಳಿಂದ ಬೇರೂರಿರುವ ಹಿರಿಯ ಪೊಲೀಸರೇ ಈ ಧಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಹಿರಿಯಧಿಕಾರಿಗಳ ಕಣ್ಣು ತಪ್ಪಿಸಿ ಮರಳು ಲಾರಿಗಳನ್ನು ಒಳಗಿನ ರಸ್ತೆಗಳಲ್ಲಿ ಗುರಿಮುಟ್ಟಿಸುವ ಕೆಲಸವನ್ನು ಈ ಹಳೇ ಬೇರುಗಳೇ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಕ್ಟೋಬರ್ ಮರಳು ಎಲ್ಲಿ ಹೋಯಿತು ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಈ ಬಾರಿ ದೊಡ್ಡ ಮಟ್ಟಿನ ಮರಳಿನ ಅಭಾವ ಉಂಟಾಗಿದೆ. ಸಂಸದ ನಳಿನ್ ಕುಮಾರ್ ಒಮ್ಮೆ ಲೋಡ್ ಮರಳಿಗೆ 2 ಸಾವಿರ, ಆಮೇಲೆ ಯೂನಿಟಿಗೆ ಆರು ಸಾವಿರ ಹೀಗೆ ಬೊಗಳೆ ಬಿಟ್ಟಿದ್ದೆಲ್ಲವನ್ನೂ ಜನ ಕೇಳಿಯಾಗಿದೆ. ಅಕ್ಟೋಬರ್ ನಲ್ಲಿ ಮರಳು ಸಿಗುತ್ತೆ ಎಂದು ಹೇಳಿದ್ದೂ ಹುಸಿಯಾಗಿದೆ. ಈಗ ಮರಳು ಲಭ್ಯವಿಲ್ಲದೆ ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿಗಳೇ ನಿಂತು ಹೋಗಿವೆ. ಆದರೆ, ಅಕ್ರಮವಾಗಿ ಮರಳನ್ನು ತಂದು ಹಾಕುವ ಕೆಲಸವಂತೂ ಜಿಲ್ಲೆಯಾದ್ಯಂತ ಸದ್ದಿಲ್ಲದೆ ನಡೆಯುತ್ತಿದೆ. ಈ ನಡುವೆ, ಕೇರಳದಲ್ಲಿ ಮರಳಿಗೆ ಭಾರೀ ದರ ಆಗಿರುವುದರಿಂದ ಅಲ್ಲಿಗೂ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ರಾತ್ರೋರಾತ್ರಿ ಮಂಗಳೂರಿನ ಮೋರ್ಗನ್ಸ್ ಗೇಟ್ ರಸ್ತೆಯಲ್ಲೇ ನೂರಾರು ಮರಳಿನ ಲಾರಿಗಳು ಸಾಗುತ್ತಿರುವುದನ್ನು ಅಲ್ಲಿನ ಜನ ಹೇಳುತ್ತಾರೆ. ಆದರೆ, ಇವೆಲ್ಲವೂ ಅಕ್ರಮವೇ ಆಗಿದ್ದರೂ ಅದಕ್ಕೆ ಕಡಿವಾಣ ಹಾಕೋದಂತೂ ಜಿಲ್ಲಾಧಿಕಾರಿಗೂ ಸಾಧ್ಯವಾಗುತ್ತಿಲ್ಲ.

ಈಗ, ಉಳ್ಳಾಲ ಕಡಲ ತೀರದಲ್ಲಿ ಕಡಲ ಒಡಲನ್ನೇ ಬಗೆದು ದಂಧೆ ನಡೆಸಲಾಗುತ್ತಿದೆ. ಪ್ರಭಾವಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ. ಉಳ್ಳಾಲದ ಶಾಸಕ ಯು.ಟಿ.ಖಾದರ್, ಪ್ರತಿ ಬಾರಿ ಸುದ್ದಿಗೋಷ್ಠಿಯಲ್ಲಿ ಮರಳಿನ ವಿಚಾರದಲ್ಲಿ ಬಿಜೆಪಿ ಆಡಳಿತವನ್ನು ದೂರುತ್ತಾರೆ. ಆದರೆ, ತಮ್ಮ ಮೂಗಿನ ನೇರಕ್ಕೇ ಇಂಥ ಅಕ್ರಮ ನಡೆಯುತ್ತಿರುವುದು ಶಾಸಕರಿಗೆ ಗೊತ್ತಿರದ ವಿಚಾರ ಏನಲ್ಲ. ಕಾಂಗ್ರೆಸ್, ಬಿಜೆಪಿಗೆ ರಾಜಕೀಯ ಬೇಕು ಅಷ್ಚೇ... ಜನರಿಗೆ ಮರಳನ್ನು ಒದಗಿಸಬೇಕೆಂಬ ದರ್ದು ಇವರಿಗೂ ಇಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಪಕ್ಷದ ನಾಯಕರ ಸನ್ಮಿತ್ರರು ಮರಳು ದಂಧೆ ನಡೆಸಿದ್ದಾರೆ. ಈಗ ಬಿಜೆಪಿ ನಾಯಕರ ಮಿತ್ರರು ಮತ್ತು ಈ ಹಿಂದೆ ನಡೆಸುತ್ತಿದ್ದ ದಂಧೆಕೋರರು ಮರಳನ್ನು ಮಾರಿ ಹಣ ಮಾಡುತ್ತಿದ್ದಾರೆ. ಆದರೆ, ಮರಳು ಉಸ್ತುವಾರಿಗಳು ಬದಲಾಗಿರಬಹುದು. ಮರಳು ದಂಧೆ ನಡೆಸುವ ಮಂದಿ ಮಾತ್ರ ಬದಲಾಗಿಲ್ಲ.

ಬುಟ್ಟಿಯಲ್ಲಿ ಮರಳನ್ನು ಮೇಲಕ್ಕೆತ್ತಿ ಟನ್ ಗಟ್ಟಲೆ ಮರಳನ್ನು ರಾಶಿ ಹಾಕಿರುವುದು ಕಂಡುಬಂದಿದೆ. ಆ ಜಾಗಕ್ಕೆ ಯಾರೇ ಅಧಿಕಾರಿ ವರ್ಗ ಆಗಲೀ, ಇತರೇ ಮಂದಿಯಾಗಲೀ ಬರದಂತೆ ತಡೆಯಲು ಸ್ಥಳದಲ್ಲಿ ಗಾಂಜಾ ವ್ಯಸನಿಗಳ ತಂಡ ಠಿಕಾಣಿ ಹೂಡಿದೆ. ಇವರು ಸ್ಥಳೀಯ ಪೊಲೀಸರು ಮತ್ತು ಮರಳು ದಂಧೆಕೋರರ ಪಾಲಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತಾರೆ. ರಾತ್ರಿ ಅಥವಾ ಮುಂಜಾನೆಯ ವೇಳೆ ಟಿಪ್ಪರ್, ಲಾರಿ, ಪಿಕ್ ಅಪ್ ವಾಹನಗಳ ಮೂಲಕ ಮರಳು ಸಾಗಿಸುವಾಗ ಈ ಗಾಂಜಾ ವ್ಯಸನಿಗಳೇ ಬೆಂಗಾವಲು ಇರುತ್ತಾರೆ. ಹೀಗಾಗಿ ಪ್ರಶ್ನೆ ಮಾಡಿದ ಯಾರೇ ಆದ್ರೂ ಅಲ್ಲಿ ಬಚಾವ್ ಆಗಿ ಬರುವುದೇ ದುರ್ಲಭ ಎನ್ನುವ ಸ್ಥಿತಿ ಅಲ್ಲಿದೆ.

Video: 

Headline Karnataka Exposes illegal Sand Mining that's carrying in Ullal near the sea shore, Mangalore. Watch the Exclusive Video shot by our Team.