Ravinder Pandita, Mangalore Lit Fest: ಎಲ್ಓಸಿ ದಾಟಿ ಮುಸ್ಲಿಮರು ಹೋಗಿ ಬರುತ್ತಾರೆ, ಶಾರದಾ ಪೀಠಕ್ಕೆ ಹೋಗಲು ನಮಗೆ ಬಿಡಲ್ಲ, ಶಿವರಾತ್ರಿ ಬಳಿಕ ಪಿಓಕೆ ನುಗ್ಗಲೇಬೇಕು ; ರವೀಂದರ್ ಪಂಡಿತ್ ಕರೆ 

21-01-24 09:44 pm       Mangalore Correspondent   ಕರಾವಳಿ

ದೇಶದ ಎಲ್ಲ ಸನಾತನ ಧರ್ಮೀಯರು ಕಾಶ್ಮೀರಕ್ಕೆ ಬರಬೇಕು ಎಂದು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಶಾರದಾ ಪೀಠಕ್ಕಾಗಿ ಹೋರಾಡುತ್ತಿರುವ ರವೀಂದರ್ ಪಂಡಿತ್ ಕರೆ ನೀಡಿದ್ದಾರೆ.

ಮಂಗಳೂರು, ಜ.21: ಹಿಂದಿನ ಕಾಲದಲ್ಲಿ ಕಾಂಬೋಡಿಯಾ, ಇರಾನ್ ಕಡೆಯಿಂದಲೂ ಜ್ಞಾನಾರ್ಜನೆಗೆ ಬರುತ್ತಿದ್ದ ಶಾರದಾ ದೇಶ ಇಂದು ಯಾರಿಗೂ ಬೇಡವಾಗಿದೆ. ಶಾರದಾ ಪೀಠಕ್ಕೆ ಹೋಗುವುದಕ್ಕೂ ಭಾರತವಾಗಲೀ, ಪಾಕಿಸ್ಥಾನವಾಗಲೀ ಅನುಮತಿ ಸಿಗುತ್ತಿಲ್ಲ. ಎಲ್ಓಸಿ ದಾಟಿ ಶಾರದಾ ಪೀಠ ತಲುಪಲು ದಾರಿ ಕೊಡುತ್ತಿಲ್ಲ. ಇದೇ ಶಿವರಾತ್ರಿಯ ಬಳಿಕ ನಾವು ಎಲ್ಓಸಿ ದಾಟಿ ನುಗ್ಗಲೇಬೇಕಿದೆ. ಸರ್ವಜ್ಞ ಶಾರದಾ ಪೀಠಕ್ಕಾಗಿ ನಾವು ಭಾಷಣ ಮಾಡುವುದಲ್ಲ. ಪಾದಯಾತ್ರೆ ಮಾಡಲೇಬೇಕು. ದೇಶದ ಎಲ್ಲ ಸನಾತನ ಧರ್ಮೀಯರು ಕಾಶ್ಮೀರಕ್ಕೆ ಬರಬೇಕು ಎಂದು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಶಾರದಾ ಪೀಠಕ್ಕಾಗಿ ಹೋರಾಡುತ್ತಿರುವ ರವೀಂದರ್ ಪಂಡಿತ್ ಕರೆ ನೀಡಿದ್ದಾರೆ.

ಆರನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಕಾಶ್ಮೀರ, ಶಾರದಾ ಮತ್ತು ಪಿಓಕೆ ಕುರಿತಾಗಿ ರವೀಂದರ್ ಪಂಡಿತ್, ಭಾಷಾ ಸಂಬ್ಲಿ ಉಪನ್ಯಾಸ ನೀಡಿದರು. ಸಾಮ್ರಾಟ ಅಶೋಕನ ಕಾಲದಲ್ಲಿ ಸ್ಥಾಪನೆಯಾಗಿದ್ದ ಶಾರದಾ ಪೀಠ 14ನೇ ಶತಮಾನದಲ್ಲಿ ಮುಸ್ಲಿಂ ದಾಳಿಕೋರರಿಗೆ ತುತ್ತಾಗಿತ್ತು. ಅಂದು ಶಾರದಾ ಮಾತೆಯನ್ನು ಮಾತೆಯ ವಿಗ್ರಹವನ್ನು ಶೃಂಗೇರಿಗೆ ತಂದು ರಕ್ಷಿಸಲಾಗಿತ್ತು. 1948ರಲ್ಲಿ ಶಾರದಾ ಪೀಠದ ರಕ್ಷಣೆ ಮಾಡಬಹುದಿತ್ತು. ಆದರೆ ಅದನ್ನು ನಮ್ಮನ್ನು ಆಳುವವರು ಮಾಡಿರಲಿಲ್ಲ.

2014ರಿಂದ ಭಾರತದ ಸುಪ್ರೀಂ ಕೋರ್ಟಿಗೆ ಅಹವಾಲು ಹಾಕಿದ್ದೇವೆ. 2018ರಲ್ಲಿ ಶಾರದಾ ಪೀಠದ ಪುನರ್ ಸ್ಥಾಪನೆಗೆ ಕೋರ್ಟ್ ತೀರ್ಪು ಕೊಟ್ಟಿರುವುದು ನಮಗೆ ಸಿಕ್ಕ ಗೆಲುವು. ಆದರೂ ಕರ್ತಾರ್ ಪುರಕ್ಕೆ ಹೋಗಲು ಪ್ರವಾಸಿಗರಿಗೆ ಅನುಮತಿ ನೀಡುತ್ತಾರೆ. ಶಾರದಾ ಪೀಠಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ. ಅಲ್ಲಿ ಎಲ್ಓಸಿ ದಾಟಿಕೊಂಡು ಕಾಶ್ಮೀರ ಮತ್ತು ಪಿಓಕೆಯ ಮುಸ್ಲಿಮರು ಹೋಗಿ ಬರುತ್ತಾರೆ. ಹಿಂದುಗಳಿಗೆ ಮಾತ್ರ ಈ ಅವಕಾಶ ಇಲ್ಲ. ಗಡಿಭಾಗದಿಂದ 17 ಕಿಮೀ ದೂರದ ಶಾರದಾಪೀಠವನ್ನು ಒಳಗೊಳಿಸಿ ಗಡಿ ಸ್ಥಾಪಿಸುವಂತೆ ಹೋರಾಟ ಮಾಡುತ್ತಿದ್ದೇವೆ. ನಮಗೆ ಪೂಜೆ ಮಾಡಲು ಅವಕಾಶ ಇಲ್ಲ. ಈ ದೇಶದಲ್ಲಿ ಒಂದು ದಿನವಾದ್ರೂ ಮಸೀದಿಯಲ್ಲಿ ಪ್ರಾರ್ಥನೆ ನಿಂತಿದೆಯೇ ಎಂದು ಕೇಳಿದ ರವೀಂದರ್ ಪಂಡಿತ್, ಈಗ ಕಿಶನ್ ಗಂಜ್ ಮೂಲಕ ಶಾರದಾ ಪೀಠ ತಲುಪಲು ದಾರಿ ಕಂಡುಕೊಂಡಿದ್ದೇವೆ. ಪ್ರತಿವರ್ಷ ಯಾತ್ರೆ ಹೋಗಲು ಅನುಮತಿ ನೀಡಬೇಕು. ಈ ಬಾರಿ ಜೂನ್ 5ರಂದು ಕರ್ನಾಟಕದ ಗಂಧದ ಮೂರ್ತಿಯ ಶಾರದೆಯನ್ನು ಪ್ರತಿಷ್ಠೆ ಮಾಡುತ್ತೇವೆ. ಸ್ವಾತಂತ್ರ್ಯಾ ಭಾರತದ ಮೊದಲ ಪ್ರತಿಷ್ಠೆ ರಾಮನದ್ದಾದರೆ, ಎರಡನೇ ಪ್ರತಿಷ್ಠೆ ಶಾರದೆಯದ್ದಾಗಬೇಕು.

ಫೆಬ್ರವರಿ ತಿಂಗಳಲ್ಲಿ ಮಾಘ ಸ್ನಾನ ಮಾಡಿ ಹೋರಾಟ ಆರಂಭಿಸುತ್ತೇವೆ. ಮುಸ್ಲಿಮರ ಕೈಯಲ್ಲಿದ್ದ ಸಿಖ್ ದ್ವಾರವನ್ನೂ ಮತ್ತೆ ಪಡೆದಿದ್ದು, ಶೃಂಗೇರಿ ಮಠದ ಯೋಗದಾನದಲ್ಲಿ ಭವ್ಯ ಮಂದಿರ ಮಾಡಿದ್ದೇವೆ. ಶಾರದಾ ಪೀಠಕ್ಕಾಗಿ ಇದೇ ಶಿವರಾತ್ರಿಯ ಬಳಿಕ ಎಲ್ಓಸಿ ದಾಟಿ ಮುನ್ನುಗ್ಗಲಿದ್ದೇವೆ. ಅಲ್ಲಿ ಸಿನಿಮಾ ಶೂಟಿಂಗ್ ಮಾಡುವುದಕ್ಕೂ ಅವಕಾಶ ನೀಡಬೇಕು. ಆಸ್ತಿಕ ಭಕ್ತರು ಪೂಜೆ ಮಾಡುವುದಕ್ಕೂ ಅವಕಾಶ ಸಿಗಬೇಕು. ಅದಾಗಬೇಕಿದ್ದರೆ, ಸನಾತನ ಧರ್ಮೀಯರೆಲ್ಲ ಸೇರಿ ಕಾಶ್ಮೀರಕ್ಕೆ ಬರಬೇಕು ಎಂದು ರವೀಂದರ್ ಕೇಳಿಕೊಂಡರು.

ಭಾರತೀಯ ಜ್ಞಾನಕ್ಕೆಲ್ಲ ಉಗಮ ಶಾರದಾ ದೇಶ 

ಕಾಶ್ಮೀರಿ ನಟಿಯೂ ಆಗಿರುವ ಭಾಷಾ ಸಾಂಬ್ಲಿ ಮಾತನಾಡಿ, ಕರ್ನಾಟಕವನ್ನು ಆಳಿದ್ದ ರಾಜಾ ವಿಕ್ರಮಾದಿತ್ಯನ ಚರಿತೆಯನ್ನು ಬರೆದ ಮಹಾಕವಿ ಬಿಲ್ಹಣ ಶಾರದಾ ದೇಶದ ಬಗ್ಗೆ ಉಲ್ಲೇಖ ಮಾಡುತ್ತಾನೆ. ಎಲ್ಲಿ ವಿದ್ಯಾ ಸರಸ್ವತಿ ನೆಲೆಸಿದ್ದಾಳೋ, ಎಲ್ಲಿ ಮಹಿಳೆಯರು ಕಾಶ್ಮೀರಿ ಜೊತೆಗೆ ಕನಿಷ್ಠ ಮೂರು ಭಾಷೆಯನ್ನು ಮಾತನಾಡುತ್ತಾರೋ ಅದನ್ನು ಶಾರದಾ ದೇಶವೆಂದು ಹೇಳುತ್ತಾನೆ. ಕಾಶ್ಮೀರಿ, ಸಂಸ್ಕೃತ, ಪ್ರಾಕೃತವನ್ನು ಮಾತನಾಡುವ, ಬರೆಯುವ ಮಹಿಳೆಯರು ಇರುವುದು ಕಾಶ್ಮೀರದಲ್ಲಿ ಮಾತ್ರ ಎನ್ನುತ್ತಾನೆ. ಸೌಂದರ್ಯ ಶಾಸ್ತ್ರ, ನಾಟ್ಯಶಾಸ್ತ್ರ, ರಸ ಸಿದ್ಧಾಂತ, ಧ್ವನಿಶಾಸ್ತ್ರ, ಕಲಾಶಾಸ್ತ್ರ, ಏನೆಲ್ಲ ಭಾರತೀಯ ಜ್ಞಾನಗಳಿವೆಯೋ ಇವೆಲ್ಲದಕ್ಕೂ ಉಗಮ ಸ್ಥಾನ ಶಾರದಾ ದೇಶ ಎಂದರು.  

14ನೇ ಶತಮಾನದಲ್ಲಿ ಬೋಂದಾ ದೇವಿ ಕಾಶ್ಮೀರಿ ರಾಜಕುಮಾರಿಯಾಗಿದ್ದಳು. ಜೀವನದಲ್ಲಿ ವೈರಾಗ್ಯ ಉಂಟಾಗಿ ಕರ್ನಾಟಕಕ್ಕೆ ಆಗಮಿಸಿ ಬಸವಣ್ಣನ ಶಿಷ್ಯತ್ವ ಸ್ವೀಕರಿಸಿದ್ದಳು. ಹಾಗಾಗಿ ಕರ್ನಾಟಕಕ್ಕೂ ಕಾಶ್ಮೀರಕ್ಕೂ ಸಂಬಂಧ ಇದೆ. ಪರಶುರಾಮ ಶ್ರೀರಾಮನನ್ನು ಪರೀಕ್ಷೆ ಮಾಡಲು ಹೋಗಿ ತಪಬಲ ಕಳಕೊಂಡು ರಾಮರಾಧನ್ ಪರ್ವತದಲ್ಲಿ ಮತ್ತೆ ತಪಸ್ಸು ಮಾಡುತ್ತಾನೆ. ಹರ್ಮುಖ್ ಪರ್ವತ ಅಂದರೆ, ಕಾಶ್ಮೀರದ ಕೈಲಾಸ ಪರ್ವತ ಶಿಖರಗಳ ಬುಡದಲ್ಲಿರುವ ಸಣ್ಣ ಗ್ರಾಮವೇ ರಾಮರಾಧನ್. ರಾಮನ ಪ್ರತಿಷ್ಠೆ ಆಗುತ್ತಿರುವ ಈ ಹೊತ್ತಿನಲ್ಲಿ ಅಲ್ಲಿನ ಜನರು ಪ್ರಸನ್ನ ವದನರಾಗಿದ್ದಾರೆ. ನೀವು ರಾಮಭಕ್ತರೇ ಆಗಿದ್ದರೆ ಕ್ಷೀರ್ ಭವಾನಿ ಕ್ಷೇತ್ರಕ್ಕೆ ಬರಬೇಕು. ರಾವಣ ಲಂಕಾದಲ್ಲಿ ಶಾಮಾ ಭಗವತಿಯನ್ನು ತಪಸ್ಸು ಮಾಡುತ್ತಾನೆ. ಕಾಶ್ಮೀರಕ್ಕೆ ಬಂದು ನೆಲೆಗೊಳ್ಳುವ ಶಾಮಾ ಭಗವತಿಯೇ ಕ್ಷೀರ್ ಭವಾನಿ ಕ್ಷೇತ್ರವಾಗಿದೆ. ಈಕೆಯನ್ನು ರಾಮನೂ ಆರಾಧನೆ ಮಾಡಿದ್ದ ಎಂದು ಪುರಾಣ ಹೇಳುತ್ತದೆ. ಬಾರಾಮುಲ್ಲಾ ಶಿವನ ತ್ರಿಶೂಲದಿಂದ ಹುಟ್ಟಿದ್ದು ಕೋಟಿತೀರ್ಥಗಳ ಅಪಾರ ಶಕ್ತಿಯಿರುವ ಜಾಗ ಎಂದು ಪುರಾಣ, ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲುವಂತೆ ಸ್ವತಃ ಕಾಶ್ಮೀರಿಯೂ ಆಗಿರುವ ಭಾಷಾ ಸಾಂಬ್ಲಿ ಉಪನ್ಯಾಸ ನೀಡಿದರು. ಹರ್ಷ ಭಟ್ ಗೋಷ್ಠಿಯನ್ನು ನಿರ್ವಹಿಸಿದರು.

Ravinder Pandita, Founder & Head of Save Sharda Committee Kashmir speaks at Mangalore Lit Fest.