ಅಶೋಕ್ ಗಸ್ತಿ ಸ್ಥಾನಕ್ಕೆ ಬಿಜೆಪಿಯಿಂದ ಮಂಗಳೂರು ಮೂಲದ ಸಂಘದ ವ್ಯಕ್ತಿ !

17-11-20 05:14 pm       Mangaluru Correspondent   ಕರಾವಳಿ

ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯನ್ನು ಫೈನಲ್ ಮಾಡಲಾಗಿದ್ದು, ಮಂಗಳೂರು ಮೂಲದ ಆರೆಸ್ಸೆಸ್ ಹಿನ್ನೆಲೆಯ ಉದ್ಯಮಿಯಾಗಿರುವ ಡಾ.ಕೆ.ನಾರಾಯಣ ಅವರನ್ನು ಆಯ್ಕೆ ಮಾಡಿದೆ.

ಬೆಂಗಳೂರು, ನವೆಂಬರ್ 17: ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯನ್ನು ಫೈನಲ್ ಮಾಡಲಾಗಿದ್ದು, ಮಂಗಳೂರು ಮೂಲದ ಆರೆಸ್ಸೆಸ್ ಹಿನ್ನೆಲೆಯ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಡಾ.ಕೆ.ನಾರಾಯಣ ಅವರನ್ನು ಆಯ್ಕೆ ಮಾಡಿದೆ.

ದೇವಾಂಗ ಸಮುದಾಯಕ್ಕೆ ಸೇರಿದ ಡಾ.ಕೆ.ನಾರಾಯಣ ಮೂಲತಃ ಮಂಗಳೂರಿನವರು. ಮಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ, 1971ರಲ್ಲಿ ಬೆಂಗಳೂರಿಗೆ ತೆರಳಿ ಪ್ರಿಂಟಿಂಗ್ ಸಂಸ್ಥೆ ಆರಂಭಿಸಿದ್ದರು. ಜಪಾನ್ ತೆರಳಿ, ಅಲ್ಲಿನ ಆಧುನಿಕ ತಂತ್ರಜ್ಞಾನದ ಪ್ರಿಂಟಿಂಗ್ ಮೆಷಿನ್ ತಂದು ಸ್ಪ್ಯಾನ್ ಪ್ರಿಂಟಿಂಗ್ ಹೆಸರಲ್ಲಿ ಬೆಂಗಳೂರಿನಲ್ಲಿ ಮುದ್ರಣಾಲಯ ಸ್ಥಾಪಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ ಮತ್ತು ಸಂಘದ ಪ್ರಮುಖರ ಜೊತೆ ನಿಕಟ ನಂಟು ಇರಿಸಿಕೊಂಡಿದ್ದ ನಾರಾಯಣ, ಮಂಗಳೂರಿನ ದಿಗಂತ ಮುದ್ರಣಾಲಯ ಸಂಸ್ಥೆ ಸೇರಿ ಹಲವು ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

1994ರಿಂದ ನಿರಂತರವಾಗಿ ಸಂಸ್ಕೃತ ಸಂಭಾಷಣ ಹೆಸರಲ್ಲಿ ಸಂಸ್ಕೃತ ಭಾಷೆಯಲ್ಲಿ ಯಾವುದೇ ಜಾಹೀರಾತು ಇಲ್ಲದೆ ಮಾಸಿಕ ಹೊರತರುತ್ತಿದ್ದಾರೆ. ಪ್ರತಿ ತಿಂಗಳು 15 ಸಾವಿರ ಪ್ರತಿ ಪ್ರಿಂಟ್ ಆಗುತ್ತಿರುವುದಲ್ಲದೆ, 20 ರಾಷ್ಟ್ರಗಳಲ್ಲಿ ಪ್ರಸರಣ ಹೊಂದಿದೆ. 25 ವರ್ಷಗಳಿಂದ ಪ್ರಸಾರವಾಗುತ್ತಿರುವ ಏಕೈಕ ಮಾಸ ಪತ್ರಿಕೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಬಿಜೆಪಿಯಲ್ಲಿ ನೇಕಾರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿರುವ ಡಾ.ಕೆ.ನಾರಾಯಣ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಸಂಘ- ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ.  

ರಾಜ್ಯಸಭಾ ಸ್ಥಾನದ ಉಪ ಚುನಾವಣೆ ಡಿ.1ರಂದು ನಡೆಯಲಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ರಾಯಚೂರು ಮೂಲದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು. ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂರೂವರೆ ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದರು. ಕಳೆದ ಬಾರಿ ಯಾರೂ ನಿರೀಕ್ಷೆ ಮಾಡಿರದ ರೀತಿ ಬಿಜೆಪಿ ಹೈಕಮಾಂಡ್ ಅಶೋಕ್ ಗಸ್ತಿ ಹೆಸರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಿಂದಲೇ ಇನ್ನೊಬ್ಬ ಅಚ್ಚರಿಯ ವ್ಯಕ್ತಿ ಈ ಬಾರಿ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. 

Bjp issues Rajya Sabha seat to Mangalorean based Entrepreneur, Publisher Dr K Narayan.