Kochimul scam, Mangalore university: ಕೊಚಿಮುಲ್ ನೇಮಕಾತಿ ಹಗರಣ ; ಇಡಿ ತನಿಖೆ ಮಂಗಳೂರು ವಿವಿಗೂ ವಿಸ್ತರಣೆ, ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಮಾರಾಟ ಶಂಕೆ, 20-25 ಲಕ್ಷಕ್ಕೆ ಡೀಲ್, ರಾತ್ರಿಯಿಡೀ ಅಧಿಕಾರಿಗಳ ವಿಚಾರಣೆ 

19-01-24 10:29 pm       Mangalore Correspondent   ಕರಾವಳಿ

ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೊಚಿಮುಲ್) ಉದ್ಯೋಗ ನೇಮಕಾತಿಯಲ್ಲಿ ಆಗಿರುವ ಹಗರಣದ ತನಿಖೆ ಮಂಗಳೂರಿಗೂ ವಿಸ್ತರಣೆಯಾಗಿದ್ದು, ಮಂಗಳೂರು ವಿವಿಯಲ್ಲಿ ಇಡಿ ಅಧಿಕಾರಿಗಳು ದಿಢೀರ್ ಪರಿಶೀಲನೆ ಕೈಗೊಂಡಿದ್ದಾರೆ.

ಮಂಗಳೂರು, ಜ.19: ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೊಚಿಮುಲ್) ಉದ್ಯೋಗ ನೇಮಕಾತಿಯಲ್ಲಿ ಆಗಿರುವ ಹಗರಣದ ತನಿಖೆ ಮಂಗಳೂರಿಗೂ ವಿಸ್ತರಣೆಯಾಗಿದ್ದು, ಮಂಗಳೂರು ವಿವಿಯಲ್ಲಿ ಇಡಿ ಅಧಿಕಾರಿಗಳು ದಿಢೀರ್ ಪರಿಶೀಲನೆ ಕೈಗೊಂಡಿದ್ದಾರೆ. ಉದ್ಯೋಗಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಂಗಳೂರು ವಿವಿಯಲ್ಲಿ ತಯಾರಾಗಿದ್ದು, ಇಲ್ಲಿಂದಲೇ ಅಭ್ಯರ್ಥಿಗಳಿಗೆ ಲೀಕ್ ಆಗಿದೆಯೆಂಬ ಶಂಕೆ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗ್ಗಿನ ವರೆಗೂ ಪರೀಕ್ಷಾಂಗ ಕುಲಸಚಿವ ರಾಜು ಚಲ್ಲನ್ನವರ್ ಹಾಗೂ ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರನ್ನು ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮಂಗಳೂರು ವಿವಿಯ ಅಧಿಕೃತ ಮೈಲ್, ಪ್ರಮುಖ ಅಧಿಕಾರಿಗಳ ಮೊಬೈಲ್, ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವ ರಾಜು ಚಲ್ಲನ್ನವರ್ ಹಾಲು ಒಕ್ಕೂಟದ 81 ಹುದ್ದೆಗಳಿಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಹೊಣೆ ವಹಿಸಿಕೊಂಡಿದ್ದರು. ಕಳೆದ ನವೆಂಬರ್ 5ರಂದು ಪರೀಕ್ಷೆ ನಡೆಯುವುದಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಮಾರಾಟ ಆಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.

ಕೊಚಿಮುಲ್ ನೇಮಕಾತಿಯಲ್ಲಿ ಭಾರೀ ಅವ್ಯವಹಾರ ಆಗಿದೆಯೆಂಬ ಆರೋಪದಲ್ಲಿ ಇಡಿ ಅಧಿಕಾರಿಗಳು ಒಂದು ವಾರದಿಂದ ಕೋಲಾರ, ಬೆಂಗಳೂರಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳೆದ ವಾರ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ನಂಜೇಗೌಡರ ಮನೆ, ಕಚೇರಿಯಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆಪ್ತ ಉಲ್ವಾಡಿ ಬಾಬು ಎಂಬವರ ಮನೆಗೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

Scam takes ultimate toll on victim | The Star

ಏನಿದು ಕೊಚಿಮುಲ್ ಹಗರಣ ?

2023ರ ಸೆಪ್ಟಂಬರ್ ತಿಂಗಳಲ್ಲಿ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 272 ಹುದ್ದೆಗಳಿಗೆ ನೇಮಕಾತಿ ನಡೆಸಲು ನೋಟಿಫಿಕೇಶನ್ ಹೊರಡಿಸಲಾಗಿತ್ತು. ಆನಂತರ, ಕೋರ್ಟ್ ಮಧ್ಯಪ್ರವೇಶದಿಂದ 192 ಹುದ್ದೆಗಳ ನೇಮಕಾತಿಗೆ ತಡೆ ಬಿದ್ದಿತ್ತು. ಹಾಗಾಗಿ 81 ಹುದ್ದೆಗಳಿಗೆ ತರಾತುರಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ನವೆಂಬರ್ 5ರಂದು ಪರೀಕ್ಷೆ ನಡೆದಿತ್ತು. 75 ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎನ್ನಲಾಗಿದ್ದು, ಆನಂತರ ಕೆಲವೇ ದಿನಗಳಲ್ಲಿ ಇಂಟರ್ವ್ಯೂ ಆಗಿದ್ದಲ್ಲದೆ, ತರಬೇತಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇದೇ ವೇಳೆ, 30 ಮಂದಿ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿತ್ತು. ಇವರನ್ನು ರಾಜಕೀಯ ವ್ಯಕ್ತಿಗಳ ಶಿಫಾರಸು ಆಧರಿಸಿ ಭಾರೀ ಕಿಕ್ ಬ್ಯಾಕ್ ಪಡೆದು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಕೊಚಿಮುಲ್ ಅಧ್ಯಕ್ಷ ಮತ್ತು ಮಾಲೂರು ಶಾಸಕ ಕೆವೈ ನಂಜೇಗೌಡ ಪ್ರತಿ ಹುದ್ದೆಗೆ 20ರಿಂದ 25 ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಇದೇ ಸಂದರ್ಭದಲ್ಲಿ ಶಾಸಕ ನಂಜೇಗೌಡ ಅಕ್ರಮ ಹಣವನ್ನು ಡಾಲರ್ ಗೆ ಪರಿವರ್ತಿಸಿದ್ದಾರೆ ಎಂಬುದನ್ನು ತಿಳಿದ ಇಡಿ ಅಧಿಕಾರಿಗಳು ಹಗರಣದ ತನಿಖೆಗೆ ಎಂಟ್ರಿ ಪಡೆದಿದ್ದರು. ಡಿಸೆಂಬರ್ ಆರಂಭದಿಂದಲೂ ತನಿಖೆ ನಡೆಯುತ್ತಿದ್ದು, ಇಡಿ ಅಧಿಕಾರಿಗಳು ನಂಜೇಗೌಡರ ಕೊರಳು ಸುತ್ತಿಕೊಂಡಿದ್ದಾರೆ. ಈ ನಡುವೆ, ಪ್ರಶ್ನೆಪತ್ರಿಕೆ ತಯಾರಿಸಿದ್ದ ಮಂಗಳೂರು ವಿವಿಗೂ ನೋಟೀಸ್ ಜಾರಿಯಾಗಿತ್ತು. ಸರಿಯಾದ ಉತ್ತರ ಲಭಿಸದ ಕಾರಣ ಈಗ ದಿಢೀರ್ ದಾಳಿ ನಡೆಸಿದ್ದು ಪರೀಕ್ಷಾಂಗ ಕುಲಸಚಿವರನ್ನೇ ಗುರಿಯಾಗಿಸಿ ತಪಾಸಣೆ ಕೈಗೊಂಡಿದ್ದಾರೆ.

DK Shivakumar: Priority is to bring Congress back in karnataka, not CM seat  | Bengaluru News - Times of India

ವೈರಲ್ ಆದ ಪತ್ರಗಳಲ್ಲಿತ್ತು ಹಗರಣದ ಸುಳಿವು  

ವೈರಲ್ ಆದ ಪತ್ರಗಳಲ್ಲಿ ಅಭ್ಯರ್ಥಿಗಳ ಹೆಸರಿನ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್, ಕೋಲಾರ ಶಾಸಕ ರಮೇಶ್ ಕುಮಾರ್ ಹೆಸರಿತ್ತು. ಕೆಲವು ಕಡೆ ಡಿಕೆ, ಎಎನ್, ಎಸ್ಎನ್ ಎಂದಿದ್ದರೆ, ಎಸ್ಸಿ-ಎಸ್ಟಿ ಅಭ್ಯರ್ಥಿಗಳ ಮುಂದೆ ರಮೇಶ್ ಕುಮಾರ್ ಸರ್ ಎಂದು ಬರೆಯಲಾಗಿತ್ತು. ಇದು ಸಂಭಾವ್ಯ ಅಭ್ಯರ್ಥಿಗಳ ಹೆಸರು ಎಂದು ಆರೋಪಿಸಿ ವೈರಲ್ ಮಾಡಲಾಗಿತ್ತು. ಈ ಪತ್ರಗಳು ಮತ್ತು ಅವ್ಯವಹಾರದ ಬಗ್ಗೆ ಇಡಿ, ಐಟಿ ಮತ್ತು ಕೋಲಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಇಡಿ ಅಧಿಕಾರಿಗಳು ತನಿಖೆಯ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಪ್ರತಿ ಹುದ್ದೆಯನ್ನು 15ರಿಂದ 25 ಲಕ್ಷಕ್ಕೆ ಮಾರಾಟ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ರಾಜಕೀಯ ವ್ಯಕ್ತಿಗಳ ಶಿಫಾರಸು ಆಧರಿಸಿ ಹುದ್ದೆಗಳನ್ನು ನೀಡಲಾಗಿದೆ. ನಂಜೇಗೌಡ ಸೇರಿ ಇತರ ನಾಲ್ವರು ಒಟ್ಟು ನೇಮಕಾತಿ ಪ್ರಕ್ರಿಯೆಯನ್ನು ತಮಗೆ ಬೇಕಾದಂತೆ ಬದಲಿಸಿದ್ದಾರೆ. ಇವರು 30 ಅಭ್ಯರ್ಥಿಗಳಿಗೆ ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಪಡೆದಿದ್ದರು. ದಾಳಿಯ ಸಂದರ್ಭದಲ್ಲಿ 25 ಲಕ್ಷ ನಗದು, ಶಂಕಿತ 50 ಕೋಟಿಗೂ ಹೆಚ್ಚು ಸ್ಥಿರಾಸ್ತಿಯನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.

ಬೋರ್ಡ್ ಅನುಮತಿ ದೊರೆಯುವ ಮೊದಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿರುವ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಲು ಒಕ್ಕೂಟದ ಅಧಿಕಾರಿಗಳನ್ನು ವಿಚಾರಣೆ ಮಾಡಿದ್ದು, ಕೆಲವರ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ತನಿಖೆ ಮಂಗಳೂರಿಗೆ ವಿಸ್ತರಣೆಯಾಗಿದ್ದು, ಹಣ ಪಡೆದಿರುವುದು ಪತ್ತೆಯಾದರೆ ಬಂಧನ ಆಗುವ ಸಾಧ್ಯತೆಯೂ ಇದೆ. ಸಚ್ಚಾರಿತ್ರ್ಯದ ಹಿನ್ನೆಲೆ ಹೊಂದಿದ್ದ ಮಂಗಳೂರಿಗೂ ಈಗ ಹಗರಣದ ಕೊಳೆ ಅಂಟಿಕೊಂಡಿದೆ.

Kochimul scam, ED raids mangalore university over sale of question paper, lakhs deal suspected.  Kolar BJP MP S Muniswamy had alleged irregularities to the tune of Rs 40 crore in the recruitment to 75 posts in Kochimul. “Those involved have taken kickbacks based on salary of candidate selected.